ಮಹಾರಾಷ್ಟ್ರದಲ್ಲಿ 'ಡೆಲ್ಟಾ ಪ್ಲಸ್': ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಆತಂಕ!
ಕಾರವಾರ, ಜೂನ್ 26: ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ಇದೀಗ ದೇಶದಲ್ಲಿ ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಭಯ ಕಾಡತೊಡಗಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ವೈರಸ್ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲೂ ಇದರ ಆತಂಕ ಸೃಷ್ಟಿಯಾಗಿದೆ.
ಕೊರೊನಾ ಮೊದಲ ಅಲೆಯಿಂದ ಜನರು ಸುಧಾರಿಸಿಕೊಳ್ಳುವುದರೊಳಗೆ ಈ ವರ್ಷ ಎರಡನೇ ಅಲೆ ಸಾಕಷ್ಟು ಅನಾಹುತವನ್ನೇ ಸೃಷ್ಟಿ ಮಾಡಿತ್ತು. ಎರಡನೇ ಅಲೆಗೆ ಸಾಕಷ್ಟು ಜನರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದರು. ಇನ್ನು ಎರಡನೇ ನಿಯಂತ್ರಿಸುವ ನಿಟ್ಟಿನಲ್ಲಿ ಅಂತಿಮವಾಗಿ ಲಾಕ್ಡೌನ್ ಮೊರೆ ಹೋಗಲಾಗಿತ್ತು.
ದೇಶದಲ್ಲಿ ಮೂರನೇ ಅಲೆ ಬರಬಹುದು, ಮಕ್ಕಳ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಮಾಹಿತಿ ನೀಡಿದ ಬೆನ್ನಲ್ಲೇ, ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ನಡುವೆ ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ದೇಶದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯದಲ್ಲಿ ಕಂಡು ಬಂದಿದ್ದು, ಮಧ್ಯಪ್ರದೇಶದಲ್ಲಿ ಡೆಲ್ಟಾ ಫ್ಲಸ್ ವೈರಸ್ಗೆ 23 ವರ್ಷದ ಯುವತಿ ಬಲಿಯಾಗಿದ್ದಾಳೆ.

ಡೆಲ್ಟಾ ಪ್ಲಸ್ನ ಸುಮಾರು 20ಕ್ಕೂ ಅಧಿಕ ಪ್ರಕರಣ
ಇನ್ನು ಸಾಕಷ್ಟು ಅಪಾಯಕಾರಿ ವೈರಸ್ ಎನ್ನಲಾದ ಡೆಲ್ಟಾ ಪ್ಲಸ್ನ ಸುಮಾರು 20ಕ್ಕೂ ಅಧಿಕ ಪ್ರಕರಣ ಮಹಾರಾಷ್ಟ್ರದಲ್ಲಿ ಕಂಡುಬಂದಿದ್ದು, ಅದರಲ್ಲಿ ಸುಮಾರು ಹತ್ತು ಪ್ರಕರಣ ರತ್ನಗಿರಿಯಲ್ಲಿಯೇ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೂ ಮಹಾರಾಷ್ಟ್ರದ ರತ್ನಗಿರಿಗೂ ಸಾಕಷ್ಟು ನಂಟು ಇರುವ ಹಿನ್ನಲೆಯಲ್ಲಿ ಇದೀಗ ಜಿಲ್ಲೆಯಲ್ಲೂ ಆತಂಕ ಸೃಷ್ಟಿಯಾಗಿದೆ.

ಉತ್ತರ ಕನ್ನಡ ಹಾಗೂ ರತ್ನಗಿರಿ ಭಾಗದಲ್ಲಿ ಮತ್ಸ್ಯೋದ್ಯಮ
ಕೊರೊನಾ ಮಾದರಿಯಲ್ಲಿಯೇ ಡೆಲ್ಟಾ ಪ್ಲಸ್ ವೈರಸ್ ಹರಡುತ್ತಿದೆ. ಜಿಲ್ಲೆಯ ಕರಾವಳಿ ಭಾಗದ ಹಲವರು ರತ್ನಗಿರಿಯ ಬೋಟ್ಗಳಲ್ಲಿ ಕೆಲಸ ಮಾಡುತ್ತಾರೆ. ಇನ್ನು ಉತ್ತರ ಕನ್ನಡ, ಗೋವಾ ಹಾಗೂ ರತ್ನಗಿರಿ ಭಾಗ ಮತ್ಸ್ಯೋದ್ಯಮದ ವ್ಯಾಪಾರ- ವ್ಯವಹಾರ ಸಂಬಂಧ ಹೊಂದಿದೆ. ರತ್ನಗಿರಿ ಭಾಗದಿಂದ ಮೀನನ್ನು ಜಿಲ್ಲೆಗೂ ತರುತ್ತಾರೆ. ಇನ್ನು ಬೋಟ್ನಲ್ಲಿ ಕೆಲಸ ಮಾಡುವವರು ರಜೆ ದಿನದಲ್ಲಿ ಜಿಲ್ಲೆಯತ್ತ ಆಗಮಿಸುತ್ತಾರೆ.

ರತ್ನಗಿರಿಯಿಂದ ಬರುವವರಲ್ಲಿ ಸೋಂಕು
ಈ ನಡುವೆ ಡೆಲ್ಟಾ ವೈರಸ್ ಸೋಂಕು ರತ್ನಗಿರಿ ಭಾಗದಲ್ಲಿ ಹರಡಿರುವುದರಿಂದ ಜಿಲ್ಲೆಯತ್ತ ರತ್ನಗಿರಿಯಿಂದ ಬರುವವರಲ್ಲಿ ಸೋಂಕು ಇದ್ದರೆ ಜಿಲ್ಲೆಯಲ್ಲೂ ಹರಡಬಹುದು ಎನ್ನುವ ಭಯ ಕಾಡತೊಡಗಿದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ಅನ್ಲಾಕ್ ಆಗಿದ್ದು, ಪ್ರವಾಸಿ ತಾಣಗಳತ್ತ ಪ್ರವಾಸಿಗರು ಬರುತ್ತಿದ್ದಾರೆ. ರಾಜ್ಯದ ಮೈಸೂರು, ಬೆಂಗಳೂರಿನಲ್ಲೂ ಡೆಲ್ಟಾ ಪ್ಲಸ್ ವೈರಸ್ ಕಂಡು ಬಂದಿದ್ದು, ಇದಲ್ಲದೇ ಕೆಲ ದೇಶಗಳಲ್ಲೂ ವೈರಸ್ ಕಂಡು ಬಂದಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಂದ ಡೆಲ್ಟಾ ವೈರಸ್ ಹರಡಬಹುದು ಎನ್ನುವ ಆತಂಕ ಸಹ ಕಾಡತೊಡಗಿದೆ.

ಸಣ್ಣ ಸಣ್ಣ ಗ್ರಾಮದಲ್ಲೂ ಸೋಂಕು ಪತ್ತೆ
ಕೊರೊನಾ ದೇಶಕ್ಕೆ ಕಾಲಿಟ್ಟ ವೇಳೆಯಲ್ಲಿ ಜಿಲ್ಲೆಗಳಿಗೆ ಬರುವ ಸಾಧ್ಯತೆ ಇಲ್ಲ ಎನ್ನಲಾಗಿತ್ತು. ಆದರೆ ಸಾಂಕ್ರಾಮಿಕ ರೋಗ ಆಗಿದ್ದರಿಂದ ಒಬ್ಬರಿಗೊಬ್ಬರಂತೆ ಹರಡಿ ಸಣ್ಣ ಸಣ್ಣ ಗ್ರಾಮದಲ್ಲೂ ಸೋಂಕು ಪತ್ತೆಯಾಗಿ ಹಲವು ಸಾವು- ನೋವಾಗಿದೆ. ಇನ್ನು ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದವರಿಂದಲೇ ಹೆಚ್ಚಾಗಿ ಸೋಂಕು ಹರಡಿದ್ದ ಘಟನೆಗಳು ಸಹ ನಡೆದಿದ್ದವು. ಇದೀಗ ಡೆಲ್ಟಾ ಪ್ಲಸ್ ವೈರಸ್ ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಕಂಡ ವೈರಸ್ ಪ್ರಮಾಣಕ್ಕಿಂತ ಅಪಾಯಕಾರಿ ಎಂದು ವಿಶ್ಲೇಷಿಸಲಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಸೋಂಕು ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿ ಮುಂಜಾಗ್ರತೆ ವಹಿಸಬೇಕು ಎನ್ನುವ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ. ಗಡಿ ಭಾಗದಲ್ಲಿ ಮಹಾರಾಷ್ಟ್ರದಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟು ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಇರುವವರಿಗೆ ಮಾತ್ರ ಜಿಲ್ಲೆಯತ್ತ ಬರಲು ಅವಕಾಶ ಮಾಡಿಕೊಡಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.












Click it and Unblock the Notifications