Government Employee: NPS, OPS ಕುರಿತು ಮಾಹಿತಿಗಾಗಿ ಕಾರ್ಯಾಗಾರ
ಬೆಂಗಳೂರು, ಆಗಸ್ಟ್ 04: ಕರ್ನಾಟಕದ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (ಹೊಸ ಪಿಂಚಣಿ) ರದ್ದುಪಡಿಸಿ ಹಳೇ ಪಿಂಚಣೆ ಯೋಜನೆ ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರ ಈ ವಿಚಾರದಲ್ಲಿ ತೀರ್ಮಾನವನ್ನು ಕೈಗೊಂಡಿಲ್ಲ.
ಈಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಎನ್ಪಿಎಸ್ ಮತ್ತು ಒಪಿಎಸ್ ವಿಚಾರದಲ್ಲಿ ಸರ್ಕಾರಿ ನೌಕರರಲ್ಲಿ ಇರುವ ಗೊಂದಲ ಬಗೆಹರಿಸಲು ಮುಂದಾಗಿದೆ. ಇದಕ್ಕಾಗಿ ಆಗಸ್ಟ್ 17ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ.

ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಿದೆ. ಆದ್ದರಿಂದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 'ನಮ್ಮಭಿಮಾನದ ಅಭಿನಂದನಾ ಸಮಾರಂಭ' ಆಯೋಜನೆ ಮಾಡಿದೆ.
ಬೆಂಗಳೂರು ನಗರದ ಮೇಕ್ರಿ ಸರ್ಕಲ್ ಸಮೀಪದ ಅರಮನೆ ಮೈದಾನದಲ್ಲಿ ಆಗಸ್ಟ್ 17ರಂದು ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿಯೇ ಒಟ್ಟು ಮೂರು ಕಾರ್ಯಾಗಾರಗಳು ನಡೆಯಲಿವೆ. ಅವುಗಳಲ್ಲಿ ಎರಡು ಎನ್ಪಿಎಸ್ ಮತ್ತು ಒಪಿಎಸ್ಗೆ ಸಂಬಂಧಿಸಿದವು.
ಕಾರ್ಯಾಗಾರದ ವಿವರ: ಆಗಸ್ಟ್ 17ರಂದು ಬೆಳಗ್ಗೆ10 ರಿಂದ 11 ಗಂಟೆಯ ತನಕ 'ಒಪಿಎಸ್ ಯೋಜನೆಯನ್ನು ಮರುಸ್ಥಾಪಿಸುವಲ್ಲಿ ರಾಷ್ಟ್ರ ಮಟ್ಟದ ಬೆಳವಣಿಗೆಗಳು' ಎಂಬ ವಿಚಾರದ ಕುರಿತು ಕಾರ್ಯಾಗಾರ ನಡೆಯಲಿದೆ. ಬಿ. ಪಿ. ರಾವತ್, ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ಹಳೆ ಪಿಂಚಣಿ ಮರುಸ್ಥಾಪನೆ ಸಂಯುಕ್ತ ಮೋರ್ಚಾ (ನವದೆಹಲಿ) ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 11 ರಿಂದ 11.30ರ ತನಕ 'ಒಪಿಎಸ್ ಯೋಜನೆಯ ಪುನರ್ ಸ್ಥಾಪನೆಯ ಸಾಧ್ಯತೆಗಳು' ಎಂಬ ವಿಚಾರದ ಕುರಿತು ಕಾರ್ಯಾಗಾರ ನಡೆಯಲಿದೆ. ರಮೇಶ್ ಸಂಗಾ ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ, ಬೆಂಗಳೂರು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸರ್ಕಾರದ ನಿಲುವೇನು?: 7ನೇ ವೇತನ ಆಯೋಗದ ಶಿಫಾರಸು ಜಾರಿ, ಒಪಿಎಸ್ ಮರು ಸ್ಥಾಪನೆ ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಕರ್ನಾಟಕದ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಯಾಗಿದೆ.
ಇದರಲ್ಲಿ 7ನೇ ವೇತನ ಆಯೋಗದ ವರದಿ ಈಗಾಗಲೇ ಜಾರಿಗೆ ಬಂದಿದೆ. ದಿನಾಂಕ 23/7/2024ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳ ಸಭೆ ನಡೆದಿತ್ತು. ಸಭೆಯಲ್ಲಿ ಉಳಿದ ಎರಡು ಬೇಡಿಕೆಗಳ ಈಡೇರಿಕೆಗೆ ಕೈಗೊಳ್ಳಬೇಕಾದ ಹೋರಾಟದ ಕುರಿತು ಚರ್ಚಿಸಲಾಗಿತ್ತು.
ಆಗ ಸಭೆಯಲ್ಲಿ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ದಿನಾಂಕ 22/07/2024ರಂದು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲು ನಿರ್ಣಯಿಸಲಾಗಿತ್ತು. ಇದೇ ಸಮಾವೇಶ ಆಗಸ್ಟ್ 17ರಂದು ನಡೆಯಲಿದೆ.
ಅಲ್ಲದೇ ಮತ್ತೊಂದು ಪ್ರಮುಖ ಬೇಡಿಕೆಯಾದ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಭಾಗವಾಗಿ ಸರ್ಕಾರದ ಉನ್ನತ ಅಧಿಕಾರಿಗಳ ತಂಡ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಈಗಾಗಲೇ ಕ್ರಮವಹಿಸುತ್ತಿದೆ. ಶೀಘ್ರದಲ್ಲೇ ವರದಿ ಪಡೆದು ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುತ್ತಾರೆ ಎಂದು ಸಭೆಯಲ್ಲಿ ಚರ್ಚಿಸಲಾಗಿತ್ತು.
ಮತ್ತೊಂದು ಬೇಡಿಕೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಆಗಸ್ಟ್ ತಿಂಗಳಲ್ಲಿ ಯೋಜನೆಯನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿರುತ್ತದೆ ಎಂದು ಚರ್ಚಿಸಲಾಗಿತ್ತು. ಸರ್ಕಾರದ ಭರವಸೆ ಹಿನ್ನಲೆಯಲ್ಲಿ ಸದ್ಯ ನೌಕರರು ಹೋರಾವನ್ನು ಕೈ ಬಿಟ್ಟಿದ್ದಾರೆ.











Click it and Unblock the Notifications