ಸಂಪುಟ ವಿಸ್ತರಣೆ ವೇಳೆ ಸಿದ್ದರಾಮಯ್ಯ ಸಂಪುಟದ 8 ಸಚಿವರು ಔಟ್?
ಮತ್ತೊಂದು ಸಂಪುಟ ಸರ್ಜರಿಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಬಾರಿ ತಮ್ಮ ಸಂಪುಟದ 8 ಮಂದಿಗೆ ಕೊಕ್ ನೀಡುವ ಬಗ್ಗೆ ಚಿಂತನೆ ಎನ್ನುತ್ತಿವೆ ಮೂಲಗಳು.
ಬೆಂಗಳೂರು, ಜೂನ್ 12: ಚುನಾವಣೆಯ ಹೊಸ್ತಿಲಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆಯ ದೊಡ್ಡ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಪುಟದಿಂದ 8 ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ತಮ್ಮ ಸಂಪುಟದಲ್ಲಿನ 8 ಸಚಿವರನ್ನು ಕೈಬಿಟ್ಟು, 10 ನೂತನ ಸಚಿವರಿಗೆ ಜಾಗ ನೀಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆಂಬ ಸುದ್ದಿಗಳು ಕೆಪಿಸಿಸಿಯಲ್ಲಿ ಹರಿದಾಡುತ್ತಿರುವುದರಿಂದ ಇದು ಸಂಪುಟದಲ್ಲಿನ ಹಲವಾರು ಸಚಿವರಿಗೆ ಆತಂಕ ಮೂಡಿಸಿದೆ.

ಎಂಟು ಮಂದಿಗೆ ಕೊಕ್ ಏಕೆ?
ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಂತರಿಕ ಮೌಲ್ಯ ಮಾಪನಕ್ಕೆ ಮುಂದಾಗಿದ್ದರು. ಸಂಪುಟದ ಸಚಿವರು, ಪ್ರಭಾವಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಉಳಿಸಿಕೊಂಡಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿ, ಅದಕ್ಕಾಗಿ ಪ್ರತ್ಯೇಕ ತಂಡವನ್ನೂ ರಚಿಸಿದ್ದರು.
ಇದೀಗ ಆ ತಂಡ, ತನ್ನ ವರದಿಯನ್ನು ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಅದರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿರುವ ಅರ್ಧಕ್ಕೂ ಹೆಚ್ಚು ಜನರು ಸೋಲುವ ಅವಕಾಶಗಳು ಹೆಚ್ಚಿವೆ ಎಂದು ಹೇಳಿದೆ. ಇವರಲ್ಲಿ ಕೆಲವರು ತಮ್ಮ ಕ್ಷೇತ್ರದಲ್ಲಿ ಇನ್ನೊಂದು ವರ್ಷದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡರೆ ಮಾತ್ರ ಗೆಲ್ಲಬಹುದಾಗಿದ್ದರೂ, ಆ ಎಂಟು ಸಚಿವರಂತೂ ಖಂಡಿತವಾಗಿ ಸೋಲುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಸಿದ್ದರಾಮಯ್ಯ ಎಚ್ಚೆತ್ತಿದ್ದಾರೆಂದು ಹೇಳಿರುವ ಮೂಲಗಳು, ಈವರೆಗೆ ಕೇವಲ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬುವ ಬಗ್ಗೆ ಮಾತ್ರ ಯೋಚಿಸಿದ್ದ ಮುಖ್ಯಮಂತ್ರಿಗಳು ಈಗ ಸಂಪುಟವನ್ನು ಪುನಾರಚಿಸಿ 8 ಸಚಿವರಿಗೆ ಗೇಟ್ ಪಾಸ್ ಕೊಟ್ಟು 10 ಯುವ ಮುಖಗಳಿಗೆ ಅವಕಾಶ ಕೊಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ನೆಲೆಯನ್ನು ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.
ಆದರೆ, ಸಂಪುಟದಿಂದ ಹೊರಬೀಳಬಹುದಾದ ಆ ಎಂಟು ಸಚಿವರ ಮಾಹಿತಿ ಮಾತ್ರ ಲಭ್ಯವಾಗಿಲ್ಲವಾದ್ದರಿಂದ ಈ ಬಗ್ಗೆ ಕುತೂಹಲ ಹೆಚ್ಚಿದೆ.












Click it and Unblock the Notifications