ಉಪ ಚುನಾವಣೆ ಫಲಿತಾಂಶ ಪ್ರಕಟ: ಜೆಡಿಎಸ್ ತೊರೆದು ಬಿಜೆಪಿ ಸೇರಿದ ನಾಯಕ!
ಕಾರವಾರ, ಡಿಸೆಂಬರ್ 02: ಕರ್ನಾಟಕದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಮೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಿಕೊಂಡು ಬರಲು ವಿಫಲವಾಗಿದ್ದಾರೆ. ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ? ಎಂಬ ಸುದ್ದಿಗಳ ನಡುವೆಯೇ ಪಕ್ಷದ ನಾಯಕರೊಬ್ಬರು ಬಿಜೆಪಿ ಸೇರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೀನದಯಾಳ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ, ಜೆಡಿಎಸ್ ನಾಯಕ ಎಸ್. ಎಲ್. ಘೋಟ್ನೆಕರ್ ಬಿಜೆಪಿ ಸೇರಿದರು. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಸ್. ಎಲ್. ಘೋಟ್ನೆಕರ್ ಮತ್ತು ಅವರ ಅಪಾರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಕೆಲವು ದಿನಗಳ ಹಿಂದೆಯೇ ಎಸ್. ಎಲ್. ಘೋಟ್ನೆಕರ್ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದರು. ಈ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಮಾತುಕತೆ ಸಹ ನಡೆಸಿದ್ದರು. ಈಗ ಅಧಿಕೃತವಾಗಿ ಅವರು ಬೆಂಬಲಿಗರ ಜೊತೆ ಪಕ್ಷವನ್ನು ಸೇರಿಕೊಂಡಿದ್ದಾರೆ.
ಎಸ್. ಎಲ್. ಘೋಟ್ನೆಕರ್ ಹೇಳಿಕೆ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಬಳಿಕ ಮಾತನಾಡಿದ್ದ ಎಸ್. ಎಲ್. ಘೋಟ್ನೆಕರ್, "ಜೆಡಿಎಸ್ ಪಕ್ಷದ ಮೇಲೆ ನನಗೆ ಬೇಜಾರಿಲ್ಲ. ಆದರೆ ಹಳಿಯಾಳ ಕ್ಷೇತ್ರದ ನನ್ನ ಬೆಂಬಲಿಗರು ಬಿಜೆಪಿ ಕಡೆ ಒಲವು ಹೊಂದಿದ್ದಾರೆ. ಈಗಾಗಲೇ ಹಲವರು ಬಿಜೆಪಿ ಸೇರಿದ್ದಾರೆ" ಎಂದು ಹೇಳಿದ್ದರು.
"ನಾನು ಆರ್ಎಸ್ಎಸ್ ಕಾರ್ಯಕರ್ತನಾಗಿದ್ದೆ. ಹಳಿಯಾಳ ಭಾಗದ ಬಿಜೆಪಿ ನಾಯಕರು ಸಹ ನನ್ನ ಪಕ್ಷ ಸೇರ್ಪಡೆಗೆ ಒಪ್ಪಿಗೆ ನೀಡಿದ್ದಾರೆ. ಈ ಹಿಂದೆ ನಾನು ಕಾಂಗ್ರೆಸ್ ತೊರೆದಾಗಲೇ ಬಿಜೆಪಿ ಸೇರಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಜೆಡಿಎಸ್ ಸೇರುವಂತೆ ಆಯಿತು. ಈಗ ಬಿಜೆಪಿ ಸೇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಪ್ರಯತ್ನ ನಡೆಸುತ್ತೇನೆ" ಎಂದು ತಿಳಿಸಿದ್ದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, "ಎಸ್. ಎಲ್. ಘೋಟ್ನೆಕರ್ ಪಕ್ಷ ಸೇರ್ಪಡೆ ಕುರಿತು ಪಕ್ಷದ ನಾಯಕರ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ನನ್ನ ಗೆಲುವಿನಲ್ಲಿ ಸುನೀಲ ಹೆಗಡೆ ಜೊತೆಗೆ ಎಸ್. ಎಲ್. ಘೋಟ್ನೆಕರ್ ಅವರ ಸಹಕಾರವೂ ಇದೆ. ಮರಾಠ ಸಮುದಾಯದ ನಾಯಕರಾದ ಅವರು ಬಿಜೆಪಿ ಸೇರುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ" ಎಂದು ಹೇಳಿದ್ದಾರೆ.
2023ರಲ್ಲಿ ಎಸ್. ಎಲ್. ಘೋಟ್ನೆಕರ್ ಕಾಂಗ್ರೆಸ್ ತೊರೆದಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾದ ಬಿಜೆಪಿ ಟಿಕೆಟ್ ಅವರಿಗೆ ನೀಡಿ, ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದರು. 2023ರ ಚುನಾವಣೆಯಲ್ಲಿ ಆರ್. ವಿ. ದೇಶಪಾಂಡೆ ಬದಲು ಕಾಂಗ್ರೆಸ್ ಟಿಕೆಟ್ಗೆ ಸುನೀಲ್ ಹೆಗಡೆ, ಎಸ್. ಎಲ್. ಘೋಟ್ನೆಕರ್ ಆಕಾಂಕ್ಷಿಯಾಗಿದ್ದರು. ಆದರೆ ಅವರು ಪಕ್ಷ ತೊರೆದ ಬಳಿಕ ಆರ್. ವಿ. ದೇಶಪಾಂಡೆ ನಿಟ್ಟುಸಿರು ಬಿಟ್ಟಿದ್ದರು.
ಕಾಂಗ್ರೆಸ್ ಟಿಕೆಟ್ಗಾಗಿ ಪಟ್ಟು ಹಿಡಿದ್ದ ಎಸ್. ಎಲ್. ಘೋಟ್ನೆಕರ್ ಟಿಕೆಟ್ ಸಿಗುವುದಿಲ್ಲ ಎಂದು ಖಾತ್ರಿಯಾದಾಗ ಬೆಂಬಲಿಗರ ಬೃಹತ್ ಸಭೆಯನ್ನು ನಡೆಸಿದ್ದರು. ಬಳಿಕ ಕಾಂಗ್ರೆಸ್ ಬಿಡುವ ತೀರ್ಮಾನವನ್ನು ಘೋಷಣೆ ಮಾಡಿದ್ದರು. ಆದರೆ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ವಿಫಲವಾಗಿತ್ತು.
ಹಳಿಯಾಳ ಕ್ಷೇತ್ರದ ಮರಾಠ ಸಮುದಾಯದ ಪ್ರಭಾವಿ ನಾಯಕ ಎಸ್. ಎಲ್. ಘೋಟ್ನೆಕರ್ ಎರಡು ಬಾರಿ ಎಂಎಲ್ಸಿಯಾಗಿದ್ದರು. ಜಿಲ್ಲಾ ಕೆಡಿಸಿ ಬ್ಯಾಂಕ್ನಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆದರೆ ಎಸ್. ಎಲ್. ಘೋಟ್ನೆಕರ್ ಬಿಜೆಪಿ ಸೇರ್ಪಡೆಗೆ ಮಾಜಿ ಶಾಸಕರ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications