ವಾಚ್ ಪಾರ್ಕ್' ಸ್ಥಾಪನೆಗೆ ಸರ್ಕಾರ ಅಗತ್ಯ ಸಹಕಾರ: ಸಿಎನ್ ಅಶ್ವತ್ಥ ನಾರಾಯಣ
ಬೆಂಗಳೂರು,ಜನವರಿ 19: ಗಡಿಯಾರ ಉದ್ಯಮಕ್ಕೆ ಸಂಬಂಧಿಸಿದವರು ವಾಚ್ ಪಾರ್ಕ್ ಸ್ಥಾಪಿಸಲು ಮುಂದೆ ಬಂದರೆ ಸರ್ಕಾರ ಎಲ್ಲಾ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಗುರುವಾರ ನಗರದಲ್ಲಿ 'ಇಂಡಿಯಾ ಇಂಟರ್ ನ್ಯಾಷನಲ್ ಅಂಡ್ ಕ್ಲಾಕ್ ಫೇರ್' ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ 'ಸಮಯ ಭಾರತಿ- 2023' ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಈಗ ನಿಯಮಗಳನ್ನು ಸುಲಭಗೊಳಿಸಿದ್ದು, ಆ ಪ್ರಕಾರ ಕೈಗಾರಿಕೆಗೆ ಸಂಬಂಧಿಸಿದವರು ತಮ್ಮದೇ ಆದ ಉದ್ಯಮ ಪಾರ್ಕ್ ಗಳನ್ನು ಸ್ಥಾಪಿಸಿ ತಾವೇ ನಿರ್ವಹಿಸಬಹುದು. ಇದಕ್ಕೆ ಬೇಕಾದ ಭೂಮಿ ಖರೀದಿ ಪ್ರಕ್ರಿಯೆಯನ್ನು ಈಗ ಸರಳಗೊಳಿಸಲಾಗಿದೆ ಎಂದರು.
ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ: ಅಶ್ವತ್ಥ ನಾರಾಯಣ
ಕೈಗಾರಿಕಾ ವಾತಾವರಣವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಬಿಗಿ ನಿಯಮಗಳಿಗೆ ಬದಲಾಗಿ ಅನುಸರಿಸಲು ಸುಲಭವಾದ ನಿಯಮಾವಳಿಯನ್ನು ಜಾರಿಗೆ ತಂದಿದೆ. ಉದ್ಯಮಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ತನ್ನ ಮನಸ್ಸಿಗೆ ಒಪ್ಪುವಂತಹ ಗಡಿಯಾರ ಹಾಕಿಕೊಳ್ಳಬೇಕೆಂಬುದು ಪ್ರತಿಯೊಬ್ಬ ವ್ಯಕ್ತಿಯ ಬಯಕೆಯಾಗಿರುತ್ತದೆ. ಹೀಗಾಗಿ ಗಡಿಯಾರ ಉದ್ಯಮವು ಯಾವಾಗಲೂ ಬೇಡಿಕೆಯಲ್ಲಿರುವ ಉದ್ಯಮವಾಗಿರುತ್ತದೆ ಎಂದರು.
ಸರ್ಕಾರವು ಈಗ ವಿದ್ಯಾರ್ಥಿಗಳ ಕಲಿಕೆ ಹಾಗೂ ಅವರಿಗೆ ಕೌಶಲ ತರಬೇತಿ ಇವೆರಡಕ್ಕೂ ಒಟ್ಟೊಟ್ಟಿಗೆ ಒತ್ತು ಕೊಡುತ್ತಿದೆ. ಕಲಿಕೆಯ ಬೇರೆ, ಕೌಶಲವೇ ಬೇರೆ ಎಂಬ ಪರಿಸ್ಥಿತಿ ಈಗ ಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕೌಶಲ್ಯವಿರುವ ವ್ಯಕ್ತಿಯನ್ನಾಗಿಸುವುದೇ ಸರ್ಕಾರದ ಗುರಿಯಾಗಿದೆ. ಹೀಗಾಗಿ ಗಡಿಯಾರ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಸರ್ಕಾರ ಲಭ್ಯವಾಗಿಸಲಿದೆ ಎಂದು ಹೇಳಿದರು.
ಯುವಕರಿಗೆ ನಾನಾ ರೀತಿಯ ಕೌಶಲ್ಯ ತರಬೇತಿಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಕೊಡುತ್ತಿದೆ. ಗಡಿಯಾರ ಉದ್ಯಮ ಸೇರಿದಂತೆ ಬೇಡಿಕೆಯಲ್ಲಿರುವ ಎಲ್ಲಾ ಉದ್ಯಮಗಳಿಗೂ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂಕದರ್ಭದಲ್ಲಿ ಗಡಿಯಾರ ಉದ್ಯಮದ ಹಿರಿಯರಾದ ಯಜ್ಞನಾರಾಯಣ, ಸಮಯ ಭಾರತಿ ಸಿಇಒ ಹೇಮಂತ್, ಟೈಟನ್ ಸಿಇಒ ಸುಪರ್ಣಾ, ದೀಪಕ್, ವಿನೋದ್ ಮತ್ತಿತರರು ಇದ್ದರು.