ಸ್ಪೀಕರ್ ತೀರ್ಪನ್ನು ಸುಪ್ರೀಂ ಎತ್ತಿಹಿಡಿದರೆ ಅತೃಪ್ತರ ರಾಜಕೀಯ ಜೀವನದಲ್ಲಿ ಆಷಾಢ!
ಹದಿಮೂರು ಅತೃಪ್ತ ಶಾಸಕರ ರಾಜೀನಾಮೆಯ ವಿಚಾರದಲ್ಲಿ ಭಾನುವಾರ (ಜುಲೈ 28) ಸ್ಪೀಕರ್ ರಮೇಶ್ ಕುಮಾರ್ ತಮ್ಮ ತೀರ್ಪನ್ನು ಪ್ರಕಟಿಸದಿದ್ದರೂ, ಯಡಿಯೂರಪ್ಪನವರ ವಿಶ್ವಾಸಮತಯಾಚನೆಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.
ಸ್ಪೀಕರ್ ಅವರ ನಿರ್ಧಾರದಲ್ಲಿ ಕಾಣುವ ಒಂದು ಪ್ರಮುಖ ಅಂಶವೆಂದರೆ, ಯಡಿಯೂರಪ್ಪ ವಿಶ್ವಾಸಮತದಲ್ಲಿ ಪಾಸ್ ಆದರೆ, ಸ್ಪೀಕರ್ ಆಗಿ ರಮೇಶ್ ಕುಮಾರ್ ಮುಂದುವರಿಯುವ ಸಾಧ್ಯತೆ ಕಮ್ಮಿ. ಈಗಾಗಲೇ, ಬಿಜೆಪಿ ಸ್ಪೀಕರ್ ಅವರನ್ನು ಬದಲಾಯಿಸುವ ಬಗ್ಗೆ ಸುಳಿವನ್ನು ನೀಡಿದೆ.
LIVE: ಶಕ್ತಿಸೌಧದಲ್ಲಿ ವಿಶ್ವಾಸ, ನ್ಯಾಯಾಲಯದಲ್ಲಿ ಅತೃಪ್ತರ ಅವಿಶ್ವಾಸ
ಹಾಗಾಗಿ, ರಾಜ್ಯದ ಹಿತದೃಷ್ಟಿಯಿಂದ ಅನುಮೋದನೆ ಪಡೆಯಲೇ ಬೇಕಾಗಿರುವ ಧನವಿಧೇಯಕ ಮಸೂದೆ ಒಂದೆಡೆಯಾದರೆ. ಜೊತೆಗೆ, ಅತೃಪ್ತರ ರಾಜೀನಾಮೆಯನ್ನು ಇತ್ಯರ್ಥ ಪಡಿಸಬೇಕಾಗಿರುವುದೂ ಸ್ಪೀಕರ್ ರಮೇಶ್ ಕುಮಾರ್ ಜವಾಬ್ದಾರಿ.
ಎಲ್ಲಾ ಅತೃಪ್ತರು ಆಲ್ ಔಟ್: ಬಿಜೆಪಿಗೆ ಇದರಿಂದ ಅನುಕೂಲವೇ ಜಾಸ್ತಿ!
ಸ್ಪೀಕರ್ ನಿರ್ಧಾರದ ವಿರುದ್ದ ಅತೃಪ್ತರು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಲೇರುವುದಾಗಿ ಹೇಳಿದ್ದಾರೆ. ಸೋಮವಾರವೇ ಅವರುಗಳು ತಮ್ಮ ಅರ್ಜಿಯನ್ನು ಸಲ್ಲಿಸುವುದು ಬಹುತೇಕ ನಿಶ್ಚಿತ. ಆದರೆ, ಈ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದೇನಿಲ್ಲ. ಸ್ಪೀಕರ್ ತೀರ್ಪನ್ನು ಸುಪ್ರೀಂ ಎತ್ತಿಹಿಡಿದರೆ ಅತೃಪ್ತರ ರಾಜಕೀಯ ಜೀವನದಲ್ಲಿ ಆಷಾಢ!
ಕುಮಾರಸ್ವಾಮಿ ನಮ್ಮನ್ನು ಕೇರ್ ಮಾಡುತ್ತಿಲ್ಲ, ರೇವಣ್ಣ ಎಲ್ಲದಕ್ಕೂ ಮೂಗು ತೂರಿಸುತ್ತಾರೆ,
ಕುಮಾರಸ್ವಾಮಿ ನಮ್ಮನ್ನು ಕೇರ್ ಮಾಡುತ್ತಿಲ್ಲ, ರೇವಣ್ಣ ಎಲ್ಲದಕ್ಕೂ ಮೂಗು ತೂರಿಸುತ್ತಾರೆ, ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ ಎನ್ನುವ ಕಾರಣ ನೀಡಿ ಏನು ಅತೃಪ್ತರು ರಾಜೀನಾಮೆ ನೀಡಿದ್ದರೋ, ಅದು ಸತ್ಯವೇ ಆಗಿದ್ದಲ್ಲಿ, ಸ್ಪೀಕರ್ ತೀರ್ಮಾನ ಇವರ ನಿರ್ಧಾರಕ್ಕೆ ಬರಸಿಡಿಲು ಬಡಿದಂತೆ. ಯಾಕೆಂದರೆ, ಏನೋ ಮಾಡಲು ಹೋಗಿ, ಏನೋ ಆದಂತಾಗಿದೆ ಇವರ ಸದ್ಯದ ರಾಜಕೀಯ ಬದುಕು.
ಅತ್ತ ಮೈತ್ರಿಪಕ್ಷವೂ ಇಲ್ಲ, ಇತ್ತ ಬಿಜೆಪಿಯೂ ಇಲ್ಲ
ಅತ್ತ ಮೈತ್ರಿಪಕ್ಷವೂ ಇಲ್ಲ, ಇತ್ತ ಬಿಜೆಪಿಯೂ ಇಲ್ಲ, ಇನ್ನೇನಿದ್ದರೂ ಸರ್ವೋಚ್ಚ ನ್ಯಾಯಾಲಯ ಕೊಡುವ ತೀರ್ಪೇ ಅತೃಪ್ತ ಶಾಸಕರಿಗೆ ಸದ್ಯದ ಮಟ್ಟಿಗೆ ಆಶಾಕಿರಣ. ಸರ್ವೋಚ್ಚ ನ್ಯಾಯಾಲಯ ಸ್ಪೀಕರ್ ರಮೇಶ್ ಕುಮಾರ್ ತೀರ್ಪನ್ನು ಎತ್ತಿಹಿಡಿದರೆ, ಇನ್ನು ಹಾಲೀ ವಿಧಾನಸಭೆ ಮುಗಿಯುವ ಅವಧಿಯಾದ ಸುಮಾರು 46