ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆಗೆ ಕಾರಣವೇನು?
ಬೆಂಗಳೂರು, ಜುಲೈ 01: ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಮೈತ್ರಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಆನಂದ್ ಸಿಂಗ್ ಅವರು ಅತೃಪ್ತ ಶಾಸಕರ ಪಟ್ಟಿಯಲ್ಲಿದ್ದರೂ ಸಹ ಹೀಗೆ ಹಠಾತ್ತನೆ ರಾಜೀನಾಮೆ ನಿರ್ಧಾರ ಕೈಗೊಳ್ಳುತ್ತರೆಂಬ ಊಹೆ ಇರಲಿಲ್ಲ. ಅತೃಪ್ತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇನೂ ಆನಂದ್ ಸಿಂಗ್ ಅವರು ಇರಲಿಲ್ಲ. ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ಹಿಂದೆ ಹಲವು ಕಾರಣಗಳು ಇವೆ ಎನ್ನಲಾಗುತ್ತಿದೆ.
ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್
ಆನಂದ್ ಸಿಂಗ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್ ಅವರ ಮೇಲಿನ ಅಮಾನತ್ತನ್ನು ಕಾಂಗ್ರೆಸ್ ವಾಪಸ್ ಪಡೆದಿದ್ದು ಆನಂದ್ ಸಿಂಗ್ ಅವರಿಗೆ ತೀವ್ರ ಅಸಮಾಧಾನ ಉಂಟಾಗಿತ್ತು ಎನ್ನಲಾಗಿದೆ. ಕಾಂಗ್ರೆಸ್ನ ಹಲವು ನಾಯಕರು ಗಣೇಶ್ ಪರ ನಿಂತಿದ್ದು ಸಹ ಆನಂದ್ ಸಿಂಗ್ ಅಸಮಾಧಾನಕ್ಕೆ ಕಾರಣವಾಗಿತ್ತು.
ಜಿಂದಾಲ್ ಪ್ರಕರಣದಲ್ಲಿ ಸರ್ಕಾರ ವಿರುದ್ಧ ನಿಲವು
ಜಿಂದಾಲ್ಗೆ ಸಾವಿರಾರು ಎಕರೆ ಜಮೀನನ್ನು ಶುದ್ಧ ಕ್ರಯ ಮಾಡುವ ತಮ್ಮದೇ ಸರ್ಕಾರದ ನಿಲವನ್ನು ಆನಂದ್ ಸಿಂಗ್ ಅವರು ಖಂಡಿಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಜಿಂದಾಲ್ ವಿಷಯದಲ್ಲಿ ಸರ್ಕಾರವು ತಮ್ಮ ಅಭಿಪ್ರಾಯ ತೆಗೆದುಕೊಂಡಿಲ್ಲವೆಂಬ ಅಸಮಾಧಾನ ಸಹ ಆನಂದ್ ಸಿಂಗ್ ಅವರಿಗೆ ಇತ್ತು.
ಡಿ.ಕೆ.ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ಅಪಸ್ವರ
ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅತಿಯಾದ ರಾಜಕೀಯ ಹಸ್ತಕ್ಷೇಪದ ಬಗ್ಗೆಯೂ ಆನಂದ್ ಸಿಂಗ್ ಅವರು ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ಸಹ ಆನಂದ್ ಸಿಂಗ್ ಅವರು ನೀಡಿದ್ದರು ಎನ್ನಲಾಗಿದೆ.
ರಾಜೀನಾಮೆ ಕೊಟ್ಟಿರುವುದು ಹೌದು: ಶಾಸಕ ಆನಂದ್ ಸಿಂಗ್ ಸ್ಪಷ್ಟನೆ
ಮಗನನ್ನು ರಾಜಕೀಯಕ್ಕೆ ತರುವ ಯತ್ನ
ಮಗ ಸಿದ್ಧಾರ್ಥ್ನನ್ನು ರಾಜಕೀಯ ಅಂಗಳಕ್ಕೆ ತರಬೇಕೆಂಬ ಆಸೆಯು ಆನಂದ್ ಸಿಂಗ್ ಅವರಿಗೆ ಇತ್ತು. ಹಾಗಾಗಿ ಈಗ ರಾಜೀನಾಮೆ ನೀಡಿ ಉಪಚುನಾವಣೆಗೆ ಮಗ ಸಿದ್ದಾರ್ಥ್ನನ್ನು ಚುನಾವಣೆಗೆ ನಿಲ್ಲಿಸಲು ಆನಂದ್ ಸಿಂಗ್ ಅವರು ಹೀಗೆ ಮಾಡಿರುವ ಸಾಧ್ಯತೆ ಇದೆ. ಮಗನನ್ನು ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
ಆನಂದ್ ಸಿಂಗ್ ರಾಜೀನಾಮೆ: ಕಾಂಗ್ರೆಸ್ಗೆ ಕೈ ಕೊಡಲಿದ್ದಾರೆ ಐದು ಶಾಸಕರು?
ಬಿಜೆಪಿ ಸೇರಲಿದ್ದಾರೆ ಆನಂದ್ ಸಿಂಗ್?
ಆನಂದ್ ಸಿಂಗ್ ಅವರು ನಿನ್ನೆ ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ರಾಜೀನಾಮೆ ಮತ್ತು ಮುಂದೆ ಬಿಜೆಪಿ ಸರ್ಕಾರ ರಚನೆಯಾದರೆ ಅಲ್ಲಿ ತಮಗೆ ದೊರಕಬೇಕಾದ ಸ್ಥಾನ-ಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅವರು ಬಿಜೆಪಿಯಲ್ಲಿಯೇ ಇದ್ದರು, ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.
ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು ಆನಂದ್ ಸಿಂಗ್
ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಅವರಿಗೆ ಈ ಬಾರಿ ಸಂಪುಟ ಸೇರುವ ಆಸೆ ಇತ್ತು, ಈ ಬಗ್ಗೆ ಬೇಡಿಕೆಯನ್ನೂ ಇಟ್ಟಿದ್ದರು, ಆದರೆ ಅವರಿಗೆ ಅವಕಾಶ ನಿರಾಕರಿಸಲಾಯಿತು. ಇದು ಸಹ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.