ಅತ್ಯಾಚಾರಿ ವ್ಯಕ್ತಿಯ ಪೂಜೆಗೆ ನನ್ನನ್ನು ಆಹ್ವಾನಿಸಬೇಡಿ: ಸಚಿವ ಹೆಗಡೆ
ಕಾರವಾರ, ಅಕ್ಟೋಬರ್ 21: "ಒಬ್ಬ ಕ್ರೂರ ನರಹಂತಕ, ಧರಿದ್ರ ಮತಾಂಧ, ಅತ್ಯಾಚಾರಿ ಎಂದು ಚಾರಿತ್ರಿಕವಾಗಿ ದಾಖಲಾಗಿರುವ ವ್ಯಕ್ತಿಯ ಪೂಜೆಗೆ ನನ್ನನ್ನು ಆಹ್ವಾನಿಸಬೇಡಿ'ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬಳಸಬೇಡಿ: ಅನಂತಕುಮಾರ ಹೆಗಡೆ
ಟಿಪ್ಪು ಜಯಂತಿಗೆ ತಮ್ಮನ್ನು ಆಹ್ವಾನಿಸದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಅಕ್ಟೋಬರ್ 14ರಂದು ಪತ್ರ ಬರೆದಿದ್ದರು. ಇದಾದ ಬಳಿಕ ಟಿಪ್ಪು ಹೆಸರು ಹೇಳದೆ ಈ ರೀತಿಯಾಗಿ ಫೇಸ್ಬುಕ್ ನಲ್ರಿಲಿ ಬರೆದುಕೊಂಡಿದ್ದು, ಸಚಿವರ ಈ ಪೋಸ್ಟ್ ಗೆ ಅನೇಕರು ಬೆಂಬಲ ನೀಡಿ ಕಮೆಂಟ್ ಕೂಡ ಮಾಡಿದ್ದಾರೆ. ಇನ್ನು ಕೆಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯೂ ಕೂಡ ಅನಂತಕುಮಾರ್ ಹೆಗಡೆ ಅವರು ಟಿಪ್ಪು ಜಯಂತಿ ಬೇಡ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೇ ಶಿರಸಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಯ ವೇಳೆ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು. ಈ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪೊಲೀಸರು ತಡೆದಿದ್ದರು.
'ನಿಷೇಧಾಜ್ಞೆ ಜಾರಿ ಇದೆ, ಗುಂಪು ಗುಂಪಾಗಿ ಸೇರಬೇಡಿ. ಕೈಗೆ ಕಟ್ಟಿದ್ದ ಕಪ್ಟು ಪಟ್ಟಿ ತೆಗೆಯಿರಿ' ಎಂದೂ ಕೂಡ ಅಂದು ಹೇಳಿದ್ದರು. 'ಇದೆಂಥಾ ದೌರ್ಜನ್ಯ? ಕೈಗೆ ಕಟ್ಟಿದ ಕಪ್ಪು ಪಟ್ಟಿ ತೆಗೆಯಬೇಕೆಂದರೆ ಉಟ್ಟ ಬಟ್ಟೆಯನ್ನು ತೆಗೆಯುತ್ತೇವೆ' ಎಂದು ರಸ್ತೆಯಲ್ಲಿಯೇ ತೊಟ್ಟ ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದ್ದರು.