ವೈ.ಎಸ್.ವಿ.ದತ್ತಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ
ಬೆಂಗಳೂರು, ಜನವರಿ 03: ಕಳೆದ ವಿಧಾಣಸಭೆ ಚುನಾವಣೆಯಲ್ಲಿ ಸೋತು ನಿರಾಸೆ ಅನುಭವಿಸಿರುವ ಜೆಡಿಎಸ್ನ ಹಿರಿಯ ಮುಖಂಡ ವೈಎಸ್ವಿ.ದತ್ತ ಅವರಿಗೆ ಪಕ್ಷವು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡಿದೆ.
ಲೋಕಸಭಾ ಚುನಾವಣೆಯು ಪ್ರಸಕ್ತ ವರ್ಷ ನಡೆಯಲಿದ್ದು ಪಕ್ಷ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ನಮ್ಮ ಪಕ್ಷದ ನೂತನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ವೈ.ಎಸ್.ವಿ. ದತ್ತ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
— H D Devegowda (@H_D_Devegowda) January 3, 2019
ಇಂದು ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹಿರಿಯ ಹಾಗೂ ಸಜ್ಜನ ರಾಜಕಾರಿಣಿ ಎನಿಸಿಕೊಂಡಿರುವ ದತ್ತ ಅವರನ್ನು ಎಂಎಲ್ಸಿ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ ಜೆಡಿಎಸ್ ವರಿಷ್ಠರು ಈಗ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಸಲುವಾಗಿ ದತ್ತ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅಲ್ಲದೆ ಸ್ವಪಕ್ಷೀಯನಿಂದಲೇ ಹಿನ್ನಡೆ ಅನುಭವಿಸಿ ಪಕ್ಷದ ಮೇಲೆ ಮುನಿಸಿಕೊಂಡಿದ್ದ ದತ್ತ ಅವರಿಗೂ ಸಮಾಧಾನ ಮಾಡಲು ಈ ತಂತ್ರ ಅನುಸರಿಸಲಾಗಿದೆ.

ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ದೇವೇಗೌಡರು ಸಭೆಯಲ್ಲಿ ತಿಳಿಸಿದ್ದಾಗಿ ತಿಳಿದುಬಂದಿದೆ. ಆದರೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟಿರುವ ಕಾರಣ ಲೋಕಸಭೆ ಚುನಾವಣೆಗೆ ದತ್ತ ಅವರಿಗೆ ಟಿಕೆಟ್ ನೀಡುತ್ತಾರೆಯೋ ಇಲ್ಲವೋ ಎಂಬ ಅನುಮಾನ ಜಾಗೃತವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿರುವ ದತ್ತ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂಬ ಕೂಗು ಸಹ ಕೇಳಿಬರುತ್ತಿದೆ.












Click it and Unblock the Notifications