ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ತಡಯಾಕೆ ಎಂದರೆ; ನಿಮಗೆ ಸರಿಯಾಗಿ ಸಂಬಳ ಬಂದ್ಬಿಡುತ್ತಾ ಎಂದ ಲಕ್ಷ್ಮಿ ಹೆಬ್ಬಾಳ್ಕರ್!
ರಾಜ್ಯದಲ್ಲಿ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಪ್ರಮುಖವಾಗಿದೆ. ಆದರೆ, ಈ ಯೋಜನೆಯ ಹಣವೂ ಪ್ರತಿ ತಿಂಗಳೂ ವಿಳಂಬವಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ 2000 ಸಾವಿರ ರೂಪಾಯಿ ನೀಡಲಾಗುತ್ತಿದೆ. ಆದರೆ, ಈ ವಿಚಾರವಾಗಿ ಮಾತನಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಅಲ್ಲದೇ ಸರ್ಕಾರದಲ್ಲಿ ಕೆಲವೊಮ್ಮೆ ಸಂಬಳಗಳೂ ಸಹ ವಿಳಂಬವಾಗುತ್ತವೆ ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಪ್ರತಿ ತಿಂಗಳು ಈ ಯೋಜನೆಯ ಅಡಿಯಲ್ಲಿ ನೀಡುವ 2000 ಸಾವಿರ ರೂಪಾಯಿ ವಿಳಂಬವೇಕೆ ಎನ್ನುವುದಕ್ಕೆ ವ್ಯಂಗ್ಯವಾಗಿ ಉತ್ತರಿಸಲು ಹೋಗಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಲಕ್ಷಾಂತರ ಜನ ಮಹಿಳೆಯರಿಗೆ ಲಾಭವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಯೋಜನೆಯ ಹಣ ಪ್ರತಿ ತಿಂಗಳು ಸರಿಯಾಗಿ ಮಹಿಳೆಯರ ಖಾತೆಗೆ ಜಮೆಯಾಗುತ್ತಿಲ್ಲ ಎನ್ನುವುದು ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಆರೋಪವಾಗಿದೆ. ಆದರೆ, ಮಂಗಳವಾರ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ ಹೆಬ್ಬಾಳ್ಕರ್ ಅವರು ತಡವರಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಒಂದು ತಿಂಗಳಲ್ಲಿ ಒಂದು ದಿನ ಬರುವುದು ತಡವಾದರೆ. ನನಗೆ 500ಕ್ಕೂ ಹೆಚ್ಚು ಕರೆಗಳು ಬರುತ್ತವೆ. ಆ ಕರೆಗಳಿಗೆ ಉತ್ತರ ನೀಡುವುದು ಹಾಗೂ ಅವರಿಗೆ ಧೈರ್ಯ ತುಂಬುವುದಕ್ಕೇ ಸಾಕಾಗುತ್ತದೆ. ನನ್ನ ಟೈಮ್ ಇದರಲ್ಲೇ ಹೋಗುತ್ತೆ. ಈ ತಿಂಗಳು ಸ್ವಲ್ಪ ತಡವಾದರೆ, ಮುಂದಿನ ತಿಂಗಳು ಬರಲ್ಲ ಅಂತ ವಿರೋಧ ಪಕ್ಷದ ನಾಯಕರು ಹೇಳುತ್ತಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇಲ್ಲ ನಾವು ವಚನಭ್ರಷ್ಟರಲ್ಲ, ನಾವು ವಚನ ಉಳಿಸಿಕೊಂಡಿದ್ದೇವೆ ಎಂದು ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದ್ಯಾಕೆ ಮೇಡಂ ಪ್ರತಿ ತಿಂಗಳು ಸರಿಯಾಗಿ ಯಾಕೆ ಬರ್ತಿಲ್ಲ ಎನ್ನುವ ಪ್ರಶ್ನೆಗೆ, ಪ್ರತಿ ತಿಂಗಳೂ ನಿಮಗೆ ಸಂಬಳ ಸರಿಯಾಗಿ ಬಂದು ಬಿಡುತ್ತಾ ಎಂದು ಅವರು ಪತ್ರಕರ್ತರನ್ನೇ ತಿರುಗಿಸಿ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಸರ್ಕಾರಿ ಸಂಸ್ಥೆಗಳಲ್ಲಿ ಒಂದು ತಿಂಗಳು ಕೊಡ್ತಾರೆ ಕೆಲವೊಮ್ಮೆ ಮೂರು ತಿಂಗಳಿಗೊಮ್ಮೆ ಕೊಡ್ತಾರೆ ಇನ್ನೂ ಕೆಲವೊಮ್ಮೆ ಎರಡು ತಿಂಗಳಿಗೊಮ್ಮೆ ಕೊಡ್ತಾರೆ. ಸರ್ಕಾರದಲ್ಲಿ ಖಂಡಿತವಾಗಿಯೂ ಈ ರೀತಿ ಆಗುತ್ತದೆ. ಎರಡೆರಡು ತಿಂಗಳು ಕೆಲವೊಮ್ಮೆ ತಡವಾಗುತ್ತೆ. ಇದು ನಿಮಗೂ ಗೊತ್ತಿದೆ ಯಾಕೆ ಸುಮ್ಮನೆ ನನ್ನ ಬಾಯಲ್ಲಿ ಹಾಕಿಸ್ತೀರಾ ಅಂತಲೂ ಅವರು ಹೇಳಿದ್ದಾರೆ.
ವಿಕಲಚೇತನರ ಅನುದಾನಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ವಿಕಲಚೇತನರಿಗೆ ಸಂಬಂಧಿಸಿದಂತೆ ಎಷ್ಟು ಅರ್ಜಿಗಳು ಬರುತ್ತವೆ ಹಾಗೂ ಅವು ಯಾವುದಕ್ಕೆ ಸಂಬಂಧಿಸಿದಂತೆ ಇವೆ ಎನ್ನುವುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಮೂರು ಚಕ್ರದ ವಾಹನಗಳಿಗೆ ಸಂಬಂಧಿಸಿದಂತೆ, ವೀಲ್ಹ್ ಚೇರ್ ಹಾಗೂ ಲ್ಯಾಪ್ಟಾಪ್ಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಬರುತ್ತವೆ. ಈ ರೀತಿ ಇಲಾಖೆಗೆ ಬರುವ ಅರ್ಜಿಗಳನ್ನು ನೋಡಿ ಆ ಅರ್ಜಿಗಳು ಅರ್ಹವಾಗಿವೆಯೇ ಎಂದು ಪರಿಶೀಲನೆ ಮಾಡಿ, ಅನುದಾನ ಕೊಡಬೇಕಾಗುತ್ತದೆ. ಅದಕ್ಕೆ 44 ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ 14 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇನ್ನುಳಿದ ಅನುದಾನವೂ ಬಿಡುಗಡೆಯಾಗಲಿದೆ ಎಂದಿದ್ದಾರೆ.












Click it and Unblock the Notifications