ವಿಧಾನ ಪರಿಷತ್ನಲ್ಲಿ ಸಭಾ ನಾಯಕ ಯಾರು?
ಬೆಂಗಳೂರು, ಜುಲೈ 28 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ವಿಧಾನ ಪರಿಷತ್ನಲ್ಲಿ ಸಭಾ ನಾಯಕ ಯಾರು? ಎಂಬುದು ಸದ್ಯದ ಪ್ರಶ್ನೆ.
ಸೋಮವಾರ ಬಿ. ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಬೇಕು. ಧನವಿನಿಯೋಗ ಮಸೂದೆಗೂ ಒಪ್ಪಿಗೆ ಪಡೆಯಬೇಕು. ಈ ಮಸೂದೆಗೆ ವಿಧಾನ ಪರಿಷತ್ತಿನಲ್ಲಿಯೂ ಒಪ್ಪಿಗೆ ಪಡೆಯಬೇಕಾಗಿದೆ.
ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ಆದ್ದರಿಂದ, ವಿಧಾನ ಪರಿಷತ್ ಸಭಾ ನಾಯಕರ ನೇಮಕವಾಗಿಲ್ಲ. ಸೋಮವಾರ ಕಲಾಪ ನಡೆಯುವಾಗ ಮುಖ್ಯಮಂತ್ರಿಗಳು ಖುದ್ದಾಗಿ ಹಾಜರಾಗಿ ಮಸೂದೆಗೆ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಲಿದೆ.

ಮುಖ್ಯಮಂತ್ರಿಗಳು ವಿಧಾನ ಪರಿಷತ್ ಸದಸ್ಯರಾಗಿರಬೇಕು ಅಥವ ಮುಖ್ಯಮಂತ್ರಿಗಳಿಂದ ನಾಮ ನಿರ್ದೇಶನಗೊಂಡ ಸಚಿವರು ಸಭಾ ನಾಯಕರಾಗಿರುತ್ತಾರೆ. ಆದರೆ, ಸಚಿವ ಸಂಪುಟ ವಿಸ್ತರಣೆ ಆಗದ ಕಾರಣ ಸಭಾನಾಯಕರು ಇಲ್ಲವಾಗಿದೆ.
ಸೋಮವಾರ ಮಾತ್ರ ಅಧಿವೇಶನ ನಡೆಯುವುದರಿಂದ ಸ್ವತಃ ಮುಖ್ಯಮಂತ್ರಿಗಳು ವಿಧಾನ ಪರಿಷತ್ ಕಲಾಪದಲ್ಲಿ ಪಾಲ್ಗೊಂಡು ವಿಧೇಯಕಕ್ಕೆ ಒಪ್ಪಿಗೆ ಪಡೆಯಬಹುದು. ಬಳಿಕ ಸಚಿವ ಸಂಪುಟ ವಿಸ್ತರಣೆ ಆದ ಮೇಲೆ ಸಭಾ ನಾಯಕರ ನೇಮಕವಾಗಲಿದೆ.












Click it and Unblock the Notifications