Opposition Leader: ಯಾರಾಗ್ತಾರೆ ಸಿದ್ದರಾಮಯ್ಯ ಸರ್ಕಾರ ಎದುರಿಸುವ ಸಮರ್ಥ ವಿಪಕ್ಷ ನಾಯಕ?
2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಪ್ರಕ್ರಿಯೆಗೆ ತೆರೆ ಬಿದ್ದಿದ್ದು, 135 ಸ್ಥಾನಗಳಲ್ಲಿ ಗೆದ್ದು ಅಭೂತಪೂರ್ವ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಮತ್ತು 8 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಶನಿವಾರ, ಮೇ 20ರಂದು ಪ್ರಮಾಣ ಸ್ವೀಕರಿಸುತ್ತಿದ್ದಂತೆ, ಅಧಿಕೃತವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಇನ್ನು ಸೋಮವಾರ, ಮೇ 22ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಈ ವೇಳೆ ಸ್ಪೀಕರ್ ಆಯ್ಕೆ, ನೂತನ ಶಾಸಕರ ಪ್ರಮಾಣ ವಚನ, ರಾಜ್ಯಪಾಲರ ಭಾಷಣ ಸಹ ಇರಲಿದೆ. ಇದೇ ವೇಳೆ ವಿಪಕ್ಷ ನಾಯಕನ ಆಯ್ಕೆಯೂ ನಡೆಯಲಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ಯಾರು ವಿಪಕ್ಷ ನಾಯಕನಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ವಿಧಾನಸಭೆ ಚುನಾವಣೆಯಲ್ಲಿ 66 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿದೆ. ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಬೇಕು ಎಂಬ ತಲೆನೋವು ಬಿಜೆಪಿಗೆ ಶುರುವಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಈ ಬಗ್ಗೆ ಬಿಜೆಪಿ ಯಾವುದೇ ಹೆಸರನ್ನು ಸೂಚಿಸಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸದಿರುವುದು, ಸದನದಲ್ಲಿ ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸೋಲು ಕಂಡಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ.

ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಬೇಕು ಎಂಬ ಗೊಂದಲದಲ್ಲಿರುವ ಬಿಜೆಪಿಗೆ ಸದ್ಯ ಮೂವರ ಹೆಸರುಗಳು ರೇಸ್ನಲ್ಲಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಮೂವರಲ್ಲಿ ಒಬ್ಬರು ವಿಪಕ್ಷ ನಾಯಕ, ಮತ್ತೊಬ್ಬರು ವಿಪಕ್ಷ ಉಪ ನಾಯಕನ ಜವಾಬ್ದಾರಿ ಹೊರಲಿದ್ದಾರೆ.
ಹಿಂದುತ್ವದ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದರೂ, ವಿಧಾನಸಭೆಯ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಪ್ರಬಲ ನಾಯಕರನ್ನು ಎದುರಿಸುವುದು ಸುಲಭವಲ್ಲ. ಅಂಕಿಅಂಶ ಮತ್ತು ವಾಸ್ತವಾಂಶಗಳ ಮೇಲೆ ಸರ್ಕಾರದ ಮೇಲೆ ದಾಳಿ ಮಾಡಬೇಕಾಗುತ್ತದೆ.
ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಿ, ತಾರ್ಕಿಕವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಚಾಕಚಕ್ಯತೆ ವಿಪಕ್ಷ ನಾಯಕನಿಗೆ ಇರಬೇಕಾಗುತ್ತದೆ. ಸದನದ ಒಳಗೂ ಹಾಗೂ ಹೊರಗೂ ಸಮರ್ಥವಾಗಿ ಎದುರಿಸುವ ನಾಯಕ ವಿಪಕ್ಷ ನಾಯಕ ಹುದ್ದೆಗೆ ಸೂಕ್ತ. ಹೀಗಾಗಿ ಇದು ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಸಾಧ್ಯವಿಲ್ಲ ಎನ್ನಬಹುದು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹಿರಿಯ ಹಾಗೂ ಅನುಭವವುಳ್ಳ ಶಾಸಕ ವಿಪಕ್ಷ ನಾಯಕ ಸ್ಥಾನಕ್ಕೆ ಎನ್ನುವುದಾದರೆ, ಅದರ ಮೊದಲ ಸ್ಥಾನದಲ್ಲಿ ಕೇಳಿಬರುವ ಹೆಸರೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷಗಳ ಅನುಭವ ಅವರಿಗಿದೆ. ಆಡಳಿತದ ಅನುಭವ ಮತ್ತು ಎಲ್ಲ ಇಲಾಖೆಗಳ ಮಾಹಿತಿ ಇರುವ ಕಾರಣ ಬಸವರಾಜ ಬೊಮ್ಮಾಯಿಯೇ ಸೂಕ್ತ ಎನ್ನಲಾಗಿದೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಆಡಳಿತ ಅನುಭವ, ಜ್ಞಾನ, ಎದುರೇಟು ನೀಡುವ ಮಾತುಗಾರಿಕೆ ಬಿಜೆಪಿಯ ಸದ್ಯ ಇರುವ ಶಾಸಕರಲ್ಲಿ ತಕ್ಕಮಟ್ಟಿಗೆ ಬಸವರಾಜ ಬೊಮ್ಮಾಯಿ ಅವರ ಕೈ ಮೇಲು ಎಂಬ ಮಾತಿದೆ.
ಉಪ ನಾಕಯಕನ ಸ್ಥಾನಕ್ಕೆ ಆರ್. ಅಶೋಕ್
ವಿಪಕ್ಷ ನಾಯಕರಾಗಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಆಯ್ಕೆಯಾಗಲಿದ್ದರೆ, ವಿಪಕ್ಷ ಉಪ ನಾಯಕನ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಆರ್. ಅಶೋಕ್ರನ್ನು ಬಿಜೆಪಿ ನೇಮಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೆಂಗಳೂರು ನಗರದ ಮೇಲೆಯೂ ಆರ್. ಅಶೋಕ್ ಉತ್ತಮ ಹಿಡಿತ ಹೊಂದಿದ್ದಾರೆ.
ಒಟ್ಟಿನಲ್ಲಿ ಸೋಮವಾರದಿಂದ ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಪಕ್ಷ ನಾಯಕ ಹಾಗೂ ಉಪ ನಾಯಕ ಯಾರಾಗಲಿದ್ದದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.












Click it and Unblock the Notifications