ಸಿದ್ದರಾಮಯ್ಯಗೆ ಸವಾಲು ಹಾಕಿದ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಮೇ 18 : 'ಸಿದ್ದರಾಮಯ್ಯ ಧಿಮಾಕಿನ ಸಿಎಂ. ಸರ್ವೋದಯ ಸಮಾವೇಶದಲ್ಲಿ ಸರ್ಕಾರದ 2 ವರ್ಷದ ಸಾಧನೆಗಳನ್ನು ಹೇಳುವುದು ಬಿಟ್ಟು, ಮೋದಿಯನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಚರ್ಚಿಸಲು ಬಹಿರಂಗ ವೇದಿಕೆಗೆ ಬನ್ನಿ' ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.
ಸೋಮವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಸಿದ್ದರಾಮಯ್ಯ ಧಿಮಾಕಿನ ಸಿಎಂ, ಇಂತಹ ಮುಖ್ಯಮಂತ್ರಿಯನ್ನು ನಾನೆಂದು ನೋಡಿಲ್ಲ' ಎಂದು ಟೀಕಿಸಿದರು. [ಕೂದಲು ಇದ್ರೆ ತಾನೆ ಬೋಳಿಸಿಕೊಳ್ಳೋದು : ಸಿದ್ದು ಲೇವಡಿ]

'ಕರ್ನಾಟಕದಲ್ಲಿ ಪುನಃ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ' ಎಂದು ಯಡಿಯೂರಪ್ಪ ಹೇಳಿದರು. 'ಸರ್ಕಾರದ ಎರಡು ವರ್ಷದ ಸಾಧನೆ ಶೂನ್ಯ' ಎಂದು ಹೇಳಿದ ಯಡಿಯೂರಪ್ಪ 'ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಕೊಟ್ಟ ಅನುದಾನವನ್ನು ಸಿದ್ದರಾಮಯ್ಯ ಮರೆತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಸಂವಾದದ ಮುಖ್ಯಾಂಶಗಳು
* 'ನಾನು ಮೊದಲಿನ ಯಡಿಯೂರಪ್ಪ ಆಗುತ್ತೇನೆ. ಇವತ್ತಿನಿಂದ ಮೊದಲ ದಿನ ಇದ್ದ ಯಡಿಯೂರಪ್ಪನನ್ನು ನೀವು ನೋಡುತ್ತೀರಿ. ನಾನು ಕೇಂದ್ರ ಸಚಿವ ಸ್ಥಾನದ ಅಕಾಂಕ್ಷಿಯಲ್ಲ, ನನಗೆ ಕೇಂದ್ರ ರಾಜಕಾರಣದ ಬಗ್ಗೆ ಇಷ್ಟವಿಲ್ಲ, ವಾಜಪೇಯಿ ಕಾಲದಲ್ಲೇ ಕೇಂದ್ರಕ್ಕೆ ಬರುವಂತೆ ಕರೆದಿದ್ದರು. ಆಗಲೇ ಬೇಡ ಎಂದಿದ್ದೆ. ನನ್ನ ಗಮನ ರಾಜ್ಯದ ಬಗ್ಗೆ ಮಾತ್ರ'. [ಎರಡು ವರ್ಷದ ಆಡಳಿತ ತೃಪ್ತಿ ನೀಡಿದೆ : ಸಿದ್ದರಾಮಯ್ಯ]
* 'ಸಿದ್ದರಾಮಯ್ಯ ಧೀಮಾಕಿನ ಸಿಎಂ, ರಾಜ್ಯದಲ್ಲಿ ಈ ರೀತಿಯ ಸೊಕ್ಕು, ಧಿಮಾಕಿನ ಮುಖ್ಯಮಂತ್ರಿಗಳನ್ನು ಎಂದೂ ನೋಡಿಲ್ಲ. ದಾವಣಗೆರೆ ಸಮಾವೇಶದಲ್ಲಿ ಸರ್ಕಾರದ 2 ವರ್ಷದ ಸಾಧನೆಗಳನ್ನು ಹೇಳಬೇಕಿತ್ತು. ಆದರೆ, ಸರ್ಕಾರದ ಸಾಧನೆ ಶೂನ್ಯವಾಗಿದ್ದ ಕಾರಣ ವಿಪಕ್ಷಗಳನ್ನು, ಮೋದಿಯನ್ನು ಟೀಕಿಸುವುದಕ್ಕೆ ಸಮಾವೇಶವನ್ನು' ಬಳಸಿಕೊಂಡರು. [ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]
* 'ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ಒಂದು ವರ್ಷದಲ್ಲಿ ಮೋದಿ ಅವರಷ್ಟು ವಿದೇಶ ಪ್ರವಾಸ ಮಾಡಿದವರು ಬೇರೆ ಯಾರು ಇಲ್ಲ, ಎಲ್ಲ ಕಡೆ ಮಹತ್ವದ ಒಪ್ಪಂದಗಳು ನಡೆದಿವೆ. ಒಂದು ವರ್ಷದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ'.
* 'ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೈಗಾರಿಕೆಗಳು ಬಂದಿವೆ?. ಎಷ್ಟು ಕೈಗಾರಿಕೆಗಳು ಹೋಗಿವೆ ಎಂಬ ಅಂಕಿ ಅಂಶಗಳನ್ನು ಜನರ ಮುಂದಿಡಿ. ರಾಜ್ಯದಿಂದ ಕೈಗಾರಿಕೆಗಳು, ಉದ್ದಿಮೆ ಕಂಪನಿಗಳು ಹೊರ ಹೋಗುತ್ತಿವೆ ಇದಕ್ಕೆ ಕಾರಣವೇನೆಂದು ಸಿಎಂ ಆತ್ಮಾವಲೋಕನ ಮಾಡಿಕೊಳ್ಳಲಿ'.












Click it and Unblock the Notifications