ರಾಜೀನಾಮೆ ಮುನ್ಸೂಚನೆ: ಸಿಎಂ ಯಡಿಯೂರಪ್ಪ ಕಾರವಾರ ಭೇಟಿಗೆ ಪದೇ ಪದೇ ವಿಘ್ನ!
ಕಾರವಾರ, ಜುಲೈ 22: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದೆ. ಈ ನಡುವೆ ರಾಜ್ಯದ ಗಡಿ ನಗರ ಕಾರವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಗಳು ನಿಗದಿಯಾಗಿ ಕೊನೆಯ ಕ್ಷಣದಲ್ಲಿ ರದ್ದಾಗುತ್ತಿರುವುದು ಸಾರ್ವಜನಿಕರಲ್ಲಿ ಹಲವಾರು ಗೊಂದಲಕ್ಕೆ ಕಾರಣವಾಗಿದೆ.
ಕಳೆದ ಬಾರಿ ಭಾರೀ ಮಳೆಯಿಂದಾಗಿ ಕಾರವಾರ, ಅಂಕೋಲಾ ಸೇರಿ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ನೆರೆ ಹಾವಳಿ ಉಂಟಾಗಿ ಸಾಕಷ್ಟು ಹಾನಿ ಸಂಭವಿಸಿತ್ತು. ನೆರೆಯಾದ ಜಿಲ್ಲೆಗಳಿಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಗಮಿಸಿ, ಪ್ರವಾಹ ಪೀಡಿತ ಸ್ಥಳಗಳ ವೀಕ್ಷಣೆ ಮಾಡಲಿದ್ದಾರೆ ಎನ್ನಲಾಗಿತ್ತು. ನಿಗದಿಯಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ಪ್ರವಾಸ ಕೂಡ ಮಾಡಿದರು. ಇದರೊಂದಿಗೆ ಕಾರವಾರಕ್ಕೂ ಸಿಎಂ ಪ್ರವಾಸ ನಿಗದಿಯಾಗಿ, ಅಂತಿಮ ಹಂತದಲ್ಲಿ ಹವಾಮಾನ ವೈಪರೀತ್ಯದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದರು.
ಇದಾದ ನಂತರ ಮಾರ್ಚ್ ತಿಂಗಳಿನಲ್ಲಿ ಸಿಎಂ ಕಾರವಾರಕ್ಕೆ ಆಗಮಿಸಿ, ಜಿಲ್ಲಾಸ್ಪತ್ರೆ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಉಪ ಚುನಾವಣೆ ಇದ್ದ ಹಿನ್ನಲೆಯಲ್ಲಿ ಸಿಎಂ ಕಾರವಾರ ಪ್ರವಾಸ ಮುಂದೂಡಲಾಗಿತ್ತು. ನಂತರ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ಸಿಎಂ ಪ್ರವಾಸದ ಸುಳಿವೇ ಇರಲಿಲ್ಲ.

ಪ್ರಧಾನಿ ಸಭೆ ಕರೆದಿದ್ದರಿಂದ ಭೇಟಿ ರದ್ದಾಗಿತ್ತು
ಅಂತಿಮವಾಗಿ ಕಾರವಾರ ಜಿಲ್ಲಾಸ್ಪತ್ರೆ ನೂತನ ಕಟ್ಟಡ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಜುಲೈ 16ಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದು, ಅವರ ಆಗಮನದ ಹಿನ್ನಲೆಯಲ್ಲಿ ಕಾರವಾರದಲ್ಲಿ ಸಕಲ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊರೊನಾ ಕುರಿತು ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ ಕರೆದಿದ್ದರಿಂದ ಈ ಕಾರ್ಯಕ್ರಮವೂ ಮತ್ತೆ ರದ್ದಾಗಿದ್ದು, ಆ ಬಳಿಕ ಕೂಡ ಜುಲೈ 23ಕ್ಕೆ ಸಿಎಂ ಕಾರವಾರಕ್ಕೆ ಬರಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅಂದು ಕೂಡ ಸಿಎಂ ಆಗಮಿಸುವುದಿಲ್ಲ ಎನ್ನುವುದು ಖಚಿತವಾಗಿದೆ.
ಕಾರವಾರಕ್ಕೆ ಸಿಎಂ ಪ್ರವಾಸ ಪದೇ ಪದೇ ರದ್ದಾಗುತ್ತಿದ್ದು, ಮುಖ್ಯಮಂತ್ರಿಗಳನ್ನು ಕಾರವಾರಕ್ಕೆ ಕರೆಸಿ ಅಭಿವೃದ್ಧಿ ಚಟುವಟಿಕೆಗಳಿಗೆ ಚುರುಕು ಮುಟ್ಟಿಸಬೇಕು ಎನ್ನುವ ಆಸೆಯಲ್ಲಿದ್ದ ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ಬಿಜೆಪಿಗರಿಗೆ ನಿರಾಸೆ ಮೂಡಿಸಿದೆ.

