ಬಿಎಸ್ವೈ ಮರುಸೇರ್ಪಡೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕು
ಬೆಂಗಳೂರು, ಜ.10: ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸದ್ಯದಲ್ಲೇ ಅಲಂಕರಿಸಲಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ನಿನ್ನೆ ಯಡಿಯೂರಪ್ಪ ಅವರು ಬಿಜೆಪಿ ವಾಪಸಾಗಿದ್ದಕ್ಕೆ ಸಖತ್ ಖುಷಿಗೊಂಡಿದ್ದಾರೆ.
ಆ ಖುಷಿಯಲ್ಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷಕ್ಕೆ ಮರಳಿದ ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ ಎಂದು ಬಣ್ಣಿಸಿದ್ದಾರೆ. ಗಮನಾರ್ಹವೆಂದರೆ ಗುರುವಾರ ಕೆಜೆಪಿಯ ಆರು ಶಾಸಕರ ಪೈಕಿ ಯಡಿಯೂರಪ್ಪ, ಯುಬಿ ಬಣಕಾರ್ ಹಾಗೂ ವಿಶ್ವನಾಥ್ ಪಾಟೀಲ ಮಾತ್ರ ನಿನ್ನೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಸುಸಂದರ್ಭ:
ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಯಡಿಯೂರಪ್ಪ ಸೇರ್ಪಡೆಗೊಳ್ಳುತ್ತಿರುವ ಈ ಸುಸಂದರ್ಭ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ದಿನ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 'ಪಕ್ಷಕ್ಕೆ ರಾಜ್ಯಾಧ್ಯಕ್ಷರಾಗಿದ್ದ ಎಲ್ಲರೂ ಸಭೆಯಲ್ಲಿ ಉಪಸ್ಥಿತರಿದ್ದೇವೆ. ನಾವೆಲ್ಲರೂ ಸೇರಿ ಬಿಜೆಪಿ ರಥವನ್ನು ಎಳೆಯುವ ಕೆಲಸವನ್ನು ನಿರ್ವಹಿಸಬೇಕಿದೆ' ಎಂದೂ ಅವರು ಕರೆ ನೀಡಿದರು.

ಡಿವಿ ಸದಾನಂದಗೌಡ: ಈ ದಿನಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದೆವು
ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮಾತನಾಡಿ, ಯಡಿಯೂರಪ್ಪ ಪಕ್ಷಕ್ಕೆ ಮರಳುವರೋ, ಇಲ್ಲವೋ ಎಂಬ ಆತಂಕ ದೂರವಾಗಿ ಇಂದು ಅವರು ವಿದ್ಯುಕ್ತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ. ಆದರೆ ಕಾಂಗ್ರೆಸ್ಗೆ ಇದೀಗ ಆತಂಕ ಶುರುವಾಗಿದೆ' ಎಂದು ಮಾರ್ಮಿಕವಾಗಿ ನುಡಿದರು.
'ನಮ್ಮ ಹೋರಾಟಕ್ಕೆ ಇದೀಗ ಹೊಸ ದಿಕ್ಕು ಮೂಡಿದೆ. ಇವತ್ತು ರಾಜ್ಯ ಬಿಜೆಪಿಗೆ ಪುನರ್ಜನ್ಮ ದೊರೆತಂತಾಗಿದೆ. ಈ ದಿನಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದೆವು. ಎಲ್ಲರೂ ಒಂದಾಗಿ ಇನ್ನು ಮುಂದೆ ಕೆಲಸ ನಿರ್ವಹಿಸೋಣ' ಎಂದು ಡಿವಿಎಸ್ ಕರೆ ನೀಡಿದರು.

