Gruha Lakshmi Scheme: 'ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್ ಚುನಾವಣೆ ಘೋಷಣೆ ಆದರೆ ಗೃಹಲಕ್ಷ್ಮಿ ಹಣ ಹಾಕ್ತಾರೆ'
ಹಾಸನ, ಫೆಬ್ರವರಿ 19: ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ ನೀಡುತ್ತಿದ್ದಾರೆ. ಗೃಹಲಕ್ಷ್ಮಿ ಹಣಕ್ಕಾಗಿ ರಾಜ್ಯದಲ್ಲಿ ತಾಯಂದಿರು ಕಾದು ಕುಳಿತಿದ್ದಾರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ, ಉಪಚುನಾವಣೆ ಚುನಾವಣೆ ವೇಳೆ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಮಹಿಳೆಯರಿಗೆ ಹಣ ಬಂತು. ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಆದರೆ ಗೃಹಲಕ್ಷ್ಮಿ ಹಣ ಹಾಕುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಹಾಸನದಲ್ಲಿ ಆಯೋಜಿಸಲಾಗಿದ್ದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು, ಮಾಜಿ ಸಚಿವರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಮುಖಂಡರುಗಳ ಜತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಮುಂಬರುವಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಅಂಗವಾಗಿ ಸಭೆ ಮಾಡಿದ್ದೇವೆ. ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ ಮುಂಬರುವ ಸ್ಥಳೀಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕುಮಾರಣ್ಣ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರ ಸಭೆ ಕರೆಯಲಿದ್ದಾರೆ. ಲೋಕಸಭಾ ಅಧಿವೇಶನ ನಡೆಯುವಾಗ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ದೇವೇಗೌಡರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಈ ಸಭೆ ಶೃಂಗೇರಿಯಲ್ಲಿ ನಿಗದಿಯಾಗಿತ್ತು.ಕುಮಾರಸ್ವಾಮಿ ಅವರು ಶೃಂಗೇರಿ ಬಂದು ದೇವಾಲಯಕ್ಕೆ ಬರಬೇಕಿತ್ತು. ಕುಮಾರಣ್ಣ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಭೆ ಮಾಡಬೇಕಾಯಿತು ಎಂದರು.
ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಹಳ ಭದ್ರವಾಗಿದೆ. ಕೇಂದ್ರ ನಾಯಕರು ದೇವೇಗೌಡರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿ ಅವರಿಗೆ ಎರಡು ಖಾತೆಗಳನ್ನು ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷದವರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ಲೋಪ ದೋಷವಾಗಿದ್ದರೆ. ಕೇಂದ್ರ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ನಾಯಕರು ತೀರ್ಮಾನ ಮಾಡ್ತಾರೆ ಅಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣವಿತ್ತು. ಡಾ.ಮಂಜುನಾಥ್ ರವರ ಹೆಸರು ಆಕಸ್ಮಿಕವಾಗಿ ಪಟ್ಟಿ ಸೇರಲು ಕಾರಣ ಬಿಜೆಪಿ ಕೇಂದ್ರ ನಾಯಕರು ಅಲ್ಲಿ ರಿಸಲ್ಟ್ ಏನಾಯ್ತು, ಚುನಾವಣೆ ಅಂದ ಮೇಲೆ ಗೆಲುವು, ಸೋಲು ಸರ್ವೆ ಸಾಮಾನ್ಯ. ಸೋತೆ ಎಂದು ಮನೆಯಲ್ಲಿ ಕೂರಲು ಆಗಲ್ಲ ರಾಜ್ಯದ ಜನರ ಸಮಸ್ಯೆ ಆಲಿಸಬೇಕು ಎಂದರು
ಇದೇ ಸಂದರ್ಭದಲ್ಲಿ ಶಾಸಕರಾದ ಶ್ರೀ ಸಿ.ಎನ್. ಬಾಲಕೃಷ್ಣ ಅವರು, ಶ್ರೀ ಎ. ಮಂಜು ಅವರು ಸ್ವರೂಪ್ ಪ್ರಕಾಶ್ ಅವರು,ಶ್ರೀಮತಿ ಶಾರದಾ ಪೂರ್ಯ ನಾಯಕ್ ಅವರು, ಮಾಜಿ ಸಚಿವರಾದ ಹೆಚ್. ಕೆ ಕುಮಾರಸ್ವಾಮಿ ಅವರು,ಸೂರಜ್ ರೇವಣ್ಣ, ಮಾಜಿ ಶಾಸಕರಾದ ಪ್ರಸನ್ನಕುಮಾರ್ ಮುಖಂಡರಾದ ಸುಧಾಕರ್ ಶೆಟ್ಟಿ ಅವರು, ಶ್ರೀಮತಿ ಶಾರದಾ ಅಪ್ಪಾಜಿ ಗೌಡ ಅವರು ಸೇರಿದಂತೆ ಮೂರು ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.












Click it and Unblock the Notifications