ಕಾದು ಕಾದು ವಾಪಾಸ್ ಆದ ಶಾಮಿಯಾನದವರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶಾಸಕಿ ರೂಪಾಲಿ ನಾಯ್ಕ್ ಮನವಿ ಮೇರೆಗೆ ಸುಮಾರು 230 ಕೋಟಿಗೂ ಅಧಿಕ ಮೊತ್ತ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಜೂನ್ 16ಕ್ಕೆ ಕಾರವಾರಕ್ಕೆ ಬರಲು ಹಸಿರು ನಿಶಾನೆ ತೋರಿದ್ದರು. ಸಿಎಂ ಕಾರವಾರ ಪ್ರವಾಸದ ಬಗ್ಗೆ ಅವರ ಕಚೇರಿಯಿಂದ ಕೂಡ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಿತ್ತು.
ಹೀಗಾಗಿ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತದ ಪೂರ್ವಭಾವಿ ಸಭೆಗಳೂ ನಡೆದಿದ್ದವು. ಸಿಎಂ ಕಾರ್ಯಕ್ರಮವನ್ನು ಕಾರವಾರದ ಮಾಲಾದೇವಿ ಮೈದಾನದಲ್ಲಿ ಮಾಡಲು ಹುಬ್ಬಳ್ಳಿಯಿಂದ ಶಾಮಿಯಾನದವರು ತಮ್ಮೆಲ್ಲ ಶಾಮಿಯಾನ ಸಾಮಗ್ರಿಗಳೊಂದಿಗೆ ಆಗಮಿಸಿದ್ದರು. ಜುಲೈ 12ರಂದೇ ಕಾರವಾರಕ್ಕೆ ಬಂದಿದ್ದ ಶಾಮಿಯಾನದವರು, ಸಿಎಂ ಕಾರ್ಯಕ್ರಮದ ಬಗ್ಗೆ ಖಚಿತವಾಗಿರದ ಕಾರಣ ಶಾಮಿಯಾನ ಹಾಕದೆ ಮೈದಾನದಲ್ಲೇ ಬಿಡಾರ ಹೂಡಿದ್ದರು.

ಜು.16ರಂದು ನಿಗದಿಯಾಗಿದ್ದ ಕಾರ್ಯಕ್ರಮ
ಕೊನೆಗೂ ಜು.16ರಂದು ನಿಗದಿಯಾಗಿದ್ದ ಕಾರ್ಯಕ್ರಮ ರದ್ದಾಗಿ 23ಕ್ಕೆ ಅಥವಾ ಜುಲೈ ತಿಂಗಳು ಮುಗಿಯುವುದರೊಳಗೆ ಸಿಎಂ ಕಾರವಾರಕ್ಕೆ ಬರಬಹುದು ಎಂದು ಶಾಮಿಯಾನದವರಿಗೆ ಇಲ್ಲೇ ಇರಲು ಸೂಚಿಸಲಾಗಿತ್ತು ಎನ್ನಲಾಗಿದೆ. ಹೀಗಾಗಿ ಮಳೆಯಲ್ಲೂ ಮಾಲಾದೇವಿ ಮೈದಾನದಲ್ಲೇ ಕಾರ್ಮಿಕರು ಬಿಡಾರ ಹೂಡಿಕೊಂಡು ಕಾಯುತ್ತಿದ್ದರು. ಅಂತೂ ಸಿಎಂ ಸದ್ಯಕ್ಕಂತೂ ಬರಲ್ಲ ಎಂಬ ಬಗ್ಗೆ ಖಚಿತವಾದ ಹಿನ್ನಲೆಯಲ್ಲಿ ಶಾಮಿಯಾನದವರು ಬುಧವಾರ ತಮ್ಮೆಲ್ಲ ಶಾಮಿಯಾನ ಸಾಮಗ್ರಿಗಳನ್ನು ತುಂಬಿಕೊಂಡು ವಾಪಸ್ ಹುಬ್ಬಳ್ಳಿಯತ್ತ ಮುಖ ಮಾಡಿದ್ದಾರೆ.

ಆಗಸ್ಟ್ ಅಂತ್ಯದವರೆಗೂ ಸಿಎಂ ಪ್ರವಾಸ ಕಷ್ಟಸಾಧ್ಯ
ಪ್ರಸ್ತುತ ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದು, ಸರ್ಕಾರ ಎರಡು ವರ್ಷ ಪೂರೈಸಿದ ನಂತರ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಬದಲಾವಣೆ ಮಾಡುವುದು ಬಹುತೇಕ ಖಚಿತ ಎನ್ನುವ ಮಾತು ಕೇಳಿ ಬಂದಿದೆ. ಇದೇ ಕಾರಣದಿಂದ ಆಗಸ್ಟ್ ಅಂತ್ಯದವರೆಗೂ ಸಿಎಂ ಇತ್ತ ಪ್ರವಾಸ ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಆದರೆ, ಮುಖ್ಯಮಂತ್ರಿ ಆಗಮಿಸದ ಹಿನ್ನಲೆಯಲ್ಲಿ ಸುಮಾರು 160 ಕೋಟಿ ವೆಚ್ಚದ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣ ಸೇರಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಇಲ್ಲದೇ ಕಾಮಗಾರಿ ಪ್ರಾರಂಭವಾಗಿಲ್ಲ. ಅಧಿಕಾರದ ಅವಧಿಯಲ್ಲಿಯೇ ಯಡಿಯೂರಪ್ಪನವರು ಕಾರವಾರಕ್ಕೆ ಬರುತ್ತಾರೋ ಅಥವಾ ಸಿಎಂ ಬದಲಾವಣೆಯ ಬಳಿಕ ಬೇರೆ ಯಾರೋ ಮುಖ್ಯಮಂತ್ರಿಯಾಗಿ ಇಲ್ಲಿಗೆ ಭೇಟಿ ನೀಡುತ್ತಾರೋ ಕಾದು ನೋಡಬೇಕಿದೆ.












Click it and Unblock the Notifications