'ಅನುಭವ ಮಂಟಪ' ಸ್ಥಾಪನೆಗೆ ನೀತಿ ಸಂಹಿತೆ ಅಡ್ಡಿ?
ಬೆಂಗಳೂರು, ಸೆಪ್ಟೆಂಬರ್ 24: ಉಪಚುನಾವಣೆ ಹೊಸ್ತಿಲಲ್ಲಿ ಲಿಂಗಾಯತ ಮತಗಳು ಬಿಜೆಪಿ ಬಿಟ್ಟು ಚದುರದಂತೆ ತಡೆಯಲು ಯಡಿಯೂರಪ್ಪ ಅವರು ಹೊಸ ಘೋಷಣೆಯೊಂದನ್ನು ಮಾಡಿದ್ದರು, ಆದರೆ ಅದಕ್ಕೆ ನೀತಿ ಸಂಹಿತೆ ಅಡ್ಡಿ ಆಗುವ ಸಾಧ್ಯತೆ ಇದೆ.
ಬೀದರ್ನಲ್ಲಿ 'ಅನುಭವ ಮಂಟಪ' ಸ್ಥಾಪಿಸುವುದಾಗಿ ಸಿಎಂ ಯಡಿಯೂರಪ್ಪ ಅವರು ಘೋಷಿಸಿದ್ದು, ಕೆಲವೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದರು. ಉಪಚುನಾವಣೆ ಘೋಷಣೆಯಾದ ನಂತರ ಘೋಷಿಸಲಾದ ಈ ಯೋಜನೆ ಮೇಲೆ ಆಯೋಗದ ಕೆಂಗಣ್ಣು ಬಿದ್ದಿದೆ.
12ನೇ ಶತಮಾನದಲ್ಲಿ ಅಸ್ಥಿತ್ವದಲ್ಲಿದ್ದ ಬಸವಣ್ಣ ವಿರಚಿತ 'ಅನುಭವ ಮಂಟಪ' ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ತರುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿತ್ತು. ರಾಜ್ಯದ ಸಾಮಾಜಿಕ, ಸಾಂಸ್ಕತಿಕ ಇತಿಹಾಸದಲ್ಲಿ 'ಅನುಭವ ಮಂಟಪ' ಅತ್ಯಂತ ಪ್ರಮುಖ ಪಾತ್ರವಹಿಸಿದೆ.

ಬಸವಣ್ಣ ಅವರು ಲಿಂಗಾಯತ ಧರ್ಮದ ಆದಿಗುರುವಂತಿದ್ದು, ಇವರಿಗೆ ಸಂಬಂಧಿಸಿದ 'ಅನುಭವ ಮಂಟಪ' ಸ್ಥಾಪನೆ ಮೂಲಕ ಬಿಜೆಪಿ ಪರವಾಗಿರುವ ಲಿಂಗಾಯತ ಮತಗಳನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಕಾರ್ಯ ಬಿಜೆಪಿ ಮಾಡುತ್ತಿದೆ.
ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿರುವಂತೆ, ಬೀದರ್ನಲ್ಲಿ ಬಸವಣ್ಣ ಅವರ ದೊಡ್ಡ ಪ್ರತಿಮೆ ಸಹ ನಿರ್ಮಾಣ ಮಾಡಲಿದ್ದು, ಇದಕ್ಕೆಂದೇ ಐವತ್ತು ಕೋಟಿ ರೂಪಾಯಿ ಹಣ ಎತ್ತಿಡಲಾಗಿದೆ.
ಕಳೆದ ವಾರವಷ್ಟೆ 'ಕಲ್ಯಾಣ ಕರ್ನಾಟಕ' ಕಾರ್ಯಕ್ರಮ ನಡೆಸಲಾಗಿದ್ದು, ಬಸವಕಲ್ಯಾಣದಲ್ಲಿ 'ಅನುಭವ ಮಂಟಪ' ಸ್ಥಾಪನೆ ಮಾಡಲು ಸಂಪುಟದ ಒಪ್ಪಿಗೆಯನ್ನು ಯಡಿಯೂರಪ್ಪ ಅವರು ಕೆಲವೇ ದಿನಗಳಲ್ಲಿ ಪಡೆಯಲಿದ್ದಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.












Click it and Unblock the Notifications