ಮಾತೆ ಮಾಣಿಕೇಶ್ವರಿ ಲಿಂಗೈಕ್ಯ; ಅಂತಿಮ ದರ್ಶನಕ್ಕೆ ಜನ ಸಾಗರ
ಕಲಬುರಗಿ, ಮಾರ್ಚ್ 08: ಯಾನಗುಂದಿಯ ಮಾತೆ ಮಾಣಿಕೇಶ್ವರಿ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಮಾತೆಯ ಅಂತಿಮ ದರ್ಶನ ಪಡೆಯಲು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯ ಮಾತೆ ಮಾಣಿಕೇಶ್ವರಿ (87) ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಶ್ರಮದಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ವಿಧಿವಶರಾದರು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮಾತೆ ಮಾಣಿಕೇಶ್ವರಿಗೆ ಲಕ್ಷಾಂತರ ಭಕ್ತರು ಇದ್ದಾರೆ. ಪ್ರತಿ ವರ್ಷ ಶಿವರಾತ್ರಿ ದಿನ ಮಾತ್ರ ಗುಹೆಯಿಂದ ಹೊರಬಂದು ಭಕ್ತರಿಗೆ ಮಾತೆ ದರ್ಶನ ನೀಡುತ್ತಿದ್ದರು.

ಮಾತೆಯ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರುತ್ತಾರೆ. ಈ ಬಾರಿಯ ಶಿವರಾತ್ರಿ ಸಮಯದಲ್ಲಿ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಸ್ಟೇಚರ್ ಮೂಲಕ ಅವರನ್ನು ಕರೆತಂದು ಭಕ್ತರಿಗೆ ದರ್ಶನ ಕೊಡಿಸಲಾಗಿತ್ತು.
ಭಾನುವಾರ ಆಶ್ರಮದಲ್ಲಿಯೇ ಮಾತೆ ಮಾಣಿಕೇಶ್ವರಿ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಆಶ್ರಮದ ರಾಜಗೋಪುರದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಆಗಮಿಸುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಾತೆ ಮಾಣಿಕೇಶ್ವರಿ ಭೇಟಿಗಾಗಿ ಗಂಟೆಗಟ್ಟಲೇ ಕಾದದ್ದುಂಟು. ನಿರಾಹಾರಿಯಾಗಿಯೇ ಜೀವಿಸಿದ್ದರು. ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ ನಾರಾಯಣ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಮಾಣಿಕೇಶ್ವರಿ ದರ್ಶನ ಪಡೆದಿದ್ದರು.












Click it and Unblock the Notifications