Breaking; ಬೀದರ್ನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ, ಯಡಿಯೂರಪ್ಪ ಗೈರು
ಬೆಂಗಳೂರು, ಅಕ್ಟೋಬರ್ 18; ಕರ್ನಾಟಕ ಬಿಜೆಪಿಯ ಜನಸಂಕಲ್ಪ ಯಾತ್ರೆ ಮತ್ತೆ ಆರಂಭವಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಗಳವಾರ ನಡೆದ ಯಾತ್ರೆಗೆ ಗೈರಾಗಿದ್ದಾರೆ.
ಮಂಗಳವಾರ ಬೀದರ್ ಜಿಲ್ಲೆಯ ಔರಾದ್ನಲ್ಲಿ ಬಿಜೆಪಿಯ ಜನಸಂಕಲ್ಪಯಾತ್ರೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶಕ್ಕೂ ಮೊದಲು ಔರಾರ್ ಪಟ್ಟಣದ ಪ್ರಸಿದ್ದ ಶ್ರೀ ಅಮರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಸಂಪುಟದ ಸದಸ್ಯರ ಜೊತೆ ಜನಸಂಕಲ್ಪ ಸಮಾವೇಶದ ವೇದಿಕೆಗೆ ಆಗಮಿಸಿದರು.
ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ದೆಹಲಿ ಪ್ರವಾಸದಲ್ಲಿರುವ ಕಾರಣ ಯಾತ್ರೆಗೆ ಗೈರಾಗಿದ್ದಾರೆ. ಕಳೆದ ವಾರ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಜೊತೆಯಾಗಿ ರಾಯಚೂರು, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬಿ. ಎಸ್. ಯಡಿಯೂರಪ್ಪ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, "ಕೇಂದ್ರ ಚುನಾವಣಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಬಂದಿದ್ದೇನೆ. ಇಂದು ಮೊದಲ ಸಭೆಯಲ್ಲಿ ಭಾಗಿಯಾಗಲಿದ್ದೇನೆ. ಪ್ರಮುಖ ಸಭೆಯಾಗಿರುವ ಹಿನ್ನಲೆ ಜನಸಂಕಲ್ಪ ಯಾತ್ರೆ ಮೊಟಕುಗೊಳಿಸಿ ದೆಹಲಿಗೆ ಬಂದಿದ್ದೇನೆ" ಎಂದು ಹೇಳಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಬಿಜೆಪಿ ತನ್ನ ಅತ್ಯುನ್ನತ ಸಮಿತಿಯಾಗಿರುವ ಕೇಂದ್ರಿಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಿದೆ.
ಈ ಸಮಿತಿಗೆ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಯಡಿಯೂರಪ್ಪ ಮಂಗಳವಾರ ಸಂಜೆ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಕುರಿತು ಚರ್ಚಿಸಲು ಸಭೆ ನಡೆಯುತ್ತಿದೆ.
ತಿರುಗೇಟು ನೀಡಿದ ಬೊಮ್ಮಾಯಿ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಜಂಟಿ ಪ್ರವಾಸವನ್ನು ಲೇವಡಿ ಮಾಡಿದ್ದರು. "ಬಸವರಾಜ ಬೊಮ್ಮಾಯಿಗೆ ಒಂಟಿಯಾಗಿ ಯಾತ್ರೆ ಹೋಗಲು ಧೈರ್ಯವಿಲ್ಲ. ಜನರು ಕಲ್ಲು ಹೊಡೆಯುತ್ತಾರೆ ಎಂಬ ಭಯ. ಅದಕ್ಕಾಗಿ ರಕ್ಷಣೆಗಾಗಿ ಯಡಿಯೂರಪ್ಪರನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಿದ್ದಾರೆ" ಎಂದು ಹೇಳಿದ್ದರು.
ಔರಾದ್ನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, "ಅಬ್ಬರಿಸಿ ಬೊಬ್ಬಿರಿದರೆ ಕೇಳುವವರು ಯಾರಿಲ್ಲ. ನಿಮ್ಮ ಕಾಲದ ಹಗರಣಗಳ ವಿವರಗಳನ್ನು ನಿಮ್ಮ ನಾಯಕ ರಾಹುಲ್ ಗಾಂಧಿಗೆ ಕಳಿಸಿಕೊಡಲಿದ್ದೇವೆ" ಎಂದು ತಿರುಗೇಟು ನೀಡಿದರು.












Click it and Unblock the Notifications