ನಿಮಗೆ ಗುರಾಣಿಯಂತೆ ಬಳಕೆಯಾದ ಮುಖಂಡರ ಗತಿಯೇನು ಈಶ್ವರಪ್ಪನವರೆ?
ಬಿಜೆಪಿಯಲ್ಲಿ ಈಶ್ವರಪ್ಪನವರು ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದ್ದಾಗ ಬೆಂಬಲಕ್ಕೆ ನಿಂತ ಮುಖಂಡರ ಬೇಡಿಕೆಗಳು ಇನ್ನೂ ಈಡೇರಿಲ್ಲ. ದೆಹಲಿಯಲ್ಲಿ ಬಿಎಸ್ವೈ ಜತೆ ಸಂಧಾನದ ನಂತರ ಈಶ್ವರಪ್ಪನವರು ಅವರನ್ನೆಲ್ಲ ಮರೆತರೋ ಹೇಗೆ ಎಂದು ಮಾತನಾಡುವಂತಾಗಿದೆ
ಬೆಂಗಳೂರು, ಫೆಬ್ರವರಿ 28: ಕೆಎಸ್ ಈಶ್ವರಪ್ಪನವರಿಗೆ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನ ಸಿಕ್ಕಿತು. ಯಡಿಯೂರಪ್ಪನವರಿಗೆ ರಾಯಣ್ಣ ಬ್ರಿಗೇಡ್ ನ ಬಾಯಿ ಮುಚ್ಚಿಸಿದ ಸಮಾಧಾನ ಸಿಕ್ಕಿತು. ಈಗ ಇಬ್ಬರೂ "ನಾವಿಬ್ಬರೂ ಅಣ್ಣ-ತಮ್ಮಂದಿರು ಇದ್ದ ಹಾಗೆ" ಅಂತ ಹೇಳಿಕೊಂಡು ರಾಜ್ಯದಾದ್ಯಂತ ತಿರುಗಾಡುತ್ತಿದ್ದಾರೆ.
ಇಷ್ಟು ಬೆಳವಣಿಗೆ ಆಗಿದ್ದು ಇಬ್ಬರೂ ದೆಹಲಿಗೆ ಹೋಗಿಬಂದ ನಂತರ. ವರಿಷ್ಠರು ಇಬ್ಬರಿಗೂ ಕೆಲವು ಸೂಚನೆ ನೀಡಿದ ನಂತರ ರಾಜ್ಯ ಬಿಜೆಪಿಯಲ್ಲಿ ಒಂದಿಷ್ಟು ಅಸಮಾಧಾನ ತಮಣಿಯಾಗಿದೆ. ಆದರೆ ಈಶ್ವರಪ್ಪ ಅವರ ಹೋರಾಟದಲ್ಲಿ ಗುರಾಣಿಯಂತೆ ಬಳಕೆಯಾದ ಮುಖಂಡರು, ನೋಟಿಸ್ ಗಳನ್ನು ಪಡೆದು ಮೂಲೆಗುಂಪಾದವರ ಸ್ಥಿತಿ ಏನಾಗಿದೆ ಎಂಬುದು ಕುತೂಹಲಕರವಾಗಿದೆ.[ಮದ್ದು ಅರೆದು ಕಳಿಸಿದ ಮೇಲೆ ಮುದ್ದುಗರೆಯುತ್ತಿದ್ದಾರಾ ಬಿಎಸ್ವೈ,ಈಶು?]
ಏಳೆಂಟು ಜಿಲ್ಲೆಗಳಲ್ಲಿ ಆಯ್ಕೆ ಮಾಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬದಲಿಸಬೇಕು. ಕೊಟ್ಟಿದ್ದ ನೋಟಿಸ್ ವಾಪಸ್ ಪಡೆಯಬೇಕು ಎಂಬ ಮಾತು ಕೂಡ ಆಗಿತ್ತು. ಅದರಂತೆ ಆಗಿದೆಯಾ ಅಂತ ನೋಡಿದರೆ ಏನೇನೂ ಆದಂತೆ ಕಾಣೋದಿಲ್ಲ. ಈ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಅಂತಲೇ ನಾಲ್ಕು ಮಂದಿಯ ಸಮಿತಿ ಕೂಡ ರಚಿಸಲಾಗಿತ್ತು.

ಸಮತಿ ರಚನೆ
ಸಂತೋಷ್ ಜೀ, ಯಡಿಯೂರಪ್ಪ, ಮುರಳೀಧರ ರಾವ್, ಅರುಣ್ ಜೀ ಅವರದೊಂದು ಸಮಿತಿ ರಚಿಸಿ, ಸಮಸ್ಯೆಗಳಿಗೊಂದು ಪರಿಹಾರ ಸೂಚಿಸಲು ತಿಳಿಸಲಾಗಿತ್ತು. ಆದರೆ ಆ ಯಾವ 'ಹೋಮ್ ವರ್ಕ್' ಕೂಡ ಮಾಡಿಲ್ಲ ಎಂಬುದು ಗೊತ್ತಾಗುತ್ತಿದೆ. ಈಶ್ವರಪ್ಪನವರಿಗೆ ಶಿವಮೊಗ್ಗದಿಂದ ವಿಧಾನಸಭೆ ಟಿಕೆಟ್ ಸಿಗುವ ಭರವಸೆ ಕೊಟ್ಟು, ಸುಮ್ಮನಾಗಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಬೇಡಿಕೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ
ಈ ಮಾತಿಗೆ ತಕ್ಕ ಹಾಗೆ ಈಶ್ವರಪ್ಪನವರು ಸಹ ತಮ್ಮ ಬೆನ್ನಿಗೆ ನಿಂತವರ ಪರವಾದ ಬೇಡಿಕೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಬದಲಾವಣೆಯನ್ನೂ ಮಾಡಿಲ್ಲ. ನೋಟಿಸ್ ನೀಡಿದ್ದನ್ನು ವಾಪಸ್ ಪಡೆದಿಲ್ಲ ಎಂಬುದು ಪಕ್ಷದ ಮೂಲಗಳಿಂದಲೇ ಕೇಳಿಬರುತ್ತಿದೆ.

ಎಷ್ಟು ದಿನ ತಾಳ್ಮೆ
ನೋಟಿಸ್ ಪಡೆದವರು ಸಹ ಎಷ್ಟು ದಿನ ತಾಳ್ಮೆಯಿಂದ ಕಾಯಬೇಕು? ಆ ಪೈಕಿ ಬಹುತೇಕರು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದವರು ಹಾಗೂ ಆಯಾ ಭಾಗದ ಪ್ರಬಲ ನಾಯಕರು. ಅಂಥವರ ಬೇಡಿಕೆಗಳನ್ನು ಈಡೇರಿಸಬೇಕಾದ ಜವಾಬ್ದಾರಿ ಯಡಿಯೂರಪ್ಪ ಹಾಗೂ ಈಶ್ವರಪ್ಪನವರಿಗೆ ಸಮಾನವಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ವಿಶ್ವಾಸಕ್ಕೆ ತೆಗೆದುಕೊಳ್ತಾರಾ?
ಇನ್ನೇನು ಮುಂದಿನ ವರ್ಷವೇ ಚುನಾವಣೆ ಎಂದು ರಾಜ್ಯದಾದ್ಯಂತ ಓಡಾಡುತ್ತಿರುವ ಬಿಜೆಪಿ ನಾಯಕರು, ಈ ಹಿಂದೆ ಪಕ್ಷದಲ್ಲಾದ ಅಪಸವ್ಯದಿಂದ ಅಸಮಾಧಾನಗೊಂಡಿರುವ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.












Click it and Unblock the Notifications