ಹಸು ದಾಳಿಯಿಂದ ತಮ್ಮನನ್ನು ಕಾಪಾಡಿದ್ದ ಹೊನ್ನಾವರದ ಆರತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಹೊನ್ನಾವರ, ಜನವರಿ 22: ಹಸುವಿನ ದಾಳಿಯಿಂದ ತನ್ನ ತಮ್ಮನನ್ನು ರಕ್ಷಿಸಿದ್ದ ತಾಲೂಕಿನ ನವಿಲಗೋಣದ ಆರತಿ ಕಿರಣ ಶೇಟ್ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದೆ. ಜನವರಿ 26ರಂದು ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಈಕೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದೇಶದ ವಿವಿಧ ರಾಜ್ಯಗಳಿಂದ ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯದಿಂದ ರಾಯಚೂರಿನ ವೆಂಕಟೇಶ್ ಮತ್ತು ನವಿಲಗೋಣದ ಕಿರಣ್ ಪಾಂಡುರಂಗ ಶೇಟ್ ಪುತ್ರಿ ಆರತಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
9 ವರ್ಷದ ಆರತಿಗೆ ಪ್ರಸಕ್ತ ಸಾಲಿನ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿ ಗೌರವಿಸಿದೆ. ಪ್ರಶಸ್ತಿಯು ಪದಕ, 1,00,000 ರೂ. ನಗದು, 10,000 ರೂ. ಮೌಲ್ಯದ ಬುಕ್ ವೋಚರ್, ಪ್ರಮಾಣ ಪತ್ರ ಒಳಗೊಂಡಿದೆ.

2018ರಲ್ಲಿ ಮನೆ ಮುಂದೆ ಆರತಿ ತನ್ನ ತಮ್ಮನೊಂದಿಗೆ ಆಟವಾಡುತ್ತಿದ್ದಾಗ ಏಕಾಏಕಿ ಹಸು ದಾಳಿ ನಡೆಸಲು ಮುಂದಾಗಿತ್ತು. ಆ ಸಮಯದಲ್ಲಿ, ತನ್ನ ತಮ್ಮನಾದ 2 ವರ್ಷದ ಕಾರ್ತಿಕನನ್ನು ತನ್ನ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ದಳು. ಈಕೆಯ ಸಮಯೋಚಿತ ನಡೆಯಿಂದಾಗಿ ಮಗುವಿಗೆ ಪುನರ್ಜನ್ಮ ಸಿಕ್ಕಿತ್ತು. 5ನೇ ತರಗತಿಯಲ್ಲಿ ಓದುತ್ತಿರುವ ಆರತಿ ಶೇಟ್ ಗೆ ಕಳೆದ ವರ್ಷ ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.












Click it and Unblock the Notifications