ಬನವಾಸಿಯನ್ನು ಶಿವಮೊಗ್ಗಕ್ಕೆ ಸೇರಿಸುವ ಪ್ರಸ್ತಾಪ ಸುಳ್ಳು ಸುದ್ದಿ: ಬಿ.ವೈ.ರಾಘವೇಂದ್ರ
ಕಾರವಾರ, ಅಕ್ಟೋಬರ್ 5: ಜಿಲ್ಲೆಯ ಮಲೆನಾಡು ತಾಲ್ಲೂಕಾದ ಶಿರಸಿಯ ಬನವಾಸಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿಗೆ ಸೇರಿಸುತ್ತಾರೆಂಬ ಊಹಾಪೋಹಗಳಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ತೆರೆ ಎಳೆದಿದ್ದಾರೆ.
'ಇದೊಂದು ಸುಳ್ಳು ಸುದ್ದಿ. ಇಂತಹ ಯಾವುದೇ ಪ್ರಸ್ತಾಪವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಗೆ ಬನವಾಸಿಯನ್ನು ಸೇರಿಸಲಾಗುವುದು ಎಂದು ಹೇಳಿರುವುದಾಗಿ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇಂಥ ಗಾಳಿ ಸುದ್ದಿಗೆ ಬನವಾಸಿಯ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಇದೊಂದು ಸುಳ್ಳು ಸುದ್ದಿ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಚಾರಕ್ಕೆ ಈಗಾಗಲೇ ಪರ-ವಿರೋಧದ ಚರ್ಚೆ ನಡೆದು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಸಭೆಯನ್ನೂ ನಡೆಸಲಾಗಿದೆ. ಬೃಹತ್ ಹೋರಾಟ ನಡೆಸಿ, ಈ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಬೇಕೆಂಬ ಅಭಿಪ್ರಾಯಕ್ಕೂ ಬನವಾಸಿಯ ನಿವಾಸಿಗಳು ಹಾಗೂ ಅನೇಕ ಸಂಘಟನೆಗಳು ತೀರ್ಮಾನವನ್ನು ಕೈಗೊಂಡಿದ್ದವು. ಇದೀಗ ಬಿ.ವೈ.ರಾಘವೇಂದ್ರ ಅವರ ಸ್ಪಷ್ಟನೆಯಿಂದಾಗಿ ಬನವಾಸಿಯ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications