ಕಾರವಾರ: ಸೀಬರ್ಡ್ ಪ್ರಾಜೆಕ್ಟ್’ನ ಡಿಜಿ ಕೊರೊನಾಕ್ಕೆ ಬಲಿ
ಕಾರವಾರ, ಡಿಸೆಂಬರ್ 15: 'ಪ್ರಾಜೆಕ್ಟ್ ಸೀಬರ್ಡ್'ನ ಮಹಾನಿರ್ದೇಶಕ, ನೌಕಾಪಡೆಯ ಅತಿ ಹಿರಿಯ ಜಲಾಂತರ್ಗಾಮಿ ನಾವಿಕ ವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ಮಂಗಳವಾರ ಮುಂಜಾನೆ ಕೋವಿಡ್ ಸಂಬಂಧಿತ ತೊಂದರೆಗಳಿಂದಾಗಿ ನಿಧನರಾದರು.
10 ದಿನಗಳ ಹಿಂದೆ ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆದಿದ್ದ ಅವರಿಗೆ ಕೊರೊನಾ ವರದಿ ಕೂಡ ನೆಗೆಟಿವ್ ಬಂದಿತ್ತು. ಆದರೆ, ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಂಡುಬಂದು ನವದೆಹಲಿಯ ಬೇಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ 'ಮೆರಿಟೈಮ್ ಥಿಯೇಟರ್ ಕಮಾಂಡ್'
ದೇಶದ ಅತಿದೊಡ್ಡ ನೌಕಾನೆಲೆಯಾದ ಕಾರವಾರ ಐಎನ್ಎಸ್ ಕದಂಬ ನಿರ್ಮಾಣದ ಭಾಗವಾದ 'ಸೀಬರ್ಡ್' ಯೋಜನೆಯ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು 'ಗ್ರೇ ಡಾಲ್ಫಿನ್' ಅಂತಲೇ ಕರೆಯುತ್ತಿದ್ದರು. ಜಲಾಂತರ್ಗಾಮಿ ನಾವಿಕರ ಪೈಕಿ ಅತಿ ಹಿರಿಯರಾಗಿರುವ ಇವರು, ಹಲವು ಜಲಾಂತರ್ಗಾಮಿ ನೌಕೆಗಳ ಕಾರ್ಯಾಚರಣೆ ನಡೆಸಿರುವವರಲ್ಲಿ ಪರಿಣಿತರಾಗಿದ್ದರು.
Recommended Video
ರಾಷ್ಟ್ರೀಯ ರಕ್ಷಣಾ ಕಾಲೇಜಿನ ಕಮಾಂಡೆಂಟ್ ಮತ್ತು ಪರಮಾಣು ಸುರಕ್ಷತೆಯ ಇನ್ಸ್ಪೆಕ್ಟರ್ ಜನರಲ್ನಂತಹ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದ ಅವರು, ಇಸ್ಲಾಮಾಬಾದ್ನ ಭಾರತೀಯ ಹೈಕಮಿಷನ್ನಲ್ಲಿ ರಕ್ಷಣಾ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 31ರಂದು ಅವರು ನಿವೃತ್ತರಾಗಬೇಕಿತ್ತಾದರೂ, ಅಷ್ಟರಲ್ಲೇ ಕೋವಿಡ್ಗೆ ಬಲಿಯಾಗಿದ್ದಾರೆ.