ಕುಮಟಾದಲ್ಲಿ ಸಿಕ್ಕಿದ್ದು ಡಮ್ಮಿ ಬಾಂಬ್; ಕಡಿಮೆಯಾಗದ ಆತಂಕ, ಪೊಲೀಸರ ತನಿಖೆ ಚುರುಕು
ಕಾರವಾರ, ಅಕ್ಟೋಬರ್ 28: ಉತ್ತರ ಕನ್ನಡ ಜಿಲ್ಲೆ ಕುಮಟಾ ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಜೆ ಪತ್ತೆಯಾಗಿದ್ದ ಬಾಂಬ್ ಮಾದರಿಯ ವಸ್ತುವನ್ನು ಡಮ್ಮಿ/ ಹುಸಿ ಬಾಂಬ್ ಎಂದು ಖಚಿತಪಡಿಸಲಾಗಿದೆ.
ಮಂಗಳೂರಿನಿಂದ ಬಂದಿದ್ದ ಬಾಂಬ್ ನಿಷ್ಕ್ರಿಯ ದಳ ಡಮ್ಮಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಸಾರ್ವಜನಿಕರಲ್ಲಿದ್ದ ಆತಂಕವನ್ನು ಕೊಂಚ ದೂರ ಮಾಡಿದ್ದಾರೆ.
ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ನ ಹಿಂಭಾಗದ 100- 150 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಥೇಟ್ ಬಾಂಬ್ ಅನ್ನೇ ಹೋಲುವ ವಸ್ತು ಪತ್ತೆಯಾಗಿತ್ತು. ಈ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ಪತ್ತೆಯಾದ ಪ್ರದೇಶದ ಸಮೀಪದಲ್ಲೇ ರೈಲ್ವೇ ನಿಲ್ದಾಣ ಇರುವ ಹಿನ್ನಲೆ ಕುಮಟಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತೀವ್ರ ಶೋಧ ಕೈಗೊಂಡು ಬಿಗಿ ಭದ್ರತೆ ವಹಿಸಿದ್ದಾರೆ.

ಬುಧವಾರ ಸಂಜೆ ವೇಳೆ ವಾಯುವಿಹಾರಕ್ಕೆ ಬಂದ ಕೆಲವರು ಕಾಲೇಜು ಹಿಂಭಾಗದಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಬಾಂಬ್ ರೂಪದಲ್ಲಿರುವ ವಸ್ತುವನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾಲೇಜ್ ಸುತ್ತಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ, ಶ್ವಾನದಳ, ಕಾರವಾರದಿಂದ ಬಂದಿದ್ದ ಆ್ಯಂಟಿ ಸಬೋಟೇಜ್ ಚೆಕ್ ಟೀಂ (ASC) ಕೂಡ ಸ್ಥಳದಲ್ಲಿ ಬಿಡುಬಿಟ್ಟಿತ್ತು. ಸಂಶಯಾಸ್ಪದ ವಸ್ತು ನೋಡಲು ಐಇಡಿ ಬಾಂಬ್ ಮಾದರಿಯಲ್ಲಿ ಕಾಣುತ್ತಿದ್ದು, ಬಾಂಬ್ಗೆ ಅಳವಡಿಸಿದಂತೆ ವಯರ್ಗಳು ಇರುವುದು ಕಂಡುಬಂದಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸಂಶಯಾಸ್ಪದ ವಸ್ತುವಿನ ಬಳಿ ಯಾರೂ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ಆದರೆ ಮಂಗಳೂರಿನಿಂದ ಬಂದಿದ್ದ ಬಾಂಬ್ ನಿಷ್ಕ್ರಿಯ ದಳ ಮಧ್ಯರಾತ್ರಿಯ ಹೊತ್ತಿಗೆ ಪತ್ತೆಯಾದ ವಸ್ತು ಬಾಂಬ್ ಅಲ್ಲ, ಡಮ್ಮಿ/ ಹುಸಿ ಬಾಂಬ್ ಎನ್ನುವುದನ್ನು ದೃಢಪಡಿಸಿದೆ. ಈ ವಸ್ತು ನೋಡಲು ಥೇಟ್ ಬಾಂಬ್ನಂತೇ ಇದ್ದು, ಪಿವಿಸಿ ಪೈಪ್, ಕೇಬಲ್ ಹಾಗೂ ಬ್ಯಾಟರಿ ಬಳಸಿ ಇದನ್ನು ತಯಾರಿಸಲಾಗಿದೆ. ಆದರೆ ಸ್ಫೋಟಕ ವಸ್ತುಗಳು ಮಾತ್ರ ಇದರಲ್ಲಿಲ್ಲ. ಹೀಗಾಗಿ ಇದನ್ನು ಯಾರು, ಯಾತಕ್ಕಾಗಿ ತಯಾರಿಸಿದ್ದರು ಎಂಬ ಬಗ್ಗೆ ಪೊಲೀಸರು ತೀವ್ರ ಶೋಧ ಕಾರ್ಯಕ್ಕಿಳಿದಿದ್ದಾರೆ. ಅರಣ್ಯ ಪ್ರದೇಶದಲ್ಲಿ, ಕಾಲೇಜಿನ ಬಳಿ, ರೈಲ್ವೆ ನಿಲ್ದಾಣ ಹಾಗೂ ಹಳಿಯ ಅನತಿ ದೂರದಲ್ಲಿ ಈ ರೀತಿ ಡಮ್ಮಿ ಬಾಂಬ್ ಇಟ್ಟಿರುವುದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಈಗಾಗಲೇ ಬುಧವಾರ ಮಧ್ಯರಾತ್ರಿಯೇ ಕರಾವಳಿಯ ಎಲ್ಲಾ ತಾಲೂಕುಗಳಲ್ಲೂ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಎಲ್ಲಿಯೂ ಏನೂ ದೊರೆತಿಲ್ಲ. ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಈ ವಿಚಾರವಾಗಿ ಅಲರ್ಟ್ ಆಗಿರುವಂತೆ ಕೂಡ ಸೂಚಿಸಲಾಗಿದೆ.

ವಿಷಯ ತಿಳಿದು ಬುಧವಾರ ಕುಮಟಾಕ್ಕೆ ತೆರಳಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಭದ್ರಿನಾಥ್ ಈವರೆಗೂ ಅಲ್ಲಿಯೇ ಬೀಡುಬಿಟ್ಟಿದ್ದಾರೆ. ಸಿಕ್ಕ ವಸ್ತು ಡಮ್ಮಿ ಬಾಂಬ್ ಎಂದು ಖಚಿತಗೊಂಡರೂ ಸಹ, ಅದನ್ನು ತಯಾರಿಸಿದ್ದು ಯಾಕೆ ಹಾಗೂ ಯಾರು ಎಂಬುದು ಪತ್ತೆಯಾಗುವವರೆಗೂ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಲು ಕೂಡ ಸಾಧ್ಯವಿಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು.
ಇತ್ತೀಚಿನ ಕೆಲ ವರ್ಷಗಳಲ್ಲಿ ಜಿಲ್ಲೆಯ ಕರಾವಳಿಯಲ್ಲಿ ಅನುಮಾನಾಸ್ಪದ ಸ್ಯಾಟಲೈಟ್ ಕರೆಗಳು ಸಂಪರ್ಕಗೊಂಡಿದ್ದವು. ಅದರಲ್ಲೂ ಕುಮಟಾ ವ್ಯಾಪ್ತಿಯಲ್ಲಿ ಕೂಡ ಕರೆ ಸಂಪರ್ಕಗೊಂಡು, ಪೊಲೀಸರು ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾಪಸ್ಸಾಗಿರುವ ಹಿನ್ನಲೆ ಕೂಡ ಇರುವುದರಿಂದ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications