ಬಿಸಿಯೂಟಕ್ಕೆ ಇನ್ಮುಂದೆ ಚಪಾತಿ, ಪೂರಿ, ಪಾಯಸ

ಆದರೆ ವಾರಕ್ಕೊಮ್ಮೆ ಮಾತ್ರವೇ ಈ ಭಾಗ್ಯ ಪ್ರಾಪ್ತಿಯಾಗಲಿದೆ. ನ. 1ರಂದು ಸಾಂಕೇತಿಕವಾಗಿ ಕೆಲವೆಡೆ ಗೋಧಿ ತಿನಿಸು ಯೋಜನೆ ಆರಂಭವಾಗಿ, ಕ್ರಮೇಣ ಎಲ್ಲೆಡೆ ವಿಸ್ತರಿಸಲು ಸರ್ಕಾರ ಮುಂದಾಗಿದೆ.
ಮಧ್ಯಾಹ್ನ ಉಪಾಹಾರ ಯೋಜನೆಯಡಿ ಗೋಧಿ ಬಳಕೆ ಮಾಡಿ ಮಕ್ಕಳಿಗೆ ಚಪಾತಿ, ರೊಟ್ಟಿ, ಪೂರಿ, ಉಪ್ಪಿಟ್ಟು ಅಥವಾ ಪಾಯಸ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಿಸಿನ್ ರಾಜ್ಯದ ಜಿಲ್ಲಾ ಪಂಚಾಯ್ತಿಗಳಿಗೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ 27 ಜಿಲ್ಲೆಗಳಲ್ಲಿ ಗೋಧಿಯನ್ನು ಮಧ್ಯಾಹ್ನ ಬಿಸಿಯೂಟದಲ್ಲಿ ಪರಿಚಯಿಸಲಾಗುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಮದರಸ, ಸ್ಥಳೀಯ ಸಂಸ್ಥೆ ಮತ್ತು ಎನ್ ಸಿಎಲ್ ಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 10ನೇ ತರಗತಿಯ ಮಕ್ಕಳು ಗೋಧಿ ಊಟದ ಫಲಾನುಭವಿಗಳಾಗಿರುತ್ತಾರೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ತಲಾ 100 ಗ್ರಾಂ ಮತ್ತು 6 ರಿಂದ 10ನೇ ತರಗತಿ ಮಕ್ಕಳಿಗೆ ತಲಾ 150 ಗ್ರಾಂ ಪ್ರತಿದಿನ ಹಂಚಿಕೆ ಮಾಡಿ ದಾಸ್ತಾನು ಬಿಡುಗಡೆ ಮಾಡಲು ಸೂಚಿಸಲಾಗಿದೆ. ಅಗತ್ಯಬೀಳುವ ಹೆಚ್ಚುವರಿ ಅಡುಗೆ ಅನಿಲ ಸಿಲಿಂಡರ್ ವೆಚ್ಚಗಳನ್ನು ಅಕ್ಷರ ದಾಸೋಹ ಕಾರ್ಯಕ್ರಮ ಅನುದಾನದಡಿ ಭರಿಸಲು ತಿಳಿಸಲಾಗಿದೆ. ಅಡುಗೆಯವರಿಗೆ ಈ ವಿಚಾರದಲ್ಲಿ ಅಗತ್ಯ ತರಬೇತಿ ನೀಡಲು ಈಗಾಗಲೇ ಸೂಚಿಸಲಾಗಿದೆ. (ಚಿತ್ರ- ಪಿಟಿಐ)












Click it and Unblock the Notifications