ಕರ್ನಾಟಕ ಅಖಂಡವಾಗಿರಬೇಕು ಎಂದು ಕಡೆಗೂ ದನಿಯೆತ್ತಿದ ಯಡಿಯೂರಪ್ಪ
ಬೆಂಗಳೂರು, ಜುಲೈ 28 : ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ವಿಕಾಸ ಸೌಧವನ್ನು ನಾವು ಕಟ್ಟಿದ್ದರೆ, ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಉತ್ತರ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯವನ್ನು ನಾಶಮಾಡಲು ಹೊರಟಿದೆ ಎಂದು ಯಡಿಯೂರಪ್ಪ ಅವರು ಆಕ್ರೋಶ ಹೊರಹಾಕಿದ್ದಾರೆ.
ಐದು ದಿನಗಳ ಕಾಲ ಬೆಂಗಳೂರಿನಲ್ಲಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ತೆಗೆದುಕೊಂಡು, ಮತ್ತಷ್ಟು ಹುಮ್ಮಸ್ಸು ತುಂಬಿಕೊಂಡು ವಾಪಸ್ ಬಂದಿರುವ ಮಾಜಿ ಮುಖ್ಯಮಂತ್ರಿ (ಮೂರು ಬಾರಿ) ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕದ ವಿಭಜನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮೇಲೆ ತಿರುಗಿಬಿದ್ದಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ 75 ವರ್ಷಗಳ ಹಿರಿಯ ನಾಯಕ, ಯಾವುದೇ ಸಂದರ್ಭದಲ್ಲಿಯೂ ಕರ್ನಾಟಕ ವಿಭಜನೆಯಾಗುವುದನ್ನು ಸಹಿಸುವುದಿಲ್ಲ ಮತ್ತು ಅವಕಾಶವನ್ನೂ ನೀಡುವುದಿಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದರು.
ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ಟಿನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶಗೊಂಡಿರುವ ಹೋರಾಟಗಾರರು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮಾದರಿಯಲ್ಲಿಯೇ ಉತ್ತರ ಕರ್ನಾಟಕ ಹೊಸ ರಾಜ್ಯವಾಗಿ ಉದಯಿಸಬೇಕು ಎಂದು ಕೂಗೆಬ್ಬಿಸಿದ್ದಾರೆ.

ಆಗಸ್ಟ್ ನಲ್ಲಿ ಎರಡು ಕರ್ನಾಟಕ ಬಂದ್ ಗ್ಯಾರಂಟಿ
ಇದಕ್ಕಾಗಿ ಆಗಸ್ಟ್ 2, ಗುರುವಾರದಂದು ಉತ್ತರ ಕರ್ನಾಟಕ ಹೋರಾಟಗಾರರು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ, ಇಡೀ ಕರ್ನಾಟಕ ಅಖಂಡವಾಗಿರಬೇಕು ಎಂದು ಹೋರಾಟಗಾರರ ವಿರೋಧಿಗಳು, ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ತಿಂಗಳ ಕೊನೆಯಲ್ಲಿ ಮತ್ತೊಂದು ಕರ್ನಾಟಕ ಬಂದ್ ಮಾಡುವುದಾಗಿ ಬೆದರಿಸಿದ್ದಾರೆ. ಒಟ್ಟಿನಲ್ಲಿ ಆಗಸ್ಟ್ ತಿಂಗಳಲ್ಲಿ ಮಾತುಕತೆಗಳು ನಡೆಯಲಿದ್ದರೆ ಎರಡು ಬಂದ್ ಗಳನ್ನು ಕರ್ನಾಟಕದ ಜನತೆ ನೋಡಬೇಕಾಗುತ್ತದೆ.

