ಆಯನೂರು ಕೈ ತಪ್ಪಲಿದೆ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ?
ಬೆಂಗಳೂರು, ಜೂನ್ 25 : ವಿಧಾನಪರಿಷತ್ ಸಭಾಪತಿಯಾರಾಗಲಿದ್ದಾರೆ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಷತ್ ಪ್ರತಿಪಕ್ಷ ನಾಯಕರು ಯಾರು? ಎಂಬ ಬಗ್ಗೆಯೂ ಕುತೂಹಲವಿದೆ. ಹಲವು ನಾಯಕರ ಹೆಸರು ಕೇಳಿಬರುತ್ತಿದೆ.
ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಅವರು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಆದ್ದರಿಂದ, ಪ್ರತಿಪಕ್ಷ ನಾಯಕರ ಸ್ಥಾನ ಖಾಲಿಯಾಗಿದೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಲು ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಆಯನೂರು ಮಂಜುನಾಥ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಆದರೆ, ಶಿವಮೊಗ್ಗದವರಾದ ಬಿ.ಎಸ್.ಯಡಿಯೂರಪ್ಪ ವಿಧಾನಸಭೆ ಪ್ರತಿಪಕ್ಷ ನಾಯಕರು. ಆದ್ದರಿಂದ, ಅದೇ ಜಿಲ್ಲೆಯವರಿಗೆ ಪರಿಷತ್ ಪ್ರತಿಪಕ್ಷ ಸ್ಥಾನವೂ ಸಿಗಲಿದೆಯೇ? ಕಾದು ನೋಡಬೇಕು.

ಆಯನೂರು ಮಂಜುನಾಥ್, ವೈ.ಎ.ನಾರಾಯಣಸ್ವಾಮಿ, ಕೋಟಾ ಶ್ರೀನಿವಾಸ ಪೂಜಾರಿ, ರಘುನಾಥ ಮಲ್ಕಾಪುರೆ ಅವರ ಹೆಸರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕೇಳಿಬರುತ್ತಿದೆ. ಇವರಲ್ಲಿ ಯಾರು ನಾಯಕರಾಗಲಿದ್ದಾರೆ? ಎಂದು ಕಾದು ನೋಡಬೇಕು.
ಕೋಟಾ ಶ್ರೀನಿವಾಸ ಪೂಜಾರಿ ಮತ್ತು ರಘುನಾಥ ಮಲ್ಕಾಪುರೆ ಅವರು ಹಿರಿತನದ ಆಧಾರದ ಮೇಲೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ವೈ.ಎ.ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಬೆಂಬಲವಿದೆ.












Click it and Unblock the Notifications