ಹೆದ್ದಾರಿಯಲ್ಲೇ ಕನ್ನಡ ನಟನ ಮೇಲೆ ಹಲ್ಲೆಗೆ ಯತ್ನ
ಬೆಂಗಳೂರು-ಮೈಸೂರು ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಯುಗಪುರುಷ ಚಿತ್ರದ ನಾಯಕ ನಟ ಅರ್ಜುನ್ದೇವ್ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ.
ರಾಮನಗರ, ಮೇ 30: ಬೆಂಗಳೂರು-ಮೈಸೂರು ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಯುಗಪುರುಷ ಚಿತ್ರದ ನಾಯಕ ನಟ ಅರ್ಜುನ್ದೇವ್ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ.
ರಾಮನಗರಕ್ಕೆ ತೆರಳುತ್ತಿದ್ದ ನಟ ಅರ್ಜುನ್ ದೇವ್ ಅವರಿದ್ದ ಕಾರಿನ ಮೇಲೆ ದಾಳಿ ನಡೆಸಿ, ಕಾರಿನ ಗಾಜು ಪುಡಿಪುಡಿ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕೆಎ 56 ಎಂ 6669 ಅಡಿ ರಿಜಿಸ್ಟರ್ ಆಗಿರುವ ಹ್ಯುಂಡೈ ಐ20 ಕಾರಿನಲ್ಲಿ ಬೆಂಗಳೂರಿನಿಂದ ರಾಮನಗರಕ್ಕೆ ಅರ್ಜುನ್ ದೇವ್ ಮಂಗಳವಾರ(ಮೇ 30)ದಂದು ಬೆಳಗ್ಗೆ ಪ್ರಯಾಣ ಆರಂಭಿಸಿದರು.

ರಾಮನಗರ ಜಿಲ್ಲಾ ಕೋರ್ಟ್ ಕಛೇರಿ ಮುಂಭಾಗ ಎಸ್ಬಿಎಂ ಬ್ಯಾಂಕ್ ಬಳಿ ಕಾರಿನಲ್ಲಿ ಅರ್ಜುನ್ ದೇವ್ ಅವರು ಸಾಗುತ್ತಿದ್ದಾಗ ಅವರ ಕಾರಿನ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು, ರಾಡ್ ನಿಂದ ಕಾರಿನ ಗಾಜು ಒಡೆದು ಪುಡಿ ಪುಡಿ ಮಾಡಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ನಟ ಅರ್ಜುನ್ ಹಾಜರಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಈ ಮಾರ್ಗವಾಗಿ ರಾಮನಗರಕ್ಕೆ ತೆರಳುತ್ತಿದ್ದರು. ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.












Click it and Unblock the Notifications