ಯಡಿಯೂರಪ್ಪಗೆ ತಲೆನೋವಾದ ಸಂಪುಟ ವಿಸ್ತರಣೆ: ಆಕಾಂಕ್ಷಿಗಳು ಯಾರ್ಯಾರು?
ಬೆಂಗಳೂರು, ಡಿಸೆಂಬರ್ 10: ಉಪಚುನಾವಣೆಯಲ್ಲಿ 12 ಮಂದಿ ಬಿಜೆಪಿ ಅಭ್ಯರ್ಥಿಗಳು ಗೆದ್ದು 11 ಅನರ್ಹರು, ಅರ್ಹರಾಗಿ ಬದಲಾಗಿದ್ದಾರೆ. ಇವರೆಲ್ಲರಿಗೂ ಮಂತ್ರಿ ಸ್ಥಾನ ನೀಡುವುದಾಗಿ ಚುನಾವಣೆಗೆ ಮೊದಲೇ ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ.
ಆದರೆ ಯಡಿಯೂರಪ್ಪ ಮಾಡಿರುವ ವಾಗ್ದಾನ ಅವರಿಗೆ ಮುಳ್ಳಾಗುವ ಸಾಧ್ಯತೆಗಳು ತೋರುತ್ತಿವೆ. ಏಳು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲಿ ಈಗಾಗಲೇ ಹಲವು ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಇಂತಹಾ ಸಮಯದಲ್ಲಿ ಬಿಜೆಪಿ ಅರ್ಹರಾಗಿ ಬದಲಾದವರಿಗೆ ಸಚಿವ ಸ್ಥಾನದ ಉಡುಗೊರೆ ಕೊಟ್ಟಲ್ಲಿ ಇವರೆಲ್ಲಾ ಮುನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ಯಡಿಯೂರಪ್ಪ ನಾಳೆ ದೆಹಲಿಗೆ, ನಾಡಿದ್ದು ಸಂಪುಟ ವಿಸ್ತರಣೆ
ಬಿಜೆಪಿ ಸರ್ಕಾರ ರಚನೆಯಾಗಿ ಮೊದಲ ಹಂತದ ಸಂಪುಟ ವಿಸ್ತರಣೆ ಆದಾಗಲೇ ಬಿಜೆಪಿಯ ಕೆಲವು ಹಿರಿಯ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದರು. ಎರಡನೇ ಹಂತದ ಸಂಪುಟ ವಿಸ್ತರಣೆ ಇದೇ ವಾರದಲ್ಲಿ ನಡೆಯಲಿದ್ದು, ಈ ಬಾರಿ ಅರ್ಹರಾಗಿ ಬದಲಾದವರಿಗೆ ಮಾತ್ರವೇ ಸಂಪುಟದಲ್ಲಿ ಅವಕಾಶ ಸಿಗಲಿದೆ. ಹಾಗಾಗಿ ಬಿಜೆಪಿಯಲ್ಲಿ ಬಂಡಾಯ ಬುಗಿಲೇಳುವ ಸಾಧ್ಯತೆ ದಟ್ಟವಾಗಿದೆ.
16 ಸ್ಥಾನಕ್ಕೆ 25 ಕ್ಕೂ ಹೆಚ್ಚು ಆಕಾಂಕ್ಷಿಗಳು
ಪ್ರಸ್ತುತ ಬಿಜೆಪಿ ಬಳಿ 16 ಸಚಿವ ಸ್ಥಾನಗಳು ಬಾಕಿ ಇವೆ. ಇವುಗಳಲ್ಲಿ 11 ಸಚಿವ ಸ್ಥಾನ ಅರ್ಹರಾಗಿ ಬದಲಾಗಿರುವ ಶಾಸಕರಿಗೆ ನೀಡಲಾಗುತ್ತದೆ. ಉಳಿದ ಐದು ಸ್ಥಾನಕ್ಕೆ ಬಿಜೆಪಿಯಲ್ಲಿಯೇ 12 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇದರ ಜೊತೆಗೆ ಸೋತಿರುವ ಅನರ್ಹರಿಗೂ ಸಚಿವ ಸ್ಥಾನ ಕೊಡುವ ಸಾಧ್ಯತೆಯ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಇದಕ್ಕೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ.
ಸಾಲುಗಟ್ಟಿ ನಿಂತಿದ್ದಾರೆ ಬಿಜೆಪಿ ಶಾಸಕರು
ಅನರ್ಹರಿಂದ ಅರ್ಹರಾದ ಶಾಸಕರುಗಳಿಗೆ ಹಂಚಿ ಉಳಿಕೆ ಆಗುವ ಕೆಲವೇ ಕೆಲವು ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಸಾಲು-ಸಾಲು ಶಾಸಕರುಗಳು ಸಾಲುಗಟ್ಟಿ ನಿಂತಿದ್ದಾರೆ. ಈಗಾಗಲೇ ಹಲವು ಮೂಲಗಳ ಮೂಲಕ ಪಕ್ಷದ ವರಿಷ್ಠರ ಮೇಲೆ ಮೇಲೆ ಒತ್ತಡ ಹೇರಿಕೆ ಆರಂಭಿಸಿದ್ದಾರೆ.
