'ಮಾತಿನ ಮಲ್ಲ'ನಿಗೆ ಮಾತಲ್ಲೇ ಟಕ್ಕರ್ ಕೊಡ್ತಾರಾ ಆನಂದ್ ಅಸ್ನೋಟಿಕರ್?
ಕಾರವಾರ, ಮಾರ್ಚ್ 14: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಅಭ್ಯರ್ಥಿ, ಮಾತಿನ ಮಲ್ಲ, ಕೇವಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಅನಂತಕುಮಾರ ಹೆಗಡೆಗೆ ಈ ಬಾರಿ ಟಕ್ಕರ್ ಕೊಡಲು ಸರಿಯಾದ ಅಭ್ಯರ್ಥಿಯನ್ನು 'ಕೈ-ದಳ' ಆಯ್ಕೆ ಮಾಡಿದೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಇಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರ ಕನ್ನಡದ ಜನರಲ್ಲಿ ಈಗಾಗಲೇ ಉತ್ತರವೂ ಸಿಕ್ಕಿದೆ.
ಹೌದು, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಅನಂತಕುಮಾರ ಹೆಗಡೆಗೆ ಎದುರಾಳಿಯಾಗಿ ನಿಲ್ಲುವುದು ಬಹುತೇಕ ಖಚಿತಗೊಂಡಿದೆ.
ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬುಧವಾರ ಶಿರಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ, ಜೆಡಿಎಸ್ ಗೆ ತಾವು ಕ್ಷೇತ್ರ ಬಿಟ್ಟುಕೊಡದಿರಲು ತೀರ್ಮಾನಿಸಿದ್ದಾರೆ. ಆದರೆ, ಅಷ್ಟೊರೊಳಗೆ ರಾತ್ರೋರಾತ್ರಿ ಹೈಕಮಾಂಡ್ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ.
ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಜ್ಜು
ಇದೀಗ ಈ ವಿಚಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯದಲ್ಲಿ ಇರಿಸುಮುರಿಸುಗೂ ಕಾರಣವಾಗಿದೆ. ಆದರೆ, ಬಿಜೆಪಿಯನ್ನು ಮಣಿಸಲು ಮೈತ್ರಿಯಾಗಿ ಬೆಂಬಲಿಸುವುದು ಎರಡೂ ಪಕ್ಷಕ್ಕೂ ಅನಿವಾರ್ಯವಾಗಿದೆ. ಮುಂದೆ ಓದಿ...
ಆನಂದ್ ಅಸ್ನೋಟಿಕರ್ ಪರ್ಫೆಕ್ಟ್!
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಆಂತರಿಕ ಮೂಲಗಳ ಪ್ರಕಾರ ಬಿಜೆಪಿಯ ಭದ್ರಕೋಟೆ ಉತ್ತರ ಕನ್ನಡದಲ್ಲಿ ಗೆಲುವು ಸಾಧಿಸಲು ಆನಂದ್ ಅಸ್ನೋಟಿಕರ್ ಪರ್ಫೆಕ್ಟ್ ಕ್ಯಾಂಡಿಡೇಟ್! ಜೆಡಿಎಸ್ ನಿಂದ ಶಶಿಭೂಷಣ ಹೆಗಡೆ, ರವೀಂದ್ರ ನಾಯ್ಕ, ಮಧು ಬಂಗಾರಪ್ಪ ಅವರ ಹೆಸರುಗಳು ಕೂಡ ಕೇಳಿ ಬಂದಿದ್ದವು. ಆದರೆ, ಇಲ್ಲಿಂದ ಹೈಕಮಾಂಡ್ ಗೆ ಹೋಗಿದ್ದು ಕೇವಲ ಆನಂದ್ ಅಸ್ನೋಟಿಕರ್ ಹೆಸರು ಮಾತ್ರ. ಹೀಗಾಗಿ ಅವರನ್ನೇ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿ ಉಳಿದಿದೆ.