ಹೋರಾಟಗಾರರಿಗೆ ಯಡಿಯೂರಪ್ಪ ಕಿವಿಮಾತು
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ದನಿ ಎತ್ತಬಾರದು ಎಂದು ಯಡಿಯೂರಪ್ಪನವರು ಹೋರಾಟಗಾರರಿಗೆ ಮತ್ತು ನೊಂದ ಉತ್ತರ ಕರ್ನಾಟಕದ ಜನತೆಗೆ ಕರೆ ನೀಡಿದ್ದು, ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜ್ಯವನ್ನು ಹೋಳಾಗಿಸುವುದರಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಕಿವಿಮಾತು ಹೇಳಿದರು. ಯಡಿಯೂರಪ್ಪ ಅವರು ಮಾತಿಗೆ ಹಲವಾರು ಕಡೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೆಲವರು ಯಡಿಯೂರಪ್ಪನವರು ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಹೋರಾಟಗಾರರೊಂದಿಗೆ ಮಾತುಕತೆಗೆ ಎಚ್ಡಿಕೆ ಸಿದ್ಧ
ದಿನದಿಂದ ದಿನಕ್ಕೆ ಉತ್ತರ ಕರ್ನಾಟಕ ರಾಜ್ಯದಿಂದ ಹೊರಬಿದ್ದು ಪ್ರತ್ಯೇಕ ಅಸ್ತಿತ್ವ ಕಂಡುಕೊಳ್ಳಬೇಕು, ಇಲ್ಲದಿದ್ದರೆ ಅಭಿವೃದ್ಧಿಯ ಕನಸು ಎಂದೂ ನನಸಾಗುವುದಿಲ್ಲ ಎಂಬ ಕೂಗು ದಿನದಿಂದ ದಿನಕ್ಕೆ ಆವೇಗವನ್ನು ಪಡೆದುಕೊಳ್ಳುತ್ತಲಿದೆ. ಇದಕ್ಕೆ ಕಾರಣ, ಬಜೆಟ್ಟಿನಲ್ಲಿ ಹೆಚ್ಚಿನ ಅನುದಾನವನ್ನು ಕುಮಾರಸ್ವಾಮಿಯವರು ರಾಮನಗರ, ಮಂಡ್ಯ ಮತ್ತು ಹಾಸನಕ್ಕೆ ನೀಡಿದ್ದೇ ಕಾರಣ ಎಂಬ ಅಸಮಾಧಾನ ಭುಗಿಲೆದ್ದಿದೆ. ಬಜೆಟ್ಟಿನಲ್ಲಿ ನಮಗೂ ಅನ್ಯಾಯವಾಗಿದೆ ಎಂದು ಕರ್ನಾಟಕ ಕರಾವಳಿಯಿಂದ ದನಿ ಕೇಳಿಬಂದಾಗ, ಚುನಾವಣೆಯಲ್ಲಿ ನಮ್ಮನ್ನು ತಿರಸ್ಕರಿಸುವಾಗ ಇದೇಕೆ ನಿಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಕುಮಾರಸ್ವಾಮಿಯವರೂ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಉತ್ತರ ಕರ್ನಾಟಕದ ಹೋರಾಟಗಾರರೊಂದಿಗೆ ಚರ್ಚೆಗೆ ತಾವು ಸದಾ ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್ಚುತ್ತಿರುವ ಹೋರಾಟದ ಕಿಚ್ಚು
ಕರ್ನಾಟಕ ಇಬ್ಭಾಗವಾಗುವುದು ಬೇಡ ಎಂಬ ಮಾತುಗಳನ್ನು ಕೇಳಿಸಿಕೊಳ್ಳಲು ಹೋರಾಟಗಾರರು, ಅದನ್ನು ಬೆಂಬಲಿಸುತ್ತಿರುವ ರಾಜಕಾರಣಿಗಳು ಕೇಳಿಸಿಕೊಳ್ಳಲು ಸಿದ್ಧರಿಲ್ಲ. ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಅವರಂಥ ಹಿರಿಯ ನಾಯಕರೊಂದಿಗೆ, ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃಂತ್ಯಂಜಯ ಸ್ವಾಮೀಜಿ ಹೋರಾಟಕ್ಕೆ ಧುಮುಕಿದ್ದು, ಉತ್ತರ ಕರ್ನಾಟಕಕ್ಕೆ ತಕ್ಷಣ ನ್ಯಾಯ ಒದಗಿಸದಿದ್ದರೆ ಸರಿ, ಇಲ್ಲದಿದ್ದರೆ ಬೆಳಗಾವಿ ರಾಜ್ಯದ ಎರಡನೇ ರಾಜಧಾನಿಯಾಗಬೇಕು ಎಂದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟ ಮಹದಾಯಿ ಹೋರಾಟಕ್ಕಿಂತಲೂ ಹೆಚ್ಚು ಕಿಚ್ಚು ತುಂಬಿಕೊಂಡಿದೆ.

