ಜಾತೀಯತೆಯ ಮೇಲೆ ಚುನಾವಣೆ ಮಾಡುವ ಬಿಜೆಪಿಗೆ ಹೃದಯವಿಲ್ಲ: ಡಿಕೆಶಿ
ಕಾರವಾರ, ನವೆಂಬರ್ 24: ಜಾತೀಯತೆಯ ಮೇಲೆ ಚುನಾವಣೆ ಮಾಡುವ ಬಿಜೆಪಿಗೆ ಕಣ್ಣು, ಕಿವಿ, ಹೃದಯವೇ ಇಲ್ಲ. ಆದರೆ ಕಾಂಗ್ರೆಸ್ಗೆ ಎಲ್ಲಾ ಸಮುದಾಯಗಳೂ ಒಂದೇ. ಮಾನವೀಯತೆ ನೆಲೆಯಲ್ಲಿ ನಮ್ಮ ಪಕ್ಷ ನಿಂತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕುಮಟಾದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ''ಆಪರೇಷನ್ ಕಮಲ ಮಾಡಿ ಬಿಜೆಪಿ ಹೇಗೋ ಸರ್ಕಾರವನ್ನು ಅಧಿಕಾರಕ್ಕೆ ತಂದಿದೆ. ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಆದರೆ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಉದ್ಯೋಗ ಇಲ್ಲದೇ ಬೇರೆ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಆದಾಯ ಡಬಲ್ ಮಾಡುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದರು. ಎಲ್ಲರ ಖಾತೆಗಳಿಗೆ 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ ಎಂದು ಬಿಜೆಪಿಯವರು ನೋಡಿಕೊಳ್ಳಲಿ'' ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಜ್ಯೋತಿಯನ್ನು ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಹಚ್ಚಿದ್ದೇವೆ. ಕಾಂಗ್ರೆಸ್ ಪಕ್ಷದ ಮನೆ ಖಾಲಿಯಾಗಿದೆ ಎಂಬ ಬಿಜೆಪಿಯವರೇ, ರಾಜ್ಯದ ವಿವಿಧ ಕ್ಷೇತ್ರಗಳಿಂದ 1310ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಮೇಲಿನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ತಿಳಿಸಿದರು.
ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇವೆಂದು ಪರೇಶ್ ಮೇಸ್ತಾ ಸಾವಿನ ಸಂದರ್ಭದಲ್ಲಿ ಜಿಲ್ಲೆಯ ಸಂಸದರು ಹೇಳಿಕೆ ನೀಡಿದ್ದರು. ಆದರೆ ಎರಡು ಸಾವಿರಕ್ಕೂ ಅಧಿಕ ಮಂದಿ ಯುವಕರ ಮೇಲೆ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಬಳಿಕ ನ್ಯಾಯ ಒದಗಿಸಿ ಕೊಡುತ್ತೇವೆ ಎಂದು ಹೇಳಿದರು.

ಕೋವಿಡ್ 19 ಪರಿಹಾರದ ಹಣ ಸಂತ್ರಸ್ತರ ಕೈ ಸೇರಿಲ್ಲ
ಕೋವಿಡ್ ಸಂದರ್ಭದಲ್ಲಿ ಸತ್ತವರಿಗೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ. 21 ಸಾವಿರ ಕೋಟಿ ಹಣವನ್ನು ಪರಿಹಾರ ಕೊಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು, ಆದರೂ ಯಾರಿಗೂ ಸಹ ಪರಿಹಾರದ ಹಣ ಕೈ ಸೇರಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯನೂ ಇಲ್ಲ ಎಂದ ಅವರು, 21 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ನಿನ್ನೆ ಎಲೆಕ್ಷನ್ ಕಮಿಷನ್ಗೆ ಹೋಗಿ ದೂರು ನೀಡಿ ನೇರವಾಗಿ ಸಮಾವೇಶಕ್ಕೆ ಬಂದಿದ್ದೇನೆ. ಮತದಾರರು ಹುಷಾರಾಗಿದ್ದು ಮತದಾನವನ್ನು ಸರಿಯಾಗಿ ಮಾಡಿ ಎಂದು ಕರೆ ನೀಡಿದ್ದಾರೆ.

ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ವರದಿಯನ್ನ ಒಪ್ಪುತ್ತಿಲ್ಲ
ಮಾಜಿ ಸಚಿವ ಆರ್.ವಿ ದೇಶಪಾಂಡೆ ಮಾತನಾಡಿ, ಕರಾವಳಿಯಲ್ಲಿ ಪರೇಶ್ ಮೇಸ್ತಾ ಪ್ರಕರಣದಲ್ಲಿ ಕೋಮು ಗಲಭೆ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡಿದ್ದ ಬಿಜೆಪಿ ಸುಳ್ಳು ಪ್ರಚಾರ ನಡೆಸಿ ಲಾಭ ಪಡೆದುಕೊಂಡಿತ್ತು. ಅಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದರಿಂದಲೇ ಸಿಬಿಐಗೆ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅಡಿ ಬರುವ ಸಿಬಿಐ ನೀಡಿದ ವರದಿಯನ್ನೇ ಒಪ್ಪುತ್ತಿಲ್ಲ. ಇದನ್ನು ಬಿಜೆಪಿ ಹಾಗೂ ಜನರು ಅರ್ಥ ಮಾಡಿಕ್ಕೊಳ್ಳಬೇಕು ಎಂದು ಹೇಳಿದರು.
ಸಮಾವೇಶ ಕೇವಲ ಪರೇಶ್ ಮೇಸ್ತಾ ಪ್ರಕರಣಕ್ಕೆ ಸೀಮಿತವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಅಭಿವೃದ್ಧಿ ಪರ್ವ ಪ್ರಾರಂಭವಾಗಿತ್ತು. ಆದರೆ ಇದೀಗ ಮಂಜೂರಾದ ಕಾಮಗಾರಿಗಳು ಕೂಡ ಪೂರ್ಣಗೊಳ್ಳುತ್ತಿಲ್ಲ. ಕಾಂಗ್ರೆಸ್ ಬಡವರ, ಕೂಲಿ ಕಾರ್ಮಿಕರ ಪಕ್ಷವಾಗಿದೆ. ಯಾವತ್ತೂ ಜಾತಿ ಧರ್ಮ ನೋಡಿಲ್ಲ. ಆದರೆ ಬಿಜೆಪಿ ಯಾವತ್ತೂ ಬಡವರ ಪರ ನೋಡುವುದಿಲ್ಲ. ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಇದೆಲ್ಲವನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು ಎಂದರು.

ಸಿದ್ದು ಕಂಡರೆ ಬಿಜೆಪಿಗೆ ಭಯ
ಬಿಜೆಪಿಯವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಭಯ ಇರುವುದರಿಂದ ಅವರನ್ನು ಟಾರ್ಗೆಟ್ ಮಾಡಿರಬಹುದು. ಆದರೆ ಅವರು ಯಾವುದಕ್ಕೂ ಹೆದರುವುದಿಲ್ಲ. ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ. ಬಿಜೆಪಿಗರಿಗೆ ಸಿದ್ದರಾಮಯ್ಯನವರ ಮೇಲೆ ಭಯವಿದೆ. ಇದೇ ಕಾರಣಕ್ಕೆ ಅನಾವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಏನು ಪ್ರಯೋಜನವಿಲ್ಲ. ಇಂತಹ ನೂರು ಟಾರ್ಗೆಟ್ ಮಾಡಿದರು ಅದನ್ನು ಎದುರಿಸುವ ಸಾಮರ್ಥ್ಯ ಸಿದ್ದರಾಮಯ್ಯನವರಿಗೆ ಇದೆ. ಬಿಜೆಪಿಗರು ಸಿದ್ದರಾಮಯ್ಯನವರನ್ನ ಟಾರ್ಗೆಟ್ ಮಾಡಿ ಸುಲಭವಾಗಿ ಗೆಲ್ಲಬಹುದು ಎಂದು ಕೊಂಡಿದ್ದು ಇದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಮತ್ತೊಬ್ಬ ಪರೇಶ್ ಮೇಸ್ತಾನ ಹುಡುಕುತ್ತಿದೆ
ಮಾಜಿ ಸಚಿವ ಯು.ಟಿ. ಖಾದರ್ ಮಾತನಾಡಿ, ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ ಸರ್ಕಾರ ಲೂಟಿ ಮಾಡುತ್ತಿದ್ದೇಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸುಳ್ಳು ಪ್ರಚಾರ ಮಾಡಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ಈ ಹಿಂದೆ ಪರೇಶ್ ಮೇಸ್ತಾ ಸಾವಾದಾಗ ಮನೆಗೆ ತೆರಳಿ ಸಾಂತ್ವನ ಹೇಳುವ ಬದಲು ಬೆಂಕಿ ಹಚ್ಚುವ ಕೆಲ ಮಾಡಿತ್ತು. ಇದೀಗ ಮರುತನಿಖೆಗೆ ಒತ್ತಾಯಿಸುತ್ತಿರುವ ಬಿಜೆಪಿ ಪ್ರಕರಣವನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ. ಚುನಾವಣೆ ಬಂದಿದ್ದರಿಂದ ಬಿಜೆಪಿ ಮತ್ತೊಂದು ಪರೇಶ್ ಮೇಸ್ತಾನನ್ನು ಹುಡುಕುತ್ತಿದ್ದು, ನಮ್ಮ ಮನೆ ಮಕ್ಕಳನ್ನು ಸರಿಯಾಗಿ ಇಟ್ಟುಕ್ಕೊಳ್ಳಬೇಕಾಗಿದೆ ಎಂದು ಹೇಳಿದರು.
ಇನ್ನು ಜಾಗೃತಿ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಬೆಂಗಳೂರಿನಲ್ಲಿ ಮಳೆಯಾದ ಕಾರಣ ಹೆಲಿಕಾಪ್ಟರ್ ಮೂಲಕ ಆಗಮಿಸಬೇಕಿದ್ದ ಸಿದ್ದರಾಮಯ್ಯ ಅವರಿಗೆ ಕೊನೆ ಕ್ಷಣದವರೆಗೂ ಸಾಧ್ಯವಾಗದ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಆದರೆ ಕೊನೆ ಕ್ಷಣದವರೆಗೂ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಕೊನೆಗೂ ಬಾರದೆ ಇರುವುದರಿಂದ ಬೇಸರ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.












Click it and Unblock the Notifications