ಅಲ್ಪಮತಕ್ಕೆ ಕುಸಿದ ಸರ್ಕಾರ, ಕರ್ನಾಟಕ ಬಿಜೆಪಿ ಮುಂದಿರುವ ಆಯ್ಕೆಗಳೇನು?
Recommended Video
ಬೆಂಗಳೂರು, ಜುಲೈ 09: ಕರ್ನಾಟಕದ ಮೈತ್ರಿ ಸರ್ಕಾರದ ಬಂಡಾಯದ ಕಾರ್ಮೋಡ ಕವಿದಿದ್ದು, ಸರ್ಕಾರ ಅಳಿವು, ಉಳಿವಿನ ತೂಗೂಯ್ಯಲೆಯಲ್ಲಿದೆ. ಪರಿಸ್ಥಿತಿಯ ಲಾಭ ಪಡೆಯಲು ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತೊಮ್ಮೆ ಯತ್ನಿಸತೊಡಗಿದೆ.
ಕೈ ತೆನೆ ಸರ್ಕಾರ ಸ್ಥಾಪನೆಯಾದಾಗಿನಿಂದ ಐದಾರು ಬಾರಿ ಸರ್ಕಾರವನ್ನು ಉರುಳಿಸಲು ಯತ್ನಿಸಿ ವಿಫಲವಾಗಿರುವ ಬಿಜೆಪಿ ಈ ಬಾರಿ ಜಯ ಸಾಧಿಸುವ ವಿಶ್ವಾಸದಲ್ಲಿದೆ. ಎಚ್ ಡಿ ಕುಮಾರಸ್ವಾಮಿ ಸರ್ಕಾರ ಈಗ ಅಲ್ಪಮತಕ್ಕೆ ಕುಸಿದಿದೆ. ಬಿಜೆಪಿಗೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಅಥವಾ ಸರ್ಕಾರ ಸ್ಥಾಪನೆಗೆ ಹಕ್ಕು ಮಂಡನೆ ಮಾಡಲು ಬೇಕಾದ ಸಂಖ್ಯಾಬಲವೇನೋ ಬಿಜೆಪಿಗೆ ಸಿಕ್ಕಿದೆ.
ಆದರೆ, ಬಿಜೆಪಿ ಸಿಕ್ಕಿರುವ ಅಲ್ಪಮಟ್ಟದ ಬಹುಮತ ಇಟ್ಟುಕೊಂಡು ರಾಜ್ಯಪಾಲರ ಮುಂದೆ ನಿಂತು ಸರ್ಕಾರ ಸ್ಥಾಪನೆ ಮಾಡಲು ಹಕ್ಕು ಮಂಡನೆ ಮಾಡುವುದೇ? ಇನ್ನಷ್ಟು ಶಾಸಕರನ್ನು ತನ್ನತ್ತ ಸೆಳೆಯಲು ಯತ್ನಿಸುವುದೇ? ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮುಂದಿರುವ ಆಯ್ಕೆಗಳೇನು?
ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಮಂಗಳವಾರದಂದು ರಾಜೀನಾಮೆ ಸಲ್ಲಿಸಿದ್ದಾರೆ. ಜುಲೈ 09 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಮತ್ತೊಮ್ಮೆ ಬದಲಾಗಿದೆ. ಬಿಜೆಪಿ ಬೆಂಬಲಿಸುವುದಾಗಿ ಬೇಗ್ ಹೇಳಿರುವುದರಿಂದ ಬಿಜೆಪಿ ಬಲ ಇನ್ನಷ್ಟು ಹೆಚ್ಚಿದೆ.

ಮುಂದಿನ ಅಧಿವೇಶನ ಏನೆಲ್ಲ ಚರ್ಚೆಯಾಗಬಹುದು
ಮುಂದಿನ ಅಧಿವೇಶನ(ಜುಲೈ 12 ರಿಂದ 20)ದಲ್ಲಿ ಬಜೆಟ್ ಬಗ್ಗೆ ಚರ್ಚೆ ಬದಲಿಗೆ, ಸರ್ಕಾರದ ಅಸ್ತಿತ್ವದ ಬಗ್ಗೆ ಚರ್ಚೆ, ಅವಿಶ್ವಾಸ, ಬಹುಮತದ ಬಗ್ಗೆ ಚರ್ಚೆ ನಡೆಯುವುದು ನಿರೀಕ್ಷಿತ. ಅಧಿವೇಶನದಲ್ಲಿ ತನ್ನ ನಡೆ ಇಡಲು ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆದರೆ, ಸರ್ಕಾರ ಅಭದ್ರಗೊಳಿಸಲು ಬಿಜೆಪಿ ಏನೇ ಹರಸಾಹಸ ಪಟ್ಟರೂ, ರಾಜ್ಯಪಾಲರು ಶಾಸಕರುಗಳ ಸರಣಿ ರಾಜೀನಾಮೆ ಅಂಗೀಕರಿಸಿದರೂ, ಬಿಜೆಪಿಯ ಸರ್ಕಾರ ರಚನೆ ಕನಸನ್ನು ಭಂಗಗೊಳಿಸುವ ಅಧಿಕಾರ ಸ್ಪೀಕರ್ ಕೈಲಿದೆ.

ಜುಲೈ 09 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಜುಲೈ 09 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಮತ್ತೊಮ್ಮೆ ಬದಲಾಗಿದ್ದು, ರೋಷನ್ ಬೇಗ್ ರಾಜೀನಾಮೆ ಇಂದಾಗಿ ಕಾಂಗ್ರೆಸ್ ಸಂಖ್ಯೆ ಕುಗ್ಗಿದೆ.
ಒಟ್ಟು ಸದಸ್ಯ ಬಲ : 211
ಕಾಂಗ್ರೆಸ್ + ಜೆಡಿಎಸ್ : 104
ಮ್ಯಾಜಿಕ್ ನಂಬರ್ : 105
ಬಿಜೆಪಿ : 105+1(ಪಕ್ಷೇತರ ಎಚ್ ನಾಗೇಶ್)
ಬಿಎಸ್ ಪಿ: 1
ಕಾಂಗ್ರೆಸ್ : 68
ಜೆಡಿಎಸ್ : 34
ಪಕ್ಷೇತರ : 1 (ಕಾಂಗ್ರೆಸ್ ಸೇರಿರುವ ಶಂಕರ್)

ಬಿಜೆಪಿ ಶಾಸಕಾಂಗ ಸಭೆಯಲ್ಲಿ ತೀರ್ಮಾನ
ಸ್ಪೀಕರ್ ರಮೇಶ್ ಕುಮಾರ್ ಅವರು 13 ಶಾಸಕರ ರಾಜೀನಾಮೆಯನ್ನು ಸ್ವೀಕರಿಸುವ ತನಕ ಕಾದು ನೋಡುವ ತಂತ್ರವನ್ನು ಬಿಜೆಪಿ ಮುಂದುವರೆಸಲಿದೆ.
ರಾಜೀನಾಮೆ ಅಂಗೀಕರಿಸಿದರೆ, ನಂತರ ಯಾವ ನಡೆ ಇಡಬೇಕು ಎಂಬುದರ ಬಗ್ಗೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸದರೆ ಏನು ಮಾಡಬೇಕು, ಬಿಜೆಪಿಗೆ ವಲಸೆ ಬಂದರೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಿದೆ.
ಅವಿಶ್ವಾಸ ನಿರ್ಣಯ ಮಂಡನೆ
ಅಗತ್ಯ ಸಂಖ್ಯಾಬಲ ಲಭ್ಯವಾದ ಕೂಡಲೇ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲರನ್ನು ಭೇಟಿ ಮಾಡಿ, ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅನುಮತಿ ಕೋರಬಹುದು. ಸರ್ಕಾರ ಅಲ್ಪಮತಕ್ಕೆ ಕುಸಿದಿದೆ, ವಿಶ್ವಾಸಮತ ಯಾಚನೆ ಮಾಡಲಿ ಎಂದು ಕೇಳಿಕೊಳ್ಳಬಹುದು.
ವಿಶ್ವಾಸಮತ ಯಾಚನೆ ಸಂದರ್ಭ ಬಂದಾಗ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿ, ಸರ್ಕಾರದ ವಿರುದ್ಧ ಮತ ಯಾಚಿಸಲು ಸೂಚಿಸಬಹುದು. ಈ ಸಂದರ್ಭದಲ್ಲಿ ಅತೃಪ್ತ ಶಾಸಕರು ಮೈತ್ರಿ ಸರ್ಕಾರದ ವಿರುದ್ಧ ಮತ ಹಾಕಿದರೆ, ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ನಂತರ ಮ್ಯಾಜಿಕ್ ನಂಬರ್ ದಾಟಿರುವ ಬಿಜೆಪಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಬಹುದು.












Click it and Unblock the Notifications