ವಿಭಿನ್ನ ರಾಗ ತೆಗೆದಿರುವ ಬಿ ಶ್ರೀರಾಮುಲು
ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ರಾಜ್ಯ ಹೋಳಾಗಬಾರದು ಎಂಬ ದನಿಯೂ ಕೇಳಿಬರುತ್ತಿರುವ ಹೊತ್ತಿನಲ್ಲಿಯೇ, ಮೊಳಕಾಲ್ಮೂರಿನಿಂದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಬಿ ಶ್ರೀರಾಮುಲು ಅವರು, ಬೇಕಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂಬ ಹೋರಾಟದ ನೇತೃತ್ವ ನಾನು ವಹಿಸಿಕೊಳ್ಳಲು ಸಿದ್ಧ ಎಂದು ಘೋಷಿಸಿ, ಭಾರತೀಯ ಜನತಾ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಯಡಿಯೂರಪ್ಪ ಬೇಡ ಎನ್ನುತ್ತಿದ್ದರೆ ಶ್ರೀರಾಮುಲು ಇಬ್ಭಾಗ ಆಗಬೇಕು ಎಂದು ದನಿಯೇರಿಸಿದ್ದಾರೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ನೋಡೇಬಿಡೋಣ.

ಉತ್ತರ ಕರ್ನಾಟಕಕ್ಕೆ ಎಂದಿಗೂ ಅನ್ಯಾಯ
ಕರ್ನಾಟಕ ಒಡೆಯಬಾರದು ಎಂಬ ಮಾತನ್ನು ಒಪ್ಪಬಹುದಾದರೂ, ಉತ್ತರ ಕರ್ನಾಟಕ ಯಾವುದೇ ಸರಕಾರ ಬಂದರೂ, ಉತ್ತರ ಕರ್ನಾಟಕದ ನಾಯಕರು ಕೇಂದ್ರದಲ್ಲಿ ಮಂತ್ರಿಗಳಾದರೂ ಅಭಿವೃದ್ಧಿಯ ಪಥದತ್ತ ಸಾಗಿಯೇ ಇಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು. ರಸ್ತೆಗಳು ದಶಕಗಳು ಉರುಳಿದರೂ ಚೆನ್ನಾಗಿಲ್ಲ, ಬೇಕಾದಷ್ಟು ನದಿಗಳಿದ್ದರೂ ರೈತರ ಬಾಳು ಹಸನಾಗುತ್ತಿಲ್ಲ. ಉದ್ಯಮಗಳಿಲ್ಲ, ಉದ್ಯೋಗಳು ಸೃಷ್ಟಿಯಾಗುತ್ತಿಲ್ಲ. ಅಲ್ಲಿ ಕಲಿತವರು ಬೆಂಗಳೂರಿಗೆ ಉದ್ಯೋಗಕ್ಕಾಗಿ ಅರಸಿಕೊಂಡು ಬರುವಂತಾಗಿದೆ. ಇನ್ನು ಮಳೆಗಾಲ ಕೈಕೊಟ್ಟು ಬರಗಾಲ ಬಂದರಂತೂ ಇಡೀ ಕುಟುಂಬಕ್ಕೆ ಕುಟುಂಬವೇ ದಕ್ಷಿಣ ಕರ್ನಾಟಕಕ್ಕೆ ಜೀವನಕ್ಕೆ ಗುಳೆಯೆದ್ದು ಹೋಗುತ್ತಿವೆ. ಇದಕ್ಕೆಲ್ಲ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವೇ ಪರಿಹಾರವೆ?












Click it and Unblock the Notifications