Gruha Lakshmi Scheme: ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಯಾರ ಖಾತೆಗೆ ಹಣ ಹೋಗುತ್ತೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರವರಿ 28: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಯೋಜನೆ ಜಾರಿ ಮಾಡಲಾಗಿದ್ದು, ಮನೆಯ ಒಡತಿಗೆ ಮಾಸಿಕ 2000 ನೀಡುವ ಯೋಜನೆ ಇದಾಗಿದೆ.
ಪ್ರತಿ ತಿಂಗಳು ಮನೆಯ ಯಜಮಾನಿಗೆ ಖಾತೆಗೆ 2000 ರೂಪಾಯಿಯನ್ನ ಸರ್ಕಾರದಿಂದ ಜಮಾ ಮಾಡಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆ ಜಾರಿಯಾದ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇಲ್ಲಿಯವರೆಗೂ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಹಣ ನೀಡಲು ಸಾಧ್ಯವಾಗಿಲ್ಲ. ಶೇ.80 ರಷ್ಟು ಜನರಿಗೆ ಮಾತ್ರ ಡಿಬಿಟಿ ಮೂಲಕ ಹಣ ಜಮಾ ಆಗುತ್ತಿದೆ ಎನ್ನಲಾಗಿದೆ. ಇನ್ನೂ ಸರಿಯಾದ ದಾಖಲೆಗಳು ಸಹ ನೀಡದ ಹಿನ್ನಲೆ ಕೆಲವು ಫಲಾನುಭವಿಗಳ ಖಾತೆ ಹಣ ಜಮಾ ಆಗಿಲ್ಲ

ಇದೀಗ ಒಂದು ವೇಳೆ ಗೃಹ ಲಕ್ಷ್ಮಿ ಯೋಜನೆ ಹಣ ಪಡೆಯುತ್ತಿದ್ದ ಮನೆಯ ಯಜಮಾನಿ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು? ಎನ್ನುವ ಸಮಸ್ಯೆ ಎದುರಾಗಿದೆ. ಅಲ್ಲದೇ ಕೆಲವು ಜಿಲ್ಲೆಗಳಲ್ಲಿ ಈ ಸಮಸ್ಯೆ ಎದುರಾಗಿದ್ದು, ಈ ಗೃಹ ಲಕ್ಷ್ಮಿ ಹಣ ಪಡೆಯುವ ಮಹಿಳೆ ಮೃತಪಟ್ಟರೆ ಆ ಹಣ ಯಾರ ಖಾತೆಗೆ ಜಮಾ ಆಗಲಿದೆ ಎಂದು ಮಹಿಳೆಯರು ಕೇಳುತ್ತಿದ್ದಾರೆ. ಅದಕ್ಕೂ ಸಹ ಸರ್ಕಾರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಒಂದು ವೇಳೆ ಗೃಹ ಲಕ್ಷ್ಮಿ ಫಲಾನುಭವಿಯಾದ ಮನೆ ಯಜಮಾನಿ ಮೃತಪಟ್ಟಿದ್ದರೆ ಆಕೆಯ ಕುಟುಂಬದ ಹಿರಿಯ ಸೊಸೆ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯ ಜಾಗದಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಅವರಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರವು ಈಗಾಗಲೇ ಏಳು ಕಂತುಗಳ ಹಣ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಿದ ಶೇ.80 ರಷ್ಟು ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿದೆ. ಕೆಲ ಮಹಿಳೆಯರು ತಮ್ಮ ಖಾತೆಗೆ ಹಣ ಜಮಾ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಸರ್ಕಾರವು ನಿಮ್ಮ ಬ್ಯಾಂಕ್ ಖಾತೆ ಪರಿಶೀಲನೆ ಮಾಡಿಕೊಳ್ಳಿ, ಅದರಲ್ಲಿ ಏನಾದರೂ ತಾಂತ್ರಿಕ ದೋಷ ಇದ್ದರೆ ಹಣ ಜಮಾ ಮಾಡಲು ಆಗುವುದಿಲ್ಲ. ಅಲ್ಲದೆ ಖಾತೆಯಲ್ಲಿ ಒಂದು ವೇಳೆ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿಯೂ ಖಾತೆ ಆರಂಭಿಸಿ ಅದನ್ನು ಗೃಹ ಲಕ್ಷ್ಮಿ ಯೋಜನೆಗೆ ಜೋಡಣೆ ಮಾಡಬಹುದು ಎಂದು ತಿಳಿಸಿತ್ತು. ಇದರ ಜೊತೆ ಇ-ಕೆವೈಸಿ ಮಾಡಲೂ ಸಹ ಮನವಿ ಮಾಡಿಕೊಂಡಿತ್ತು.












Click it and Unblock the Notifications