ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಗುರುವಾರ ಪ್ರಮಾಣ?
ಬೆಂಗಳೂರು, ಮೇ 16 : ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮೇ 17ರಂದು ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎಲ್ಲ ಅಂದುಕೊಂಡಂತೆ ನಡೆದರೆ, ಸರಿಯಾಗಿ 12.20 ಗಂಟೆಗೆ 75 ವರ್ಷದ ಹಿರಿಯ ರಾಜಕಾರಣಿ, ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
22 ವರ್ಷದ ಹಿಂದಿನ 'ಕರ್ಮ' ಕಾಂಗ್ರೆಸ್ಗೆ ಎರವಾಗಲಿದೆಯೇ?
ಇಬ್ಬರು ಪಕ್ಷೇತರರು ಮತ್ತು ಕೆಲ ಬಂಡಾಯ ಶಾಸಕರ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ.
ಇತ್ತೀಚಿನ ಬೆಳವಣಿಗೆ : ಎಲ್ಲವೂ ಯಡಿಯೂರಪ್ಪ ಅಥವಾ ಬಿಜೆಪಿ ರಾಷ್ಟ್ರೀಯ ನಾಯಕರು ಅಂದುಕೊಂಡಂತೆ ನಡೆಯಬೇಕಲ್ಲ? ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ, ಯಡಿಯೂರಪ್ಪನವರಿಗೆ ಅವಕಾಶ ನೀಡಬಾರದು, ತಮ್ಮ ಬಳಿ ಬಹುಮತ ಸಾಬೀತು ಪಡಿಸಲು ಸಾಕಷ್ಟು ಶಾಸಕರು ಇರುವುದರಿಂದ ತಮಗೇ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಬುಧವಾರ ಸಂಜೆ ಮನವಿ ಸಲ್ಲಿಸಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೇ ಮೊದಲ ಅವಕಾಶ?
ಸದ್ಯಕ್ಕೆ ಯಾವುದೇ ನಿರ್ಣಯ ತೆಗೆದುಕೊಂಡಿರದ ವಜುಭಾಯಿ ವಾಲಾ ಅವರು, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಕಾನೂನು ತಜ್ಞರ ಸಲಹೆಯನ್ನು ರಾಜ್ಯಪಾಲರು ತೆಗೆದುಕೊಂಡಿದ್ದೇ ಆದರೆ, ಮೊದಲ ಅವಕಾಶವನ್ನು ಜೆಡಿಎಸ್-ಕಾಂಗ್ರೆಸ್ಸಿಗೇ ನೀಡಬೇಕಾಗುತ್ತದೆ. ಆಗ, ಯಡಿಯೂರಪ್ಪನವರು ಕೈಕಟ್ಟಿ ಕುಳಿತುಕೊಳ್ಳಬೇಕಾಗುತ್ತದೆ.