ದೇವನಹಳ್ಳಿಯಿಂದ ಮೈಸೂರಿನವರೆಗೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 11: ದೇವನಹಳ್ಳಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ನಗರದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿವಾರಿಸಲು ಫೆರಿಫೆರಲ್ ರಿಂಗ್ ರಸ್ತೆಯ ಕಾಮಗಾರಿಗೆ ಸಧ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಹೆಬ್ಬಾಳದಿಂದ ಮೈಸೂರು ರಸ್ತೆ ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಅದರ ಮುಂದುವರಿದ ಭಾಗವಾಗಿ ಸೆಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ನಗರದಲ್ಲಿ ಉತ್ತಮ ರಸ್ತೆಗಳು, ಡ್ರೈನೇಜ್ ವ್ಯವಸ್ಥೆ, 12 ಅತಿ ಸಾಂದ್ರತೆಯಿರುವ ಕಾರಿಡಾರ್ ಗಳನ್ನು ಸರ್ಕಾರ ಅಭಿವೃದ್ಧಿಗೊಳಿಸುತ್ತಿದೆ. ಈ ಕಾರಿಡಾರ್ ಗಳಿಂದಾಗಿ ನಗರದ ಪ್ರಮುಖ ನಗರಗಳಿಗೆ ಸಿಗ್ನಲ್ ರಹಿತ ರಸ್ತೆ ಸಂಪರ್ಕ ದೊರೆಯಲಿದೆ. ಆಯಾ ವಾಹನಗಳ ಓಡಾಟಕ್ಕೆ ಆಯಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ವಾಹನ ದಟ್ಟಣೆಯನ್ನು ನಿವಾರಿಸಲು ಯೋಜಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು ನಗರಕ್ಕೆ ಟ್ರಾಫಿಕ್ ಪ್ಲಾನ್ನ್ನು ರೂಪಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.

ಮಳೆನೀರು ಸರಾಗವಾಗಿ ಹರಿದುಹೋಗಲು ರಾಜಕಾಲುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಈ ವರ್ಷ ಇದಕ್ಕಾಗಿ 1500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
ಜವಾಬ್ದಾರಿಯುತ ನಾಗರಿಕ ಸಮಾಜ ಬೆಂಗಳೂರಿನ ಜೀವಾಳ :
ಜವಾಬ್ದಾರಿಯುತ ನಾಗರಿಕ ಸಮಾಜ ಬೆಂಗಳೂರಿನ ಜೀವಾಳವಾಗಿದೆ. ನಗರದ ಜನರ ಸಮಸ್ಯೆಗಳ ಬಗ್ಗೆ ಅರಿತು , ಪರಿಣಾಮಕಾರಿ ಪರಿಹಾರವನ್ನು ಸೂಚಿಸುವ ಉತ್ತಮ ಹಾಗೂ ಬಲಿಷ್ಟ ನಾಗರಿಕ ಸಮಾಜದ ಅವಶ್ಯಕತೆ ಇದೆ. ನಾಗರಿಕ ಸಮಾಜಗಳು ಸರ್ಕಾರದೊಂದಿಗೆ ಚರ್ಚಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು. ಈ ಸಮಾಜಗಳಿಂದ ವಿವಿಧ ಸ್ಥರದ ಜನರೊಂದಿಗಿನ ಸಂಪರ್ಕದಿಂದಾಗಿ ಕೆಳವರ್ಗದ ಜನರ ಜೀವನವನ್ನು ಸುಗಮಗೊಳಿಸಿದಂತಾಗುತ್ತದೆ ಎಂದರು .
