ಪ್ರೊ. ಭಗವಾನ್ ಅವರಿಗೆ ಪ್ರಶಸ್ತಿ ಯಾಕೆ ಕೊಡಬಾರದು?
ಸಾಹಿತ್ಯ ಕ್ಷೇತ್ರ ಅನ್ನೋದು ಭಾಷೆಯನ್ನು ಉಳಿಸಿ, ಬೆಳೆಸಲು ಇರುವ ಮಾಧ್ಯಮ, ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಹಿತಿ ಹಾಗೂ ಓದುಗ ಇಬ್ಬರ ಕೊಡುಗೆಯೂ ಅಗತ್ಯ.
ಹಿಂದೆ ಸಾಹಿತಿಗಳು ಅಂದರೆ ಅವರ ಕೃತಿ ಹಾಗೂ ಅವರ ಮಾತುಗಳಿಗೆ ಒಂದು ರೀತಿಯ ಸಾಮ್ಯತೆ ಇರುತ್ತಿತ್ತು, ಸಾಹಿತಿಯು ಎಡ ಅಥವಾ ಬಲ ಪಂಥೀಯ ಧೋರಣೆಗಳನ್ನೇ ಹೊಂದಿದ್ದರೂ ಅವರನ್ನು ಸಮಾಜ ಅಥವಾ ಓದುಗರು ಗೌರವ ಭಾವನೆಯಿಂದಲೇ ಕಾಣುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಲೇಖಕರ ನಿಂದನಾತ್ಮಕ ಹೇಳಿಕೆಗಳಿಂದ ಸಾಹಿತಿಗಳು ಗೌರವ ಕಳೆದುಕೊಳ್ಳುತ್ತಿದ್ದಾರೆ ಅನ್ನುವುದಕ್ಕೆ ಉತ್ತಮ ಉದಾಹರಣೆ ಪ್ರೊ.ಭಗವಾನ್ ವಿವಾದ. (ಪ್ರಶಸ್ತಿಗೆ ಪಾತ್ರರಾದವರ ಸಾಧನೆಯನ್ನು ಅಕಾಡೆಮಿ ತಿಳಿಸಲಿ)
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಸುಡುತ್ತೇನೆ ಎಂಬ ಹೇಳಿಕೆಯನ್ನು ಕೊಡುವುದರ ಮೂಲಕ ,ಕನ್ನಡಿಗರಿಗೆ ಭಗವಾನ್ ಎಂಬ ವ್ಯಕ್ತಿಯ ಪರಿಚಯವಾಯಿತು ಎಂದರೆ ತಪ್ಪಾಗಲಾರದು. ಯಾಕೆಂದರೆ ಆ ಘಟನೆಯ ಮೊದಲು ಬಹುತೇಕರಿಗೆ ಭಗವಾನ್ ಯಾರೆಂಬುದೇ ಗೊತ್ತಿರಲಿಲ್ಲ.
ಗ್ರಂಥವನ್ನು ಸುಡುವ ಮಾತು ಆಸ್ತಿಕರು ಮಾತ್ರವಲ್ಲದೆ ಸಾಹಿತ್ಯ ಆಸಕ್ತ ನಾಸ್ತಿಕರನ್ನು ಅಸಮಾಧಾನಗೊಳಿಸಿತ್ತು ಯಾಕೆಂದರೆ ಯಾವುದೇ ಒಂದು ಗ್ರಂಥವನ್ನು ಸುಡುವುದರಿಂದ ಅದರಲ್ಲಿರುವ ವಿಚಾರಗಳು ನಾಶವಾಗಲಾರದು ಎಂಬ ಸತ್ಯ ಭಗವಾನ್ ಅವರಿಗೆ ಅರಿಯದೇ ಹೋದದ್ದು.
ಹಾಗೂ ಪುಸ್ತಕವನ್ನು ಸುಡುವ ಬಗ್ಗೆ ಮಾತುಗಳನ್ನಾಡಿದ್ದು ವಿಪರ್ಯಾಸವೇ ಸರಿ. ಸಾಮಾನ್ಯ ಧನಾತ್ಮಕ ಚಿಂತನೆಗಳ ಬಗ್ಗೆ ಸಮಾಜ ನಿಧಾನವಾಗಿ ಪ್ರತಿಕ್ರಿಯೆ ನೀಡಿದರೂ, ಋಣಾತ್ಮಕ ವಿಚಾರಗಳ ಬಗ್ಗೆ ಜನರ ಸ್ಪಂದನೆ ಬೇಗ ದೊರಕುವುದೆಂಬ ಸತ್ಯ ಅರಿತು ಪ್ರೊ. ಭಗವಾನ್ ಅವರು ತನಗೆ ತಾನು ಪ್ರಚಾರ ಪಡೆದುಕೊಂಡರೇ ಅನ್ನುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. (ಭಗವಾನ್ ಯಾರು, ಎತ್ತ)
(ಲೇಖನವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ ಮತ್ತು ಲೇಖನದಲ್ಲಿ ಬರೆದಿರುವ ಮಾಹಿತಿ, ಅಭಿಪ್ರಾಯ ಸಂಪೂರ್ಣ ಲೇಖಕರದ್ದು)
ಎಡಪಂಥೀಯ ವಿಚಾರಧಾರೆಯನ್ನು ಹೊಂದಿರುವ ಸಾಹಿತಿ
ಪ್ರೊ. ಭಗವಾನ್ ಅವರನ್ನು ಎಡಪಂಥೀಯ ವಿಚಾರಧಾರೆಯನ್ನು ಹೊಂದಿರುವ ಸಾಹಿತಿ ,ಸಂಸ್ಕೃತ ಪಂಡಿತ, ಸಂಶೋಧಕ ಅಥವಾ ಇನ್ನಿತರ ಮಾತುಗಳಿಂದ ವರ್ಣಿಸಿದರೂ ಅವರ ಸಂಸ್ಕೃತ ಜ್ಞಾನ ಗುಣಮಟ್ಟದಲ್ಲ ಅನ್ನುವ ಟೀಕೆಯೂ ಇದೆ. ಉದಾಹರಣೆಗೆ ಒಂದು ಪದಕ್ಜೆ ಅವರು ನೀಡಿದ ಅರ್ಥ ಹೀಗಿತ್ತು, ನಾಸ್ತಿಕ = ಆಸ್ತಿ ಇಲ್ಲದವನು ಅಂತಾ, ಈ ರೀತಿ ಹೇಳಿ ನಗೆಪಾಟಾಲಿಗೆ ಈಡಾಗಿದ್ದ ಭಗವಾನ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾದದ್ದು ಬಹುತೇಕ ಸಾಹಿತ್ಯ ಅಭಿಮಾನಿಗಳನ್ನು ಕೆರಳಿಸಿದೆ.
ಅನ್ನ ಬೆಂದಿದೆಯೋ ಇಲ್ಲವೋ
ಅನ್ನ ಬೆಂದಿದೆಯೋ ಇಲ್ಲವೋ ಎನ್ನುವುದನ್ನು ಅರಿಯಲು ಕೇವಲ ಒಂದು ಅಗುಳು ಮುಟ್ಟಿದರೆ ಸಾಕು, ಅದೇ ರೀತಿ ಭಗವಾನ್ ಅವರ ಹೇಳಿಕೆಗಳನ್ನೇ ಗಮನಿಸಿದರೆ ಸಾಕು ಇವರಿಗೆ ಪ್ರಶಸ್ತಿ ಘೋಷಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಮಾಜದ ಎಲ್ಲ ವರ್ಗಗಳಿಂದ ಕೇಳಿಬರುತ್ತಿದೆ. ಪ್ರಶಸ್ತಿ ಬಗ್ಗೆ ಅಪಸ್ವರ ಎತ್ತುತ್ತಿರುವವರು ಅರೆಬೆಂದ ಮನಸ್ಥಿತಿಯವರು ಎಂದು ಸಾಹಿತ್ಯ ಅಕಾಡೆಮಿಯ ಮಾಲತಿ ಪಟ್ಟಣಶೆಟ್ಟಿ ಹೇಳಿದ್ದರು.
