ವರನ ಮನೆಯಲ್ಲಿ ವಧುವಿನ ಆಭರಣ ಕಳವು; ಸಿಕ್ಕಿಬಿದ್ದಳು ಚಾಲಾಕಿ!
ಹೊನ್ನಾವರ, ಜುಲೈ 07; ಮದುವೆಯ ದಿನವೇ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿಯನ್ನು ಪತ್ತೆ ಹಚ್ಚಿರುವ ಹೊನ್ನಾವರ ಪೊಲೀಸರು, ಕದ್ದ ಆಭರಣವನ್ನು ವಶಪಡಿಸಿಕೊಂಡು ಆರೋಪಿಯನ್ನಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೊನ್ನಾವರ ಬಂದರು ರಸ್ತೆಯ ಅಸೂರಖಾನ್ ಗಲ್ಲಿಯ ಶಾಹೀರಾಬಾನು ಪಾಲಕ್ ಕೋಂ ಸಾಧಿಕ್ ಶೇಕ್ (41) ಎಂದು ಗುರುತಿಸಲಾಗಿದೆ. ಏಪ್ರಿಲ್ 4ರಂದು ಮದುವೆಯಾಗಿದ್ದ ಮುಶಾಹೀನ್ ವರನ ಮನೆಯಿರುವ ಹೊನ್ನಾವರ ಪಟ್ಟಣದ ಗಾಂಧಿನಗರಕ್ಕೆ ಬಂದಾಗ ಮದುವೆ ಶಾಸ್ತ್ರಗಳನ್ನು ಪೂರೈಸಿ ಸ್ನಾನಗೃಹಕ್ಕೆ ಹೋಗುವಾಗ ಬೆಡ್ ರೂಮಿನಲ್ಲಿ ತೆಗೆದಿಟ್ಟು ಹೋಗಿದ್ದ ಆಭರಣ ವಾಪಸ್ ಬಂದು ನೋಡುವಷ್ಟರಲ್ಲಿ ಮಾಯವಾಗಿತ್ತು.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಗೆ ಕರ್ಕಿಕೋಡಿಯ ಅಬ್ದುಲ್ ಸತ್ತಾರ್ ಮೈನುದ್ದೀನ್ ಶೇಖ್ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಬಂಗಾರದ ಆಭರಣ ಕಳ್ಳತನವಾಗಿದೆ ಎಂಬ ಸಮಯದಲ್ಲಿ ಮನೆಯಲ್ಲಿ ಇದ್ದವರ ಮಾಹಿತಿ ಕಲೆ ಹಾಕಿ ಎಲ್ಲಾ ಆಯಾಮಗಳಿಂದಲೂ ಕೂಲಂಕುಷವಾಗಿ ಪರಿಶೀಲಿಸಿದಾಗ ಸಿಕ್ಕ ಸುಳಿವುಗಳು ಶಾಹೀರಾಬಾನು ಅತ್ತಲೇ ಬೆರಳು ಮಾಡುತ್ತಿದ್ದವು.

ನಾನವಳಲ್ಲ ನಾನವಳಲ್ಲ; ಮದುಮಗಳಿಗೆ ದೂರದ ಸಂಬಂಧಿಯೂ ಆಗಿದ್ದ ಶಾಹೀರಾಬಾನು ಕದ್ದ ಬಂಗಾರದ ಆಭರಣವನ್ನು ಹುಡುಗನೊಬ್ಬನ ಕೈಗೆ ಕೊಟ್ಟು ಆತನ ಮೂಲಕ ಬ್ಯಾಂಕ್ನಲ್ಲಿ ಅಡವಿಟ್ಟು ಹಣವನ್ನೂ ಪಡೆದುಕೊಂಡಿದ್ದು ತನಿಖೆಯಲ್ಲಿ ಬಹಿರಂಗವಾಗಿದೆ.
ಸಾಕಷ್ಟು ಸಾಕ್ಷಿಗಳನ್ನು ಕಲೆಹಾಕಿದಮೇಲೆಯೇ ಆರೋಪಿಯ ತನಿಖೆಗೆ ಪೊಲೀಸರು ಮುಂದಾದಾಗಲೂ ನಾನವಳಲ್ಲ, ನಾನಂತವಳಲ್ಲ, ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವಾದಿಸುತ್ತ ಬಂದಾಕೆ ತಾನು ಈ ಕೇಸ್ನಲ್ಲಿ ಸಿಕ್ಕಿಹಾಕಿಕೊಳ್ಳುವುದು ಪಕ್ಕಾ ಅನ್ನಿಸಿದಾಗ ಆಭರಣ ಮನೆಯೆದುರು ಬಿದ್ದಿತ್ತು ಎಂದು ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ಯತ್ನಿಸಿದ್ದಳು.
ಶಾಹೀರಾಬಾನುನಂತ ಸಾವಿರಾರು ಮಂದಿಯ ನವರಂಗಿ ಆಟವನ್ನು ಕಂಡಿದ್ದ ಪೊಲೀಸರು ಪಟ್ಟು ಸಡಿಲಿಸದೇ ಸಾಕ್ಷ್ಯಗಳನ್ನು ಕಲೆಹಾಕಿ ಕೇಡಿ ಲೇಡಿಯ ಕೈಗೆ ಕೋಳ ತೊಡಿಸಿ ಕಂಬಿಯ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಪ್ರಕರಣವನ್ನು ಬೇಧಿಸಿದ ಸಿ.ಪಿ.ಐ ಶ್ರೀಧರ. ಎಸ್. ಆರ್ ನೇತೃತ್ವದ, ಅಪರಾಧ ವಿಭಾಗದ ಪಿ.ಎಸ್.ಐ ಸಾವಿತ್ರಿ ನಾಯಕ, ಪಿ.ಎಸ್.ಐ(ಕಾ.ಸು) ಶಶಿಕುಮಾರ್ ಸಿ. ಆರ್ ಮುಂತಾದವರ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications