ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಶೀಘ್ರ ಜಾರಿ: ವಿ. ಸೋಮಣ್ಣ
ಬೆಂಗಳೂರು, ಡಿಸೆಂಬರ್ 5: ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಈ ಕುರಿತು ವಿಧಾನಸೌಧದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್, ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 25-30 ವರ್ಷ ಹಿಂದೆಯೇ ಈ ಯೋಜನೆ ಮಾಡಬೇಕಿತ್ತು. ಬಡವರು ಹಾಗೂ ಸಾಮಾನ್ಯರ ವಾಸವಾಗುವ ಪ್ರದೇಶದಲ್ಲಿ ಅಭಿವೃದ್ಧಿ ಆಗಬೇಕಾದರೆ ರಸ್ತೆ ಮುಖ್ಯ. ಕ್ಷೇತ್ರದ ಅಭಿವೃದ್ಧಿಗೆ ರಸ್ತೆ ಹಾಗೂ ಮೂಲಸೌಕರ್ಯದ ಅಗತ್ಯ ಇದೆ ಎಂದರು.
Bengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿ
1.8 ಕಿ ಮೀ ರಸ್ತೆ ಅಗಲೀಕರಣ ಮಾಡಲಾಗುವುದು. ಶಿರ್ಸಿ ಸರ್ಕಲ್ ನಿಂದ ವಿಜಯ ನಗರದ ಪೈಲ್ ಲೈನ್ ವರೆಗೆ ರಸ್ತೆ ಅಗಲೀಕರಣ ಮಾಡಲಾಗುವುದು. ಇದಕ್ಕೆ 1,63,190 ಚದರ ಅಡಿ ಜಾಗದ ಅಗತ್ಯ ಇದೆ. ಯಾವುದೇ ರೀತಿಯಲ್ಲಿ ಯಾವುದೇ ಜನರಿಗೆ ಹಾಗೂ ಸಮುದಾಯಕ್ಕೆ ತೊಂದರೆ ಆಗದಂತೆ ನಕ್ಷೆ ತಯಾರಿ ಮಾಡಲಾಗಿದೆ ಎಂದರು.
ಸುಪ್ರೀಂ ಕೋರ್ಟ್ ಗೈಡ್ಲೈನ್ಸ್ ಪ್ರಕಾರ ಹಣ ಕೊಡಲು ನಿರ್ಧಾರ.
ರಸ್ತೆ ಅಗಲೀಕರಣಕ್ಕೆ 140 ಖಾಸಗಿ ಜಮೀನು ಒತ್ತುವರಿ ಆಗಲಿದೆ. ಉಳಿದ ಜಮೀನು ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲ. ಯಾವುದೇ ಧಾರ್ಮಿಕ ಕಟ್ಟಡಗಳ ತೆರವುಗೊಳಿಸಲಾಗುದಿಲ್ಲ. ಇದರಿಂದ ಜನರಿಂದಲೂ ಯಾವುದೇ ವಿರೋಧ ವ್ಯಕ್ತವಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಪರಿಹಾರ ನೀಡಿ 223 ಆಸ್ತಿಗಳನ್ನು ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾಗುವುದು. ಮೇಲ್ಸೇತುವೆ ನಿರ್ಮಾಣಕ್ಕೆ 600 ಕೋಟಿ ಅಗತ್ಯ ಇದೆ. ಆದರೆ ಪರಿಹಾರವೂ ಸೇರಿ 230 ಕೋಟಿಯಲ್ಲಿ ಇಡೀ ಯೋಜನೆ ಮುಗಿಯಲಿದೆ ಎಂದರು.
ತಕ್ಷಣವೇ ಯೋಜನೆ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದೇವೆ. ರಸ್ತೆ ಅಗಲೀಕರಣ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್, ಬಿಬಿಎಂಪಿ, ಖಾಸಗಿ, ಹಾಗೂ ಪೊಲೀಸ್ ಇಲಾಖೆಯ ಜಮೀನು ಇದೆ. ಪೊಲೀಸ್ ಠಾಣೆಯನ್ನು ಅಲ್ಲಿಂದ ತೆರವುಗೊಳಿಸಿ ಬೇರೆ ಕಡೆ ನಿರ್ಮಾಣ ಮಾಡಲಾಗುವುದು. ಪೊಲೀಸ್ ಗ್ರೌಂಡ್ ಪಕ್ಕದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗುವುದು, ಇನ್ನೂ ಶೀಘ್ರವೇ ಕಾಮಗಾರಿ ಮುಗಿಸಿ, ಸಾರ್ವಜನಿಕರಿಗೆ ಮುಕ್ತ ಮಾಡಲಾಗುವುದು ಎಂದು ಹೇಳಿದರು.