ಕನ್ನಡಕ್ಕೆ ಅನುವಾದವಾದ ಪುಸ್ತಕ
ಇನ್ನು ಅವರ ಲೇಖನದ ವಿಚಾರಕ್ಕೆ ಬಂದರೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ನೆಸ್ಟ್ ಹೆಮಿಂಗ್ವೆ ಬರೆದ 'The Old Man And The Sea' ಪುಸ್ತಕವನ್ನು, ಪ್ರೊ.ಭಗವಾನ್ ಕನ್ನಡಕ್ಕೆ ಅನುವಾದಿಸಿದ್ದರು. ಎರಡು ಪುಟಗಳನ್ನು ಓದಿದಾಗ ಆ ಅನುವಾದ ಎಷ್ಟರ ಮಟ್ಟಿಗೆ ಕಳಪೆಯಾಗಿತ್ತೆಂದರೆ, ಕನ್ನಡಿಗರೇ ಇನ್ನೊಬ್ಬ ಅನುವಾದಕರನ್ನು ಬಳಿ ಕುಳ್ಳಿರಿಸಿ ಅರ್ಥ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ಯಾವುದೋ ಒಂದು ತಂತ್ರಾಂಶವನ್ನು ಉಪಯೋಗಿಸಿ ಅನುವಾದಿಸಿದಂತಿತ್ತು ಆ ಲೇಖನ. ಇಲ್ಲಿರುವ ಪ್ರಶ್ನೆ ಏನಂದರೆ, ಹೀಗಿದ್ದರೂ ಸಾಹಿತ್ಯ ಅಕಾಡೆಮಿ ಇವರ ಹೆಸರನ್ನು ಪ್ರಶಸ್ತಿಗೆ ಹೇಗೆ ಅಂತಿಮಗೊಳಿಸಿತು ಎನ್ನುವುದು.
ಪ್ರಶಸ್ತಿ ನೀಡುವುದನ್ನು ವಿರೋಧಿಸಲು ಇರುವ ಪ್ರಮುಖ ಕಾರಣ
ಪ್ರೊ. ಭಗವಾನ್ ಅವರಿಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಲು ಇರುವ ಇನ್ನೊಂದು ಮುಖ್ಯ ಕಾರಣವೇನೆಂದರೆ ರಾಜ್ಯದಲ್ಲಿನ ಕೋಮು ಸೌಹಾರ್ದತೆಯ ಸವಾಲು. ಸಾಮಾನ್ಯವಾಗಿ ಹಿಂದೂ ನಾಯಕರು ಇನ್ನೊಂದು ಮತದ ಬಗ್ಗೆ ಹೇಳಿಕೆಗಳನ್ನು ನೀಡಿದಾಗ ಅವರನ್ನು ಬಂಧಿಸುವುದು, ಅವರ ಪ್ರವೇಶವನ್ನು ನಿಷೇಧಿಸುವುದು ಸಾಮಾನ್ಯ. ಆದರೆ ಭಗವಾನ್ ಅವರು ಶ್ರೀ ರಾಮನಿಗೆ ಅಪ್ಪ ಇಲ್ಲ, ಆತ ಮದ್ಯ ಸೇವಿಸುತ್ತಿದ್ದ ಹಾಗೂ ಶ್ರೀ ಕೃಷ್ಣ ಪಾಪಿ ಇಂತಹ ಹೇಳಿಕೆಗಳನ್ನು ಕೊಡುವುದರ ಮೂಲಕ ಬಹುಸಂಖ್ಯಾತ ಹಿಂದೂಗಳ ಮನಸ್ಸನ್ನು ಘಾಸಿಗೊಳಿಸಿದ್ದಾರೆ.
