ಪ್ರತೀ ತಾಲ್ಲೂಕಿಗೆ 2 ಗೋಶಾಲೆ, ಗೋ ಸೇವಾ ಆಯೋಗ ರಚನೆ: ಸಚಿವ ಪ್ರಭು ಚೌಹಾಣ್
ಕಾರವಾರ, ಜನವರಿ 19: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಎರಡರಂತೆ ಗೋಶಾಲೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಗೋ ಸೇವಾ ಆಯೋಗ ರಚನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದರು.
ವಧೆಗಾಗಿ ಗೋ ಸಾಗಣೆ ಮಾಡುವವರ ವಿರುದ್ಧ ದೂರು ನೀಡಲು ಹಾಗೂ ರೈತರಿಗೆ ಕೃಷಿ ಸಂಬಂಧಿ ವಿಚಾರಕ್ಕಾಗಿ ಗೋ ಸಾಗಣೆ ಮಾಡುವ ಸಲುವಾಗಿ ಯಾವುದೇ ಮಾಹಿತಿಗಳನ್ನು ಒದಗಿಸಲು ವಾರ್ ರೂಮ್ಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರೂ ಆಗಿರುವ ಪ್ರಭು ಚೌಹಾಣ್ ತಿಳಿಸಿದರು.

ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ
ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ-2020 ಸೋಮವಾರದಿಂದ ಜಾರಿಗೆ ಬಂದಿದ್ದು, ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯ ಹಾಗೂ ದಂಡದ ಪ್ರಮಾಣದಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

10 ಲಕ್ಷದವರೆಗೆ ದಂಡ
ಈ ಕಾಯ್ದೆಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಗ್ರಾಮಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸಭೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಕೂಡಾ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ 6 ವರ್ಷದವರೆಗೆ ಮತ್ತು ಮೊದಲನೆ ಬಾರಿಗೆ 50,000 ರಿಂದ 5 ಲಕ್ಷದವರೆಗೆ, ಎರಡನೇ ಬಾರಿ ಮಾಡಿದರೆ 10 ಲಕ್ಷದವರೆಗೆ ದಂಡ ವಿಧಿಸಬೇಕೆಂದು ತಿಳಿಸಿದರು.

ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳಿಗೆ ಮಾತ್ರ ಸೀಮಿತ
ಯಾವುದೇ ಗೋವುಗಳು ಕಸಾಯಿಖಾನೆಗೆ ಹೋಗಬಾರದು. ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಒಗಳು ರೈತರಲ್ಲಿ ಗೋ ಹತ್ಯೆಯ ಶಿಕ್ಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಯಿದೆಯಲ್ಲಿ ಜಾನುವಾರು ಎಂದರೆ ಹಸು ಕರು, ಎತ್ತು, ಹೋರಿಗಳು ಹಾಗೂ 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಆಗಿವೆ. ಇಂತಹ ಜಾನುವರುಗಳ ಸಾಗಾಣಿಕೆ ಮೇಲೆ ನಿರ್ಬಂಧವಿರುವುದರಿಂದ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿ ಅನುಮತಿ ನೀಡುವ ವ್ಯವಸ್ಥೆ ಮಾಡಬೇಕು ಎಂದರು. ಅವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣಿಕೆ ಮಾಡಬೇಕಾಗಿ ಬಂದಲ್ಲಿ ಪಶು ವೈದ್ಯರ ಪ್ರಮಾಣ ಪತ್ರ ಮತ್ತು ಮಾಲಿಕತ್ವದ ಹಾಗೂ ಎನಿಮಲ್ ಟ್ಯಾಗ್ ಹೊಂದಿರುವಂತೆ ನೋಡಿಕೊಳ್ಳಬೇಕು.
Recommended Video

ಆಹಾರ ಮತ್ತು ನೀರು ವಾಹನದಲ್ಲಿ ಇರುವಂತೆ ಸೂಚನೆ
ಅಲ್ಲದೇ ವಾಹನದಲ್ಲಿ 5 ರಿಂದ 6 ಜಾನುವಾರುಗಳಿಗೆ ಮಾತ್ರ ಸಾಗಾಣಿಕೆಗೆ ಅವಕಾಶ ನೀಡಬೇಕು ಮತ್ತು ಅಗತ್ಯ ಆಹಾರ ಮತ್ತು ನೀರು ವಾಹನದಲ್ಲಿ ಇರುವಂತೆ ಸೂಚಿಸಬೇಕು. ಗರ್ಭಧಾರಿತ ಜಾನುವಾರುಗಳಿಗೆ ಸಾಗಾಣಿಕೆ ಮಾಡಲು ಅವಕಾಶ ನೀಡಬಾರದು ಮತ್ತು ರಾತ್ರಿ 8ರಿಂದ ಬೆಳಗ್ಗೆ 6 ರವರೆಗಿನ ಅವಧಿಯಲ್ಲಿ ಕೂಡ ಸಾಗಾಣಿಕೆ ಅವಕಾಶ ನೀಡಬಾರದೆಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಹಾಜರಿದ್ದರು.












Click it and Unblock the Notifications