ಬೆಂಗಳೂರು ನಗರ ಅಭಿವೃದ್ಧಿ:
ಭವಿಷ್ಯದ ಬೆಂಗಳೂರನ್ನು ರೂಪಿಸುವವರಿಗೆ ಬೆಂಗಳೂರಿನ ಇತಿಹಾಸದ ಜ್ಞಾನವಿರಬೇಕಾಗುತ್ತದೆ. ಮೂಲ ಬೆಂಗಳೂರಿಗೆ 8 ಪುರಸಭೆ , 110 ಗ್ರಾಮಗಳು ಸೇರಿ ಈಗ ನವೀಕೃತ ಬೆಂಗಳೂರು ಆಗಿದೆ. ಇಂತಹ ಬೆಂಗಳೂರಿಗೆ ಅಭಿವೃದ್ಧಿ, ರಸ್ತೆ, ನೀರು ಸೇರಿದಂತೆ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ನಗರದಲ್ಲಿ ರಸ್ತೆ ಅಭಿವೃದ್ಧಿ, ನೀರು ಸರಬರಾಜುಗಳಿಗೆ ಒಂದು ನಿರ್ದಿಷ್ಟ ಪ್ಲಾನ್ ಇಲ್ಲವಾಗಿದೆ. ಆದ್ದರಿಂದ ಬೆಂಗಳೂರು ನಗರ ಯೋಜನೆಯನ್ನು ಸರಿದಾರಿಗೆ ತರಬೇಕಿದೆ ಎಂದರು.
ಬೆಂಗಳೂರು ಆರ್ಥಿಕ ರಾಜಧಾನಿಯಾಗುವತ್ತ ಹೆಜ್ಜೆ ಹಾಕುತ್ತಿದೆ :
ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ದೇಶದ ಉಳಿದ ಮೆಟ್ರೋಪಾಲಿಟನ್ ನಗರಗಳಿಗಿಂತ ಬೆಂಗಳೂರು ಉತ್ತಮವಾಗಿದೆ ಎಂದು ಹಲವು ಜನರು, ಖಾಸಗಿ ಕಂಪನಿಗಳು ನಗರಕ್ಕೆ ಬರುತ್ತಿವೆ. ಮೊದಲು ಬೆಂಗಳೂರು ಐಟಿ ಬಿಟಿ ರಾಜಧಾನಿ ಎಂದು ಗುರುತಿಸಲಾಗುತ್ತಿತ್ತು. ಆದರೆ ನಿಧಾನವಾಗಿ ಬೆಂಗಳೂರು ನಗರ ಈಗ ಆರ್ಥಿಕ ರಾಜಧಾನಿಯಾಗುವತ್ತ ಹೆಜ್ಜೆ ಹಾಕುತ್ತಿದೆ. ಪರಿಹಾರ ಮಾರ್ಗವನ್ನು ಹುಡುಕದೇ ಕೇವಲ ಸಮಸ್ಯೆಗಳ ಬಗೆಗಿನ ಚರ್ಚೆಯಿಂದ ಪ್ರಯೋಜನವಿಲ್ಲ. ನಗರ ಯೋಜನೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ಅದನ್ನು ವಾಸ್ತವತೆಗೆ ತರುವವನು ನಿಜವಾದ ನಗರ ಯೋಜನೆಕಾರ ಮತ್ತು ಉತ್ತಮ ಆಡಳಿತಗಾರ ಎಂದೆನಿಸುತ್ತಾನೆ. ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ನ್ನು ವಾಸ್ತವಿಕತೆಗೆ ತರಲು ಸಾರ್ವಜನಿಕರ ಸಹಯೋಗ, ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.
ತ್ಯಾಜ್ಯ ನಿರ್ವಹಣೆ:
ಬೆಂಗಳೂರಿನಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನಿಯಂತ್ರಣ, ನಿರ್ವಹಣೆ ಮಾಡಲು ಚಿಂತಿಸಬೇಕು. ದೊಡ್ಡ ಹೊಟೆಲ್ ಗಳು, ಕಲ್ಯಾಣಮಂಟಪಗಳು, ಆಸ್ಪತ್ರೆಗಳು, ಮಾಲ್ ಗಳು ಈಗ ಆಧುನಿಕ ತಂತ್ರಜ್ಞಾನದ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತ್ಯಾಜ್ಯ ಸಂಸ್ಕರಣೆಯನ್ನು ಮಾಡಬಹುದಾಗಿದೆ. ಇದರಿಂದ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ಕೃಷಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.












Click it and Unblock the Notifications