ಗ್ರಹಣಕ್ಕೂ ಮುನ್ನ ಕೇರಳದ ದೇವಾಲಯಕ್ಕೆ ಯಡಿಯೂರಪ್ಪ!
ಬೆಂಗಳೂರು, ಡಿಸೆಂಬರ್ 23 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೇರಳಕ್ಕೆ ತೆರಳಿದ್ದಾರೆ. ವಿವಿಧ ದೇವಾಲಯಗಳಿಗೆ ಅವರು ಭೇಟಿ ನೀಡಲಿದ್ದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸೋಮವಾರ ರಾತ್ರಿ ಬೆಂಗಳೂರಿನಿಂದ ಯಡಿಯೂರಪ್ಪ ಕೇರಳಕ್ಕೆ ತೆರಳಿದ್ದಾರೆ. ಮಂಗಳವಾರ ಕೇರಳದ ಐತಿಹಾಸಿಕ ತಳಿಪರಂಬ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿವಿಧ ದೇವಾಲಯಗಳಿಗೂ ಭೇಟಿ ಕೊಡಲಿದ್ದಾರೆ.
ಮಂಗಳವಾರ ಯಡಿಯೂರಪ್ಪ ಕೇರಳದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಕಣ್ಣೂರು ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಉಡುಪಿಗೆ ಭೇಟಿ ನೀಡಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆ. ಉಡುಪಿ ಮಠಕ್ಕೂ ಭೇಟಿ ನೀಡಲಿದ್ದಾರೆ.

ಡಿಸೆಂಬರ್ 26ರಂದು ಕಂಕಣ ಸೂರ್ಯ ಗ್ರಹಣವಿದೆ. ಅದಕ್ಕೂ ಮೊದಲು ಯಡಿಯೂರಪ್ಪ ಕೇರಳದ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಂದ ಬಳಿಕ 'ಧವಳಗಿರಿ' ನಿವಾಸದಲ್ಲಿ ಹೋಮವನ್ನು ಅವರು ಮಾಡಿಸಿದ್ದರು.
ಕಂಕಣ ಸೂರ್ಯ ಗ್ರಹಣವಿದ್ದು ವೃಶ್ಚಿಕ ಮತ್ತು ಧನಸ್ಸು ರಾಶಿಯವರ ಮೇಲೆ ಸಾಕಷ್ಟು ಪ್ರಭಾವ ಬಿರಲಿದೆ. ಯಡಿಯೂರಪ್ಪ ಅವರದ್ದು ವೃಶ್ಚಿಕ ರಾಶಿ. ಈ ಹಿನ್ನೆಲೆ ದೋಷ ಪರಿಹಾರಕ್ಕಾಗಿ ಹೋಮ ಹವನ ಮಾಡಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಕೇರಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು ಗೋಲಿಬಾರ್ ಖಂಡಿಸಿ ಯಡಿಯೂರಪ್ಪ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು.












Click it and Unblock the Notifications