ನಿಧಿಗಾಗಿ ಅರಣ್ಯ ಪ್ರದೇಶದಲ್ಲಿ ಶೋಧ: 15 ಅಡಿ ಬಾವಿ ತೆಗೆದ ನಾಲ್ವರು ವಶಕ್ಕೆ
ಕಾರವಾರ, ಡಿಸೆಂಬರ್ 26: ದೇವರು ಕನಸಿನಲ್ಲಿ ಬಂದು ಹೇಳಿದೆ ಎಂದು ನಂಬಿಸಿ ನಿಧಿಗಾಗಿ ಅರಣ್ಯದಲ್ಲಿ ಬಾವಿ ತೆಗೆಯುತ್ತಿದ್ದ ನಾಲ್ವರನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಬಳಿ ನಡೆದಿದೆ.
ರಾಣೆಬೆನ್ನೂರು ಮೂಲದ, ಹಾಲಿ ಶಿರವಾಡ ನಿವಾಸಿ ಹಿದಾಯತ್ ಅಬ್ದುಲ್ ಘನಿ, ರಸ್ತುಂ ರಜಾಕ್ ಸಾಬ್, ಹರ್ಷದ್ ಅಲಿ ಅನ್ಸಾರಿ ಹಾಗೂ ಸರ್ಫರಾಜ್ ಅಬೀಬುಲ್ಲಾ ಸಲ್ಮಾನಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳು ದೇವರು ಕನಸಿನಲ್ಲಿ ಬಂದು ಹೇಳಿದೆ ಎಂದು ನಂಬಿಸಿ ಅರಣ್ಯದಲ್ಲಿ ನಿಧಿಗಾಗಿ ಬಾವಿ ತೆಗೆಯುತ್ತಿದ್ದರು. ಈ ವಿಚಾರವನ್ನು ಅಪರಿಚಿತರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬೇಳೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೆಲವರು ಬಾವಿ ತೋಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಸುಮಾರು 15 ಅಡಿಯಷ್ಟು ಬಾವಿ ತೆಗೆದಿದ್ದು, ಬಾವಿಯ ಮೇಲ್ಭಾಗದಲ್ಲಿ ಕಲ್ಲುಗಳಿಗೆ ಕುಂಕುಮ- ಹೂವುಗಳನ್ನು ಹಾಕಿ ಪೂಜೆ ಸಲ್ಲಿಸಿದ ರೀತಿ ಕಂಡುಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು, ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಪ್ರಕರಣದ ಪ್ರಮುಖ ಆರೋಪಿ ಹಿದಾಯತ್ ನನ್ನ ಅರಣ್ಯಾಧಿಕಾರಿಗಳು ಕೇಳಿದಾಗ ತನಗೆ ಶಿರಸಿ ಮಾರಿಯಮ್ಮ ಕನಸಲ್ಲಿ ಬಂದು ಇಲ್ಲಿ ಬಾವಿ ತೆಗೆದು, ಈ ಬಾವಿಯ ನೀರಿನಿಂದ ಅಭಿಷೇಕ ಮಾಡಲು ತಿಳಿಸಿದ್ದಳು. ಹೀಗಾಗಿ ಬಾವಿ ತೆಗೆದಿದ್ದೇವೆ, ನಾವೇನೂ ತಪ್ಪು ಮಾಡಿಲ್ಲ. ಯಾವುದೇ ಮರ ಕಡಿದಿಲ್ಲ ಎಂದು ವಾದ ಮಾಡಿದ್ದಾನೆ ಎನ್ನಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ನಿಧಿ ಆಸೆಗಾಗಿ ಬಾವಿ ತೆಗೆದಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಸದ್ಯ ನಾಲ್ವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಬಾವಿ ತೆಗೆಯಲು ಬಳಸಿದ್ದ ಹಾರೆ, ಪಿಕಾಸು, ಹಗ್ಗ ಇತ್ಯಾದಿ ಸಲಕರಣೆಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಬಗ್ಗೆ ತನಿಖೆ ಮುಂದುವರಿಸಿರುವುದಾಗಿ ಆರ್ಎಫ್ಓ ರಾಘವೇಂದ್ರ ತಿಳಿಸಿದ್ದಾರೆ.












Click it and Unblock the Notifications