ನಾನ್ಯಾಕೆ ರಾಜಕೀಯ ಸನ್ಯಾಸ ಸ್ವೀಕರಿಸಲಿ : ಈಶ್ವರಪ್ಪ
ಬೆಂಗಳೂರು, ಡಿಸೆಂಬರ್ 30 : "ನಾನ್ಯಾಕೆ ರಾಜಕೀಯ ಸನ್ಯಾಸ ಸ್ವೀಕರಿಸಲಿ? ಅಂದು ನಾನು ನೀಡಿದ್ದ ಸವಾಲನ್ನು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಸ್ವೀಕರಿಸಿದ್ದರೆ ನಾನು ಹೇಳಿದಂತೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತಿದ್ದೆ" ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಪ್ರತಿ ಸವಾಲು ಎಸೆದಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲು ಅನುಭವಿಸಿರುವುದರಿಂದ, ಚುನಾವಣೆಗೂ ಮುನ್ನ ಈಶ್ವರಪ್ಪ ನೀಡಿದ್ದ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ಸಿಗಿಂತ ಬಿಜೆಪಿ ಒಂದು ಸ್ಥಾನ ಕಡಿಮೆ ಸ್ಥಾನ ಗಳಿಸಿದರೂ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಈಶ್ವರಪ್ಪ ಸವಾಲು ಎಸೆದಿದ್ದರು.
ಇದೀಗ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಘೋಷಿತವಾಗಿರುವ 23 ಸ್ಥಾನಗಳಲ್ಲಿ 13ನ್ನು ಗೆದ್ದು ವಿಜಯದುಂಧುಬಿ ಮೊಳಗಿಸಿದೆ. ಕಳೆದ ಬಾರಿ 7 ಸ್ಥಾನ ಗೆದ್ದಿದ್ದ ಬಿಜೆಪಿ ಈಗ ಕೇವಲ 6 ಸ್ಥಾನ ಮಾತ್ರ ಗೆದ್ದಿದೆ. ಜೆಡಿಎಸ್ ಮತ್ತು ಪಕ್ಷೇತರರು ತಲಾ ಎರಡು ಸ್ಥಾನ ಪಡೆದುಕೊಂಡಿದ್ದಾರೆ.
ಈಶ್ವರಪ್ಪ ಅವರಾಡಿದ್ದ ಮಾತನ್ನೇ ತಿರುಗುಬಾಣವಾಗಿಸಿರುವ ಸಿದ್ದರಾಮಯ್ಯ ಅವರು, ಹೇಳಿದ ಮಾತಿನಂತೆ ಈಶ್ವರಪ್ಪ ರಾಜಕೀಯ ಸನ್ಯಾಸ ಸ್ವೀಕರಿಸಲಿ ಎಂದು ಪಂಥಾಹ್ವಾನ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡ ಸಿದ್ದರಾಮಯ್ಯ ಅವರ ಮಾತಿಗೆ ದನಿಗೂಡಿಸಿದ್ದಾರೆ. ಸೋಮಣ್ಣ ಕೂಡ ಈಶ್ವರಪ್ಪ ಅವರಂತೆಯೇ ಕಾಂಗ್ರೆಸ್ಸಿಗೆ ಸವಾಲು ಎಸೆದಿದ್ದರು.
ಈ ಮಾತುಗಳಿಗೆ ತಿರುಗೇಟು ನೀಡಿರುವ ಈಶ್ವರಪ್ಪ, "ನಾನು ಆಗ ಹೇಳಿದ್ದೇನೋ ಸರಿ. ಆದರೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಆಗ ನನ್ನ ಸವಾಲು ಸ್ವೀಕರಿಸಿದರೆ? ಇಲ್ಲ! ಈಗ ನಾನ್ಯಾಕೆ ಸನ್ಯಾಸ ತೆಗೆದುಕೊಳ್ಳಲಿ. ಕಾಂಗ್ರೆಸ್ ಗೆದ್ದಿದೆ, ಬಿಜೆಪಿ ಸೋತಿದೆ ಒಪ್ಪಿಕೊಳ್ಳುತ್ತೇನೆ" ಎಂದು ತಮ್ಮ ಎಂದಿನ ಶೈಲಿಯಂತೆ ಮಾತಿನ ತಿರುಗೇಟು ನೀಡಿದ್ದಾರೆ.