"ಬೆಟರ್ ಕಾರವಾರ'ದಿಂದಾಗಿ ಅಂದಗೊಂಡ ಜಿಲ್ಲಾಧಿಕಾರಿ ಕಚೇರಿ ಗೋಡೆ
ಕಾರವಾರ, ಡಿಸೆಂಬರ್ 25: ಶಾಲಾ-ಕಾಲೇಜು ಕೊರೊನಾ ಸೋಂಕಿನಿಂದಾಗಿ ಮುಚ್ಚಿದ್ದರಿಂದ ಯುವಜನತೆ ಫೇಸ್ ಬುಕ್, ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ, ಪಬ್ ಜಿ, ಫ್ರೀ ಫ್ರೈರ್ ನಂಥ ಗೇಮ್ಸ್ ಗಳಲ್ಲಿ ನಿರತರಾಗಿದ್ದಾರೆ.
ಇನ್ನು, ಉದ್ಯೋಗ ಮಾಡುತ್ತಿದ್ದವರಂತೂ ಕೊರೊನಾ ಲಾಕ್ ಡೌನ್ ನಿಂದಾಗಿ ಊರಿಗೆ ವಾಪಸ್ಸಾಗಿ ವರ್ಕ್ ಫ್ರಮ್ ಹೋಂ ನಲ್ಲಿ ಮುಳುಗಿ, ಒಂದಷ್ಟು ವಿರಾಮಕ್ಕಾಗಿ ಕಾಯುತ್ತಿದ್ದಾರೆ. ಈ ಎರಡೂ ಕಡೆಯವರನ್ನು ಒಟ್ಟುಗೂಡಿಸಿಕೊಂಡು "ಬೆಟರ್ ಕಾರವಾರ' ತಂಡವೊಂದು ಕಾರವಾರ ನಗರವನ್ನು ಅಂದಗೊಳಿಸುವ ಕಾರ್ಯಕ್ಕೆ ಇಳಿದಿದೆ.
ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ಅಂದಗೊಳಿಸಿದೆ
ಕಳೆದ ಅಕ್ಟೋಬರ್ 2 ರಿಂದ ಸ್ವಚ್ಛತಾ ಅಭಿಯಾನದ ಮೂಲಕ ಸಾಮಾಜಿಕ ಕಾರ್ಯಕ್ಕೆ ಇಳಿದಿದ್ದ ಬೆಟರ್ ಕಾರವಾರ ತಂಡ, ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ಅಂದಗೊಳಿಸಿದೆ.
ಉತ್ತರ ಕನ್ನಡ; ಹೊಸ ವರ್ಷದ ವಿಶೇಷ ಆಚರಣೆಗೆ ನಿಷೇಧ
ಪ್ರೀತೇಶ್ ರಾಣೆ, ಸೂರಜ್ ಗೋವೇಕರ್, ನಿತೇಶ್ ನಾಯ್ಕ, ಪ್ರಸಾದ್ ಸಾದಿಯೆ, ಅಮಾನ್ ಶೇಖ್ ಹಾಗೂ ಉಮಾ ಶಂಕರ್ ಎನ್ನುವವರು ಸ್ಥಾಪಿಸಿದ ಈ "ಬೆಟರ್ ಕಾರವಾರ' ತಂಡ, ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ ಆರಂಭಿಸಿ 12 ವಾರಗಳ ಕಾಲ ಕಾರವಾರ ನಗರದ ವಿವಿದೆಡೆ ಸ್ವಚ್ಛಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತ ಕಲಾವಿದರಿಗೆ ಆಹ್ವಾನ
ಈ ನಡುವೆ ಜಿಲ್ಲಾಧಿಕಾರಿ ಕಚೇರಿಯ ಗೋಡೆಗೆ ಬಣ್ಣ ಬಳಿಯಬೇಕೆಂಬ ಯೋಜನೆಯನ್ನು ರಚಿಸಿ, ತಮ್ಮ ಇನ್ ಸ್ಟಾಗ್ರಾಂ, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಆಸಕ್ತ ಕಲಾವಿದರಿಗೆ ಆಹ್ವಾನಿಸಿದ್ದರು. ನಿರೀಕ್ಷೆಗೂ ಮೀರಿ 30 ಕಲಾವಿದರು ಬೆಟರ್ ಕಾರವಾರ ತಂಡದೊಂದಿಗೆ ಕೈಜೋಡಿಸಿದ್ದಾರೆ.
ಪ್ರವಾಸೋದ್ಯಮ, ಜಾಗೃತಿ ಸಂದೇಶ
ಅಲ್ಲದೇ, ಕೇವಲ ಒಂದೇ ದಿನದಲ್ಲಿ 30 ಕಲಾವಿದರು ಸೇರಿಕೊಂಡು ಜಿಲ್ಲಾಧಿಕಾರಿ ಕಚೇರಿಯ 40 ಗೋಡೆಗಳಲ್ಲಿ 40 ಚಿತ್ರ ಬಿಡಿಸಿ ಬಣ್ಣ ತುಂಬಿದ್ದಾರೆ. ಭಾವೈಕ್ಯತೆ, ಒಗ್ಗಟ್ಟು, ಕಲೆ-ಸಂಸ್ಕೃತಿ, ಪ್ರವಾಸೋದ್ಯಮ, ಜಾಗೃತಿ ಸಂದೇಶಗಳನ್ನು ಕಲಾವಿದರು ಗೋಡೆಗಳಲ್ಲಿ ಚಿತ್ರಿಸಿದ್ದಾರೆ. ಈ ಕಲಾವಿದರ ಪೈಕಿ ಹಲವಾರು ಮಂದಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿದ್ದರೆ, ವರ್ಕ್ ಫ್ರಮ್ ಹೋಂ ನಲ್ಲಿರುವ ಉದ್ಯೋಗಿಗಳು, ಗೃಹಿಣಿಯರು, ಎನ್ಸಿಸಿ ಕೆಡೆಟ್ಸ್ ಗಳು ಭಾಗವಹಿಸಿದ್ದಾರೆ.
Recommended Video
ಗೋಡೆ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ
ಒಟ್ಟಾರೆಯಾಗಿ ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕೂತು ಆಲಸ್ಯದಲ್ಲಿದ್ದ ಮಂದಿ, ಈಗ ಬೆಟರ್ ಕಾರವಾರದ ಮೂಲಕ ಚಟುವಟಿಕೆ ನಿರತರಾಗಿದ್ದಾರೆ. ಬಣ್ಣ ಮಾಸಿದ್ದ ಜಿಲ್ಲಾಧಿಕಾರಿ ಕಚೇರಿಯ ಗೋಡೆ ಈಗ ಅಂದಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುವವರು, ವಾಹನ ಸವಾರರು ಗೋಡೆ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.