ಧರಣಿ ನಿಲ್ಲಿಸುವುದಿಲ್ಲ ಸಿದ್ದುಗೆ ಯಡಿಯೂರಪ್ಪ ಸವಾಲು
ಬೆಂಗಳೂರು, ನ. 14 : "ಯಾವುದೇ ಕಾರಣಕ್ಕೂ ಧರಣಿಯನ್ನು ಸ್ಥಗಿಗೊಳಿಸುವುದಿಲ್ಲ, ಸರ್ಕಾರ ಪೊಲೀಸರನ್ನು ಬಳಸಿ ತಮ್ಮನ್ನು ಬಂಧಿಸಿದರೆ ಜೈಲಿನಲ್ಲಿಯೂ ಧರಣಿ ಮುಂದುರೆಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಧರಣಿ ತಡೆಯಲು ಸರ್ಕಾರ ಪೊಲೀಸರನ್ನು ಬಳಸುತ್ತಿದೆ ಎಂದು ಯಡಿಯೂರಪ್ಪ ಸಿದ್ದರಾಮಯ್ಯ ಅವರ ವಿರುದ್ಧ ಆರೋಪಿಸಿದ್ದಾರೆ.
ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಯಡಿಯೂರಪ್ಪ ನಡೆಸುತ್ತಿರುವ ಧರಣಿ 15ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸ್ಥಳ ತೆರವುಗೊಳಿಸುವಂತೆ ಬೆಂಗಳೂರು ನಗರ ಪೊಲೀಸರು ಕಳುಹಿಸಿದ ನೋಟಿಸ್ ಗೆ ಯಡಿಯೂರಪ್ಪ ಉತ್ತರ ನೀಡಿಲ್ಲ. ನಮ್ಮನ್ನು ಬಂಧಿಸಿದರೆ, ಜೈಲಿನಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೆ ವಿಸ್ತರಿಸರಣೆ ಮಾಡಬೇಕು ಹಾಗೂ ಎಪಿಎಲ್ ಕಾರ್ಡ್ದಾರರಿಗೂ ಪಡಿತರ ವಿತರಣೆ ಮಾಡಬೇಕು ಎಂಬ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮೊದಲು 8 ದಿನ ಧರಣಿ ನಡೆಸುವುದಾಗಿ ಹೇಳಿದ್ದ ಅವರು ಸದ್ಯ ನ.24ರವರೆಗೆ ವಿಸ್ತರಣೆ ಮಾಡಿದ್ದಾರೆ. (ನ.24ರವರೆಗೆ ಧರಣಿ ವಿಸ್ತರಿಸಿದ ಯಡಿಯೂರಪ್ಪ)
ಬುಧವಾರ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ನೋಟಿಸ್ ಜಾರಿಗೊಳಿಸಿ ಧರಣಿ ಸ್ಥಳ ತೆರವುಗೊಳಿಸುವಂತೆ ಆದೇಶಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ನಮ್ಮ ಶಾಂತಿಯುತ ಧರಣಿಯನ್ನು ತಡೆಯಲು ಪೊಲೀಸರನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ನಮ್ಮ ಶಾಂತಿಯುತ ಧರಣಿಯನ್ನು ತಡೆದು ಪೊಲೀಸರು ಬಂಧಿಸಿದರೆ ಜೈಲಿನಲ್ಲಿಯೇ ಧರಣಿ ಮುಂದುವರೆಸುತ್ತೇವೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ನ.23 ರಂದು ಧರಣಿ ಅಂತ್ಯಗೊಳಿಸಲಿರುವ ಬಿ.ಎಸ್.ಯಡಿಯೂರಪ್ಪ, ನ.24ರಂದು ಬೆಳಗಾವಿಯಲ್ಲಿ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ. ನ.25ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಲ್ಲಿಯೂ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.(ಬಿಎಸ್ವೈಗೆ ಪೊಲೀಸ್ ನೋಟಿಸ್, ಬಂಧನ ಸಾಧ್ಯತೆ)












Click it and Unblock the Notifications