ಕೆಎಸ್ ಈಶ್ವರಪ್ಪ: ಬೇರೆಯಾಗಿದ್ದ ಅಣ್ಣ-ತಮ್ಮಂದಿರು ಒಗ್ಗೂಡಿದ್ದೇವೆ
ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಮಾತನಾಡಿ 'ಒಡೆದ ಮನೆಯಾಗಿದ್ದ ಬಿಜೆಪಿ ಇಂದು ಒಂದಾಗಿದೆ. ಬೇರೆ ಬೇರೆಯಾಗಿದ್ದ ಅಣ್ಣ-ತಮ್ಮಂದಿರು ಒಗ್ಗೂಡಿದ್ದೇವೆ' ಎಂದಿದ್ದಾರೆ. 'ಇನ್ನು ಮುಂದೆ ಒಂದಾದ ನಾವೆಲ್ಲರೂ ಪಕ್ಷ ಸಂಘಟನೆಯೊಂದಿಗೆ ನಡೆಯುತ್ತೇವೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಏನಂದರು?
'ನಾವು ಸಹೋದರರು ಪಾಂಡವರ ರೀತಿ ನಾವೆಲ್ಲ ಒಂದಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಈ ಸಹೋದರರ ಸವಾಲನ್ನು ಎದುರಿಸಿ. ನಾವು ಒಂದಾಗಿದ್ದರಿಂದ ಕಾಂಗ್ರೆಸ್ ಪಕ್ಷದ ಕೌಂಟ್ ಡೌನ್ ಆರಂಭವಾಗಿದೆ. ಕೌರವರ ವಿರುದ್ಧ ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕವನ್ನಾಗಿ ಮಾಡುತ್ತೇವೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ: ಜನರ ಅಪೇಕ್ಷೆ ಇಬ್ಬರೂ ಒಂದಾಗುವುದೇ ಆಗಿತ್ತು
ಈ ದಿನ ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ವಿಶಿಷ್ಟ ದಿನ. ರಾಜ್ಯದ ಜನರ ಅಪೇಕ್ಷೆ ಇಬ್ಬರೂ ಒಂದಾಗುವುದೇ ಆಗಿತ್ತು. ಎಲ್ಲಿ ಕಳೆದುಕೊಂಡಿದ್ದೆವೊ ಅಲ್ಲೇ ಹುಡುಕಿ ಪಡೆಯುವ ಯತ್ನ ಮಾಡುತ್ತೇವೆ. ಕಾಂಗ್ರೆಸ್ಸಿಗೆ ತಕ್ಕ ಉತ್ತರ ನೀಡುತ್ತೇವೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಕಥೆಯೇನು?:
ಕೆಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು ಬೆಂಗಳೂರಿನ ಬಿಜೆಪಿ ಕಚೇರಿ ಸಮೀಪ ಆಗಮಿಸಿ ಸೇರ್ಪಡೆಯಾಗದೆ ವಾಪಸಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಕಚೇರಿಗೆ ಸಮೀಪದಲ್ಲಿನ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಆಗಮಿಸಿದ ನಾಗಮಾರಪಲ್ಲಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ನಿವಾಸಕ್ಕೆ ಮರಳಿದರು.
ಸ್ವಕ್ಷೇತ್ರ ಔರಾದ್ನಲ್ಲಿ ಅದ್ಧೂರಿ ಸಮಾವೇಶ ನಡೆಸಿ, ಜಿಲ್ಲಾ ಕೆಜೆಪಿ ಕಾರ್ಯಕರ್ತರೊಂದಿಗೆ ಪಕ್ಷಕ್ಕೆ ಸೇರುತ್ತೇನೆ. ಬೀದರ ಲೋಕಸಭೆ ಕ್ಷೇತ್ರಕ್ಕೆ ತಮ್ಮ ಪುತ್ರ ಸೂರ್ಯಕಾಂತಗೆ ಟಿಕೆಟ್ ನೀಡುವಂತೆ ಯಾವುದೇ ಷರತ್ತು ಹಾಕಿಲ್ಲ. ಆದರೆ, ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಸ್ಪಷ್ಟಪಡಿಸಿದರು.












Click it and Unblock the Notifications