ಬೆಳಗಾವಿ ಅಧಿವೇಶನ ಇನ್ನಿತರ ಸಂಪುಟ ನಿರ್ಧಾರಗಳ ಗುಚ್ಛ

ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ನವೆಂಬರ್ 21 ರಿಂದ ಡಿಸೆಂಬರ್ 2 ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ರಾಜ್ಯ ಸಚಿವ ಸಂಪುಟದ ಸಭೆನ ತೀರ್ಮಾನಗಳ ವಿವರಗಳು ಇಲ್ಲಿವೆ

ಬೆಂಗಳೂರು, ಅಕ್ಟೋಬರ್ 20: ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ನವೆಂಬರ್ 21 ರಿಂದ ಡಿಸೆಂಬರ್ 2 ರವರೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ 10 ದಿನಗಳ ಕಾಲ ನಡೆಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪ್ರಕಟಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಭಾ ನಿರ್ಣಯಗಳನ್ನು ಬಹಿರಂಗಪಡಿಸಿ, ಅವರು ಮಾತನಾಡುತ್ತಿದ್ದರು. ಸಂಪುಟ ಸಭೆ ನಿರ್ಣಯಗಳು:

* ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ 15 ಸದಸ್ಯರನ್ನು ಒಳಗೊಂಡ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ.

* ಬೆಂಗಳೂರಿನ ತಾತಗುಣಿಯಲ್ಲಿರುವ ದೇವಿಕಾರಾಣಿ ರೋರಿಕ್ ಎಸ್ಟೇಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ಕರ್ನಾಟಕ ಆಡಳಿತ ಸೇವೆಯ ನಿವೃತ್ತ ಅಧಿಕಾರಿ ಜಿ. ಹೆಚ್. ಪುಟ್ಟ ಹಲಗಯ್ಯ ನೇಮಕ.

* ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮಸಿಗೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಘಟಕ ನಿರ್ಮಾಣಕ್ಕೆ ಐದು ಎಕರೆ ಸೊಪ್ಪಿನ ಬೆಟ್ಟ ಸರ್ಕಾರಿ ಜಮೀನನ್ನು ಉಚಿತವಾಗಿ ನೀಡಲು ಸಂಪುಟದಲ್ಲಿ ತೀರ್ಮಾನ.

TB Jayachandra

* ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 28 ವಿಜ್ಞಾನಿಗಳಿಗೆ ವಿಶ್ವವಿದ್ಯಾನಿಲಯದ ಬೋಧಕ ಹುದ್ದೆಗಳಿಗೆ ಸರಿಸಮನಾಗಿ ವಿಶ್ವವಿದ್ಯಾಲಯದ ಅನುದಾನ ಆಯೋಗದ ವೇತನ ಶ್ರೇಣಿ ನೀಡಲು ಒಪ್ಪಿಗೆ. ಈ ವೆಚ್ಚವನ್ನು ವಿಶ್ವವಿದ್ಯಾಲಯದ ಅನುದಾನದಲ್ಲಿಯೇ ಭರಿಸುವಂತೆಯೂ ಸೂಚನೆ ನೀಡಿದೆ.

* ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ 2010 ನೇ ಸಾಲಿನಲ್ಲಿ ಅನುಮೋದನೆಯಾಗಿದ್ದ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ಕೇಂದ್ರ ಸರ್ಕಾರದ 787.64 ಕೋಟಿ ರೂ ಹಾಗೂ ರಾಜ್ಯ ಸರ್ಕಾರದ 1119.53 ಕೋಟಿ ರೂ ಒಳಗೊಂಡಂತೆ 1907.17 ಕೋಟಿ ರೂ ಅನುದಾನಗಳಲ್ಲಿ ಅವ್ಯವಹಾರ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬದ ಆರೋಪ ಕುರಿತಂತೆ ಸಚಿವ ಸಂಪುಟವು ತನಿಖೆಗೆ ಆದೇಶಿಸಿದೆ.

* ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ವಿಶೇಷ ವೃಂದ ಹಾಗೂ ನೇಮಕಾತಿ ನಿಯಮಾವಳಿಗಳಂತೆ ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ ಗಳ 670 ಹುದ್ದೆಗಳಿಗೆ ಈಗಾಗಲೇ ನೇಮಕಗೊಂಡು ಈವರೆಗೂ ಕೆಲಸಕ್ಕೆ ಹಾಜರಾಗದ ಅಭ್ಯರ್ಥಿಗಳಿಗೆ ಕೆಲಸಕ್ಕೆ ಹಾಜರಾಗಲು ಮತ್ತೆ ಮೂರು ತಿಂಗಳ ಕಾಲಾವಕಾಶವನ್ನು ನೀಡಲು ತೀರ್ಮಾನಿಸಿದೆ.

* ಬೆಂಗಳೂರಿನ ಹೆಬ್ಬಾಳ ಬಡಾವಣೆಯ ನ್ಯಾಯಗ್ರಾಮದ ಆವರಣದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಗಾಗಿ 19 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾಲ್ಕು ಅಧಿಕೃತ ನಿವಾಸಗಳ ಕುರಿತಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ಮಾತುಕತೆ ನಡೆಸಲು ಕಾನೂನು ಸಚಿವರು ಮುಂದಾಗುವಂತೆ ಸೂಚನೆ.

* ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 110.08 ಎಕರೆ ಜಮೀನನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇರೆಗೆ ಮಂಜೂರು ಮಾಡಲು ಈಗಾಗಲೇ ಸಮ್ಮತಿಸಿರುವ ಸಂಪುಟವು, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚಿತ್ರನಗರಿಯ ಭೂಮಿಗೆ ತಗಲುವ ವೆಚ್ಚವನ್ನು ಪಾವತಿಸಲು ಐದು ವರ್ಷಗಳ ಕಾಲಾವಕಾಶ ನೀಡಲು ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+