ಅಂಕೋಲಾ: ಕಾರು, KSRTC ಬಸ್ ನಡುವೆ ಭೀಕರ ಅಪಘಾತ, ಕಾರಿನಲ್ಲಿದ್ದ ತಮಿಳುನಾಡಿನ ನಾಲ್ವರು ಸಾವು
ಕಾರವಾರ, ಜನವರಿ, 01: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಆಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ನಡೆದಿದೆ.
ಕಾರು ಅಪಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದವರನ್ನು ತಮಿಳುನಾಡು ಮೂಲದವರು ಎಂದು ಹೇಳಲಾಗಿದೆ. ಜೊತೆಗೆ ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಪಘಾತದಲ್ಲಿ ಸಾವನ್ನಪ್ಪಿದವರು ಹಾಗೂ ಗಾಯಾಳುವಿನ ಮಾಹಿತಿಗಾಗಿ ತನಿಖೆ ಮುಂದುವರೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಂದಕಕ್ಕೆ ಉರುಳಿದ ಬಸ್, ಓರ್ವ ವಿದ್ಯಾರ್ಥಿ ಸಾವು
ಹಾಗೆಯೇ ಕೇರಳ ಜಿಲ್ಲೆಯ ಆದಿಮಾಲಿ ಪ್ರದೇಶದಲ್ಲಿ ಭಾನುವಾರ (ಡಿಸೆಂಬರ್ 01) ಪ್ರವಾಸಿ ಬಸ್ಸೊಂದು ರಸ್ತೆಯಿಂದ ಸುಮಾರು 100 ಅಡಿ ಕೆಳಗಿನ ಏಲಕ್ಕಿ ತೋಟಕ್ಕೆ ಬಿದ್ದಿದೆ. ಇದರ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 40 ವಿದ್ಯಾರ್ಥಿಗಳು ಸೇರಿದಂತೆ 43 ಮಂದಿ ಗಾಯಗೊಂಡಿದ್ದಾರೆ. ಡಿಸೆಂಬರ್ 29 ರಂದು ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ತಮಿಳುನಾಡಿನ ಗಿರಿಧಾಮವಾದ ಕೊಡೈಕೆನಾಲ್ನಿಂದ ಬಸ್ ವಾಪಸ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವೆಲ್ಲತೂವಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ದಟ್ಟ ಮಂಜಿನಿಂದಾಗಿ ಬಸ್ ನಿಯಂತ್ರಣ ತಪ್ಪಿ 100 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಜನರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯಿಂದಾಗಿ ಅನೇಕ ಜೀವಗಳು ಉಳಿದಿವೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿ ಮೃತದೇಹ ಪತ್ತೆ
ಗಾಯಗೊಂಡವರಲ್ಲಿ 10 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮಿಳುನಾಡಿನ ಕೊಡೈಕೆನಾಲ್ ಮತ್ತು ಇಡುಕ್ಕಿಯ ಮುನ್ನಾರ್ನಲ್ಲಿ ಮೂರು ದಿನಗಳ ವಿಹಾರ ಮುಗಿಸಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದಾಗ ಓರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ. ತಕ್ಷಣ ರಕ್ಷಣಾ ಪಡೆ ಅಪಘಾತದ ಸ್ಥಳಕ್ಕೆ ಹಿಂತಿರುಗಿ ಹುಡುಕಿದಾಗ ವಿದ್ಯಾರ್ಥಿ ಎಂ ಮಿಲ್ಹಾಜ್ ಅವರ ಮೃತದೇಹ ಪತ್ತೆಯಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications