ಬಿ.ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಎದುರಾಗಲಿದೆ ಪ್ರತಿಭಟನೆಯ ಸಂಕಟ
ಬೆಂಗಳೂರು, ಸೆ. 02: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಎನ್.ಪಿ.ಎಸ್. ನೌಕರರಿಗೆ ಸರ್ಕಾರದ ವಂತಿಗೆಯನ್ನು ಶೇಕಡ 10 ರಿಂದ ಶೇಕಡ 14 ರಷ್ಟು ಹೆಚ್ಚಳ ಮಾಡಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆದೇಶ ನೀಡಿದೆ. ಆದರೆ, ಈ ಆದೇಶ ವಿರುದ್ಧ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೊಸ ಪಿಂಚಣಿ ಯೋಜನೆ (ಎನ್.ಪಿ. ಎಸ್.) ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಎಂದು ಎನ್.ಪಿ. ಎಸ್. ನೌಕರರು ಆಗ್ರಹಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ.
ಹೊಸ ಎನ್ ಪಿಎಸ್ ಯೋಜನೆಯಡಿ ಪಿಂಚಣಿಯಲ್ಲಿಯಾಗಿರುವ ಬದಲಾವಣೆ ಕುರಿತಂತೆ ಕರ್ನಾಟಕ ಸರ್ಕಾರವುಆಗಸ್ಟ್ 31 ಶನಿವಾರದಂದು ಅಧಿಕೃತ ಆದೇಶ ಹೊರಡಿಸಿದೆ. ಏಪ್ರಿಲ್ 1 ರಿಂದಲೇ ಪರಿಷ್ಕರಣೆ ಜಾರಿಗೆ ಬರಲಿದ್ದು, ಆದರೆ, ಸರ್ಕಾರದ ಪಾಲಿನ ವಂತಿಗೆಗೆ ಬಡ್ಡಿದರ ಸಿಗುವುದಿಲ್ಲ ಎಂಬ ನಿಯಮ ತರಲಾಗಿದೆ.
ಈ ಯೋಜನೆಯಡಿ ಮಾಸಿಕ ವಂತಿಗೆ ನೌಕರರ ಮೂಲವೇತನ ಮತ್ತು ತುಟ್ಟಿ ಭತ್ಯೆ ಯ ಶೇಕಡ 10 ರಷ್ಟು ನಿಗದಿಯಾಗಿತ್ತು. ಈಗ ಸರ್ಕಾರದ ವಂತಿಗೆಯನ್ನು ಶೇ 14ಕ್ಕೇರಿಸಲಾಗಿದೆ. 2006ರಲ್ಲಿ ಜಾರಿಗೆ ಬಂದ ಈ ನಿಯಮವು ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಅನ್ವಯವಾಗಲಿದೆ.

ಇದಲ್ಲದೆ, ರಾಜ್ಯದ ಸರ್ಕಾರದ 6ನೇ ವೇತನ ಆಯಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಜಾರಿಯಲ್ಲಿರುವ ನೂತನ ಪಿಂಚಣಿ ಯೋಜನೆ ಬಗ್ಗೆ ಸರ್ಕಾರಿ ನೌಕರರು ತಗಾದೆ ತೆಗೆದು, ಯೋಜನೆಯಲ್ಲಿ ಬದಲಾವಣೆಗಾಗಿ ನಿರಂತರ ಹೋರಾಟ ನಡೆಸಿರುವುದು ಗೊತ್ತಿರಬಹುದು. ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಬೇಕಾದ ಕನಿಷ್ಟ ಸೇವಾವಧಿಯನ್ನು ತಗ್ಗಿಸಲಾಗಿದೆ.
ಹೊಸ ಪಿಂಚಣಿ ಯೋಜನೆಯಂತೆ, ನಿವೃತ್ತ ಸರ್ಕಾರಿ ನೌಕರರಿಗೆ ಒಂದೇ ಹಂತದಲ್ಲಿ ಪಿಂಚಣಿ ಮೊತ್ತ ಕೈ ಸೇರಲಿದೆ. ಆದರೆ ಹಳೆ ಪಿಂಚಣಿ ಯೋಜನೆಯಲ್ಲಿ ನೌಕರನ ವೇತನದ ಶೇಕಡಾ 50ರಷ್ಟು ಮೊತ್ತ ಪ್ರತಿ ತಿಂಗಳು ಸಿಗುತ್ತಿತ್ತು. ಈ ನಿಯಮ ಬದಲಾಗಿರುವುದಕ್ಕೆ ತೀವ್ರ ಆಕ್ಷೇಪ ಕೇಳಿ ಬಂದಿದೆ.












Click it and Unblock the Notifications