ಕೋಮು ಸಾಮರಸ್ಯ
ಇಂತಹ ಆಧಾರ ರಹಿತ ಹೇಳಿಕೆಗಳ ಮೂಲಕ ಸಮಾಜದ ಕೋಮು ಸಾಮರಸ್ಯವನ್ನು ಕದಡಿ ಶಾಂತಿ ಭಂಗ ಉಂಟು ಮಾಡುವ ವ್ಯಕ್ತಿಯ ಪರವಾಗಿ ಸಿಎಂ ಹೇಳಿಕೆ ನೀಡಿರುವುದು ವಿಪರ್ಯಾಸ. ಭಗವಾನ್ ಅವರಿಗೆ ಪ್ರಶಸ್ತಿ ಕೊಟ್ಟ ನಂತರ ಇನ್ನೊಬ್ಬರು ಇನ್ನೊಂದು ಮತದ ಬಗ್ಗೆ ಹೀಗೇ ಒಕ್ಕಣೆ ಹಾಕಿ ತೊಂದರೆಯಾದರೆ ಸರಕಾರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ದವಿದೆಯೇ?
ಪ್ರಶಸ್ತಿ ರದ್ದು ಮಾಡುವಂತೆ ಆಗ್ರಹ
ಭಗವಾನರಿಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಸಾಹಿತ್ಯಾಸಕ್ತರು change.orgನಲ್ಲಿ ಪಿಟಿಷನ್ ಒಂದನ್ನು ಸಲ್ಲಿಸಿ , ಹತ್ತು ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸುವ ಮೂಲಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನು ಪ್ರಶಸ್ತಿ ರದ್ದುಮಾಡುವಂತೆ ಆಗ್ರಹಿಸಿದ್ದಾರೆ ಹಾಗೂ ಅದಕ್ಕಾಗಿ ಸೂಕ್ತ ಕಾರಣಗಳನ್ನು ಕೂಡಾ ಕೊಟ್ಟಿದ್ದಾರೆ. (ಪ್ರಶಸ್ತಿ ಹಿಂಪಡೆಯಲು ಹಕ್ಕೊತ್ತಾಯ)
ಅಕಾಡೆಮಿಯ ಗೌರವಕ್ಕೆ ಕಪ್ಪುಚುಕ್ಕೆ
ರಾಜ್ಯ ಸರಕಾರಕ್ಕೆ ಹಾಗೂ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಆಯ್ಕೆ ಸಮಿತಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಕಪ್ಪು ಚುಕ್ಕೆ ಬರಬಾರದೆಂಬ ಆಶಯವಿದ್ದರೆ ಈ ಕೂಡಲೇ ಪ್ರೊ. ಭಗವಾನರಿಗೆ ಘೋಷಿಸಿರುವ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಕೂಗು ಬೌದ್ಧಿಕ ವರ್ಗದಿಂದ ಕೇಳಿಬರುತ್ತಿದೆ. ಅದೇ ರೀತಿ ತರಾತುರಿ ನಿರ್ಧಾರದಿಂದ ಪ್ರಶಸ್ತಿ ಘೋಷಿಸಿರುವ ನಿರ್ಧಾರವನ್ನು ನೋಡಿದರೆ, ಈ ಪ್ರಶಸ್ತಿಗಾಗಿ ಏನಾದರೂ ಲಾಬಿ ನಡೆದಿದೆಯೇ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.
ಸಾಹಿತ್ಯಾಭಿಮಾನಿಗಳ ನಿರೀಕ್ಷೆ
ಟ್ವಿಟರ್ ಹಾಗೂ ಫೇಸ್ಬುಕ್ ಜಾಲತಾಣಗಳಲ್ಲಿ #withdrawaward ಎಂಬ hashtag ಬಳಸುವುದರ ಮೂಲಕ , ಭಗವಾನ್ ಅವರಿಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಲಾಗುತ್ತಿದೆ. ಈ ರೀತಿಯ ವಿರೋಧ ವ್ಯಕ್ತವಾದ ನಂತರವೂ ಪ್ರಶಸ್ತಿಯ ವಿಚಾರದಲ್ಲಿ ಬದಲಾವಣೆಗಳು ಆಗಬಹುದೇ ಎನ್ನುವುದನ್ನು ಸಾಹಿತ್ಯಾಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.