'ರಾಹುಲ್ ರಫೆಲ್ ಅಂದ್ರೆ 3 ಚಕ್ರದ ಸೈಕಲ್ ಅಂದುಕೊಂಡಿದ್ದಾರೆ'
ಅವರ ಎದುರು ನಿಂತರೆ ಸೋಲು ಖಚಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತಗಳು ಹಿಂದುತ್ವದ ಅಲೆಯಲ್ಲಿ ತೇಲಿ ಬರುತ್ತದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಅನಂತಕುಮಾರ ಹೆಗಡೆ, ಐದು ಬಾರಿ ಸಂಸದರಾದರು. ಅವರ ಎದುರು ನಿಂತರೆ ಸೋಲು ಖಚಿತ ಎಂದು ತಿಳಿದ ಇತರ ಪಕ್ಷದವರು, ಅವರಿಗೆ ಎದುರು ಮಾತನಾಡಲು ಕೂಡ ಹೋಗುತ್ತಿರಲಿಲ್ಲ. ಅವರೇನೇ ಹೇಳಿಕೆಗಳನ್ನು ನೀಡಿದರೂ ಕೇಳಿಸಿಕೊಂಡು ಸುಮ್ಮನೆ ಕೂರುತ್ತಿದ್ದುದೇ ಎದುರಾಳಿ ಪಕ್ಷಗಳ ಮೈನಸ್ ಹಾಗೂ ಅನಂತಕುಮಾರ ಹೆಗಡೆಯ ಪ್ಲಸ್ ಪಾಯಿಂಟ್ ಆಗಿತ್ತು.
ಆರ್.ವಿ.ದೇಶಪಾಂಡೆ ಅಲ್ಲ, ಅವರು ಕಮಿಷನ್ ಪಾಂಡೆ: ಸುನೀಲ್ ಹೆಗ್ಡೆ ವಾಗ್ದಾಳಿ
ಇಲ್ಲಿ ಮತ್ತೊಬ್ಬರನ್ನು ಬೆಳೆಸಲಿಲ್ಲ
ಬಿಜೆಪಿಯವರೇ ಹೇಳುವಂತೆ, ಕಾಂಗ್ರೆಸ್ ಜಿಲ್ಲೆಯಲ್ಲಿ ಬಹಳ ಮೂರ್ಖ ಪಕ್ಷ. ಮಾತನ್ನೇ ಮತವನ್ನಾಗಿ ಮಾಡಿಕೊಂಡಿರುವ ಅನಂತಕುಮಾರ ಹೆಗಡೆಯನ್ನು ಸೋಲಿಸಲು ಆರ್.ವಿ.ದೇಶಪಾಂಡೆಯಂಥ ಹಿರಿ ತಲೆಯ ಕಾಂಗ್ರೆಸ್ಸಿಗರಿಗೆ ದೊಡ್ಡ ಕೆಲಸವೇನಲ್ಲ. ಆದರೆ, ಕಾಂಗ್ರೆಸ್ ಎಡವಿದ್ದೇ ಕಾರ್ಯಕರ್ತರನ್ನು ಬೆಳೆಸುವಲ್ಲಿ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಿರಸಿಯ ಭೀಮಣ್ಣ ನಾಯ್ಕ ಎಲ್ಲ ಹಂತದಲ್ಲೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಅರ್ಹರಾಗಿರುವ ವ್ಯಕ್ತಿ. ಆದರೆ, ಅವರನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಕಡೆಗಣಿಸುತ್ತ ಬಂದಿದ್ದೇ ಈಗ ಮುಳುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತ್ರ ಜಿಲ್ಲಾ ಕಾಂಗ್ರೆಸ್ ನಲ್ಲಿ ಬೆಳೆದರು ವಿನಾ, ಮತ್ತೊಬ್ಬರನ್ನು ಬೆಳೆಸುವ ಕಾರ್ಯಕ್ಕೆ ಇಳಿದಿಲ್ಲ.
ಟಿಕೆಟ್ ನಿಂದ ಹಿಂದೆ ಸರಿದ ಭೀಮಣ್ಣ
ಕಳೆದ ಒಂದೂವರೆ ದಶಕಗಳಿಂದ ದಶಕಗಳಿಂದಲೂ ಎಂಎಲ್ಎ ಟಿಕೆಟ್ ಗಾಗಿ ಭೀಮಣ್ಣ ನಾಯ್ಕರ ಬೆಂಬಲಿಗರು ಕಾಂಗ್ರೆಸ್ ಬಳಿ ಬೇಡಿಕೆ ಇಟ್ಟಿದ್ದರೂ ಕಾಂಗ್ರೆಸ್ ಕಡೆಗಣಿಸಿ, ಈ ಬಾರಿ ಟಿಕೆಟ್ ನೀಡಿತ್ತು. ಆದರೆ, ಕಾಂಗ್ರೆಸ್ ನ ಒಳ ಜಗಳದಿಂದ ಅವರು ಸೋಲು ಅನುಭವಿಸುವಂತಾಯಿತು. ಈ ಬಾರಿ ಭೀಮಣ್ಣ ಕೂಡ ಕಾಂಗ್ರೆಸ್ ನಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಭೀಮಣ್ಣ ನಾಯ್ಕ ಅವರ ಮನೆಯ ಮೇಲೆ ಐಟಿ ರೈಡ್ ಆದ ಸಂದರ್ಭ, ಬೆಂಗಳೂರಿನಲ್ಲಿ ದೊರೆತ ದಾಖಲೆ ಇಲ್ಲದ ಹಣದಲ್ಲಿ ಇವರ ಹೆಸರು ಕೇಳಿ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನವರು ಯಾರು ಕೂಡ ಸಹಾಯ ಮಾಡಿಲ್ಲ. ಇದು ಭೀಮಣ್ಣ ಅವರಿಗೆ ನೋವುಂಟು ಮಾಡಿತ್ತು. ಹೀಗಾಗಿ ಲೋಕಸಭಾ ಟಿಕೆಟ್ ನಿಂದ ಹಿಂದೆ ಸರಿದರು.
