ಕುತೂಹಲಕ್ಕೆ ಕಾರಣವಾದ ಶಿವರಾಮ್ ಹೆಬ್ಬಾರ್ ಖಾತೆ ವಿಚಾರ
ಕಾರವಾರ, ಫೆಬ್ರವರಿ 06: ಮೂರು ಬಾರಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಇಂದು ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು, ದೇವರು, ತಂದೆ- ತಾಯಿ ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹಲವು ಗೊಂದಲಗಳ ಮಧ್ಯೆ ಬಿಜೆಪಿ ಸೇರ್ಪಡೆಗೊಂಡ ಅವರು ಕಳೆದ ಉಪಚುನಾವಣೆಯಲ್ಲಿ 31 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲು ಹೆಬ್ಬಾರ್ ಹಾಗೂ ಮತ್ತಿತರರ ಕೊಡುಗೆ ಅಪಾರವಾದದ್ದು. ಈ ಹಿನ್ನೆಲೆಯಲ್ಲಿಯೇ ಇಂದು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಶಿವರಾಮ ಹೆಬ್ಬಾರ್, ಯಾವ ಖಾತೆ ಪಡೆಯಲಿದ್ದಾರೆ ಎನ್ನುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ನಗರಾಭಿವೃದ್ಧಿ ಖಾತೆ?
ಹೆಬ್ಬಾರ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು, ಅವರಿಗೆ ನಗರಾಭಿವೃದ್ಧಿ ಖಾತೆ ನೀಡಲಾಗುತ್ತದೆ ಎಂಬ ಮಾಹಿತಿಯೂ ಅವರ ಆಪ್ತ ವಲಯದಲ್ಲಿ ಹರಿದಾಡುತ್ತಿದೆ. ಮಹತ್ವದ ನಗರಾಭಿವೃದ್ಧಿ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಯವಾಗಿದೆ ಎನ್ನಲಾಗುತ್ತಿದೆ. ಈ ಮೊದಲು ಅರಣ್ಯ, ತೋಟಗಾರಿಕಾ, ಸಣ್ಣ ಕೈಗಾರಿಕೆ, ಪೌರಾಡಳಿತ, ಕೃಷಿ ಖಾತೆಗಳಲ್ಲಿ ಯಾವುದಾದರೊಂದು ಖಾತೆ ಹೆಬ್ಬಾರ್ ಗೆ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ನಗರಾಭಿವೃದ್ಧಿ ಖಾತೆ ಸಿಗುವುದು ಶೇ 99ರಷ್ಟು ನಿಶ್ಚಿತ ಎಂದು ಹೆಬ್ಬಾರ್ ನಿಕಟವರ್ತಿಗಳಿಂದ ತಿಳಿದುಬಂದಿದೆ. ಇದೇ ಖಾತೆಗಾಗಿಯೇ ಹೆಬ್ಬಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ರಾಜಕೀಯ ಮೇಲಾಟದಲ್ಲಿ, ತಮ್ಮ ಹಲವು ಕಾಂಗ್ರೆಸ್ ಸಹಪಾಠಿಗಳೊಂದಿಗೆ ಶಿವರಾಮ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಗೊಂದಲಗಳ ಮಧ್ಯೆ ಬಿಜೆಪಿ ಸೇರ್ಪಡೆಗೊಂಡು, 2019ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದರು. ಶಾಸಕರು ರಾಜೀನಾಮೆ ನೀಡಿರುವ ಕಾರಣಕ್ಕೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೆಬ್ಬಾರ್ ಹಾಗೂ ಇನ್ನಿತರರ ತ್ಯಾಗಕ್ಕೆ ಮಂತ್ರಿಸ್ಥಾನ ಕೊಟ್ಟಿದೆ. ಮುಂದೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಹುದ್ದೆಯು ಕೂಡ ಶಿವರಾಮ್ ಹೆಬ್ಬಾರ್ ಅವರ ಹೆಗಲಿಗೆ ಏರಲಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಜಿಲ್ಲೆಯ ಜನತೆ ಅಭಿವೃದ್ಧಿ ಪರವಾಗಿರುವ ಶಿವರಾಮ ಹೆಬ್ಬಾರ್ ಅವರ ಮಂತ್ರಿಗಿರಿಯ ಆಡಳಿತಾವಧಿಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ.












Click it and Unblock the Notifications