ಹಲವು ಹಿರಿಯ ಶಾಸಕರು ಪಟ್ಟಿಯಲ್ಲಿ ಮೊದಲಿದ್ದಾರೆ
ಎಂಟು ಬಾರಿ ಶಾಸಕರಾಗಿರುವ ಉಮೇಶ್ ಕತ್ತಿ, ಆರು ಬಾರಿ ಗೆದ್ದಿರುವ ಎಸ್.ಅಂಗಾರ, ಮೈಸೂರಿನ ರಾಮದಾಸ್, ಹರತಾಳ ಹಾಲಪ್ಪ, ಹಾಲಾಡಿ ಶ್ರೀನಿವಾಸಶೆಟ್ಟಿ, ಎಂ.ವಿರೂಪಾಕ್ಷಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಎಸ್.ಬಿ.ನಡಹಳ್ಳಿ, ಸುನಿಲ್ ಕುಮಾರ್, ಕರುಣಾಕರರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಕೆಲವು ಹೊಸಬರೂ ಯುವಕರ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ.
ಮೊದಲೇ ಅಸಮಾಧಾನ ಹೊರಹಾಕಿದ್ದ ಕೆಲವು ಹಿರಿಯರು
ಮೇಲಿನ ಪಟ್ಟಿಯಲ್ಲಿರುವ ಬಹುತೇಕರು ಬಿಜೆಪಿಯ ಹಿರಿಯ ಶಾಸಕರಾಗಿದ್ದು, ಕೆಲವರು ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಿದಾಗಲೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಆದರೆ ಈಗ ಎರಡನೇ ಹಂತದ ವಿಸ್ತರಣೆಯಲ್ಲೂ ಸಚಿವ ಸ್ಥಾನ ತಪ್ಪಿದರೆ ಕೆಲವರಾದರೂ ಅಸಮಾಧಾನ ಹೊರಹಾಕುವುದು ಪಕ್ಕಾ.
ಇನ್ನೆರಡು ಡಿಸಿಎಂ ಸ್ಥಾನ ಸೃಷ್ಟಿ?
ಈಗಾಗಲೇ ಮೂರು ಡಿಸಿಎಂ ಸ್ಥಾನವನ್ನು ಸೃಷ್ಟಿಸಿರುವ ಯಡಿಯೂರಪ್ಪ ಇನ್ನೆರಡು ಡಿಸಿಎಂ ಹುದ್ದೆ ಸೃಷ್ಟಿಸುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರಿಗಾಗಿ ಈ ಹೆಚ್ಚುವರಿ ಡಿಸಿಎಂ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ ಎಂಬ ಮಾತೂ ಇದೆ.
ಯಡಿಯೂರಪ್ಪ ಅವರದ್ದೇ ನಿರ್ಧಾರ, ಹೈಕಮಾಂಡ್ ಹಸ್ತಕ್ಷೇಪ ಇಲ್ಲ
ಯಡಿಯೂರಪ್ಪ ಅವರು ನಾಳೆ ದೆಹಲಿಗೆ ತೆರಳಲಿದ್ದು ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಮೂಗು ತೂರಿಸುವ ಸಾಧ್ಯತೆ ಕಡಿಮೆ ಇದ್ದು, ಯಡಿಯೂರಪ್ಪ ಅವರದ್ದೇ ಅಂತಿಮ ನಿರ್ಧಾರ ಆಗಲಿದೆ.
ಆಂತರಿಕ ಒಡಕಿಗೆ ಕಾರಣವಾಗುತ್ತಾ ಸಂಪುಟ ವಿಸ್ತರಣೆ
ಬಿಜೆಪಿಯಲ್ಲಿ ಬಂಡಾಯದ ಸಾಧ್ಯತೆಗಳು ಕಡಿಮೆಯಾದರೂ ಪಕ್ಷದಲ್ಲಿ ಆಂತರಿಕ ಒಡಕಿಗೆ ಈ ಸಂಪುಟ ವಿಸ್ತರಣೆ ಮತ್ತು ಅರ್ಹರಾಗಿ ಬದಲಾಗಿರುವವರಿಗೆ ಕೊಡಲಾಗುತ್ತಿರುವ ರಾಜಮರ್ಯಾದೆ ಕಾರಣವಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.