ಜೆಡಿಎಸ್ ಗೆ ಬಿಟ್ಟು ಕೊಟ್ಟ ಕಾಂಗ್ರೆಸ್
ಆದರೆ, ಈ ಬಾರಿ ಅನಂತಕುಮಾರ ಹೆಗಡೆ ಅವರನ್ನು ಎದುರು ಹಾಕಿಕೊಳ್ಳಲು ಸಮರ್ಥರು ಯಾರೂ ಇಲ್ಲದ ಸಂದರ್ಭ ಭೀಮಣ್ಣನಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಕುಳಿತಿತ್ತು. ಇದಕ್ಕೆ ಭೀಮಣ್ಣ ಒಪ್ಪದಿದ್ದಾಗ ಕಾಂಗ್ರೆಸ್ ಹಿಂದೆ ಸರಿದು, ಜೆಡಿಎಸ್ ಗೆ ಕ್ಷೇತ್ರ ಬಿಟ್ಟು ಕೊಟ್ಟಿದೆ.ಕಾಂಗ್ರೆಸ್ ನಲ್ಲಿ ನಿವೇತ್ ಆಳ್ವಾ, ಪ್ರಶಾಂತ್ ದೇಶಪಾಂಡೆ, ಬಿ.ಕೆ.ಹರಿಪ್ರಸಾದ್ ಅವರ ಹೆಸರುಗಳು ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಎಂದು ಕೇಳಿಬಂದಿದ್ದವು. ಆದರೆ, ಅನಂತಕುಮಾರ ಹೆಗಡೆ ಎದುರು ತಾವು ನಿತ್ತರೂ ಸೋಲುತ್ತೇವೆ ಎಂದು ಮನಗಂಡ ಹಳಬರು, ತಾವೇ ಆಕಾಂಕ್ಷಿಗಳ ಪಟ್ಟಿಯಿಂದ ಹಿಂದೆ ಸರಿದು, ಭೀಮಣ್ಣನ ಹೆಸರು ಸೂಚಿಸಿದ್ದರು.
ಆನಂದ್ ಅಸ್ನೋಟಿಕರ್ ಪರಿಚಯ
2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಸ್ನೋಟಿಕರ್ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸತೀಶ್ ಸೈಲ್ ಜಯ ಸಾಧಿಸಿದ್ದರು.ಈ ಫಲಿತಾಂಶದ ಬಳಿಕ ಅಸ್ನೋಟಿಕರ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದರೆ ಅವರ ಬೆಂಬಲಿಗರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರುವಂತೆ ಒತ್ತಾಯಿಸುತ್ತಿದ್ದರು. ಇದರಿಂದಾಗಿ ಆನಂದ್ ಆಸ್ನೋಟಿಕರ್ ಜೆಡಿಎಸ್ ಸೇರಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ಅಭ್ಯರ್ಥಿ ರೂಪಾಲಿ ನಾಯ್ಕ ಅವರ ಎದುರು ಪರಾಭವಗೊಂಡಿದ್ದರು. ಈ ಹಿಂದೆ ಸಚಿವರಾದ ಅನುಭವ ಕೂಡ ಆನಂದ್ ಅಸ್ನೋಟಿಕರ್ ಅವರಿಗೆ ಇದೆ.
15.34 ಲಕ್ಷ ಮತದಾರರಿರುವ ಉತ್ತರ ಕನ್ನಡದಲ್ಲಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ 5 ಹಾಗೂ ಕಾಂಗ್ರೆಸ್ 3 ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿದೆ.