"ಡ್ರಗ್ ತನಿಖೆ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗದಿರಲಿ"
ಉತ್ತರ ಕನ್ನಡ, ಸೆಪ್ಟೆಂಬರ್ 16: ಡ್ರಗ್ಸ್ ತನಿಖೆ ಕೇವಲ ಸ್ಯಾಂಡಲ್ ವುಡ್ ಗೆ ಸೀಮಿತವಾಗದೇ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ರಾಜ್ಯ ಹಾಗೂ ದೇಶದಿಂದಲೇ ಮಾದಕ ವಸ್ತುಗಳನ್ನು ಹೊರಗೆ ಹಾಕಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ದಾಂಡೇಲಿಯಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನಿಂದಲೂ ಅಕ್ರಮವಾಗಿ ಗಾಂಜಾ ಸಾಗಾಟ ನಡೆಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಿಂದೆಯೇ ಒತ್ತಾಯಿಸಿದ್ದೆ. ಹಳಿಯಾಳ, ದಾಂಡೇಲಿ, ಗೋಕರ್ಣ, ಶಿರಸಿ ಭಾಗದಲ್ಲೂ ಅಕ್ರಮವಾಗಿ ಗಾಂಜಾ ಪೂರೈಕೆಯಾಗುತ್ತಿದೆ. ಇಂತಹ ಮಾದಕ ವ್ಯಸನಗಳಿಂದ ಯುವಜನತೆ ಹಾಳಾಗುತ್ತಿದೆ ಎಂದರು.
ಇದೀಗ ರಾಜ್ಯದಲ್ಲಿ ಡ್ರಗ್ಸ್ ವಿಚಾರದಲ್ಲಿ ತನಿಖೆ ತೀವ್ರಗೊಂಡಿರುವುದು ಉತ್ತಮ ಬೆಳವಣಿಗೆ ಇಂತಹ ಮಾದಕ ವಸ್ತುಗಳ ಸಾಗಾಟ, ಮಾರಾಟ ಅಥವಾ ಬಳಕೆ ಮಾಡುವುದು ಯಾರೇ ಆಗಿದ್ದರೂ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಂದು ದೇಶದಲ್ಲಿ ಕರ್ನಾಟಕ ಎರಡನೇಯ ಸ್ಥಾನಕ್ಕೇರಿದೆ ಎಂದು ಕೂಡ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.
ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಿದ್ದಾಗ ಕೊರೊನಾ ನಿಯಂತ್ರಣದಲ್ಲಿದೆ ಎಂದು ರಾಜ್ಯ ಸರ್ಕಾರ ಗಂಭೀರತೆ ಮರೆತಿತ್ತು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗುತ್ತಿಲ್ಲ. ಇದರಿಂದಾಗಿ ಹೃದಯ, ಕಿಡ್ನಿ, ಡಯಾಲಿಸಿಸ್, ಕ್ಯಾನ್ಸರ್ ಸೇರಿದಂತೆ ಉಳಿದ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಕ್ರಮ ಸಾಕಾಗುತ್ತಿಲ್ಲ. ಇನ್ನಷ್ಟು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ. ಕೊರೊನಾ ಹೆಸರಿನಲ್ಲಿ ಸರ್ಕಾರದಿಂದ ಅವ್ಯವಹಾರವಾಗಿರುವ ಕುರಿತು ಆರೋಪಗಳು ಕೇಳಿಬಂದಾಗ ಈ ಬಗ್ಗೆ ಗಂಭೀರ ತನಿಖೆಯನ್ನು ನಡೆಸಿದ್ದರೆ ಸರ್ಕಾರ ಮಾದರಿ ಎನಿಸಿಕೊಳ್ಳುತ್ತಿತ್ತು. ಆದರೆ ಸರ್ಕಾರ ಈ ವಿಚಾರವನ್ನು ನಿರ್ಲಕ್ಷ್ಯ ಮಾಡಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.












Click it and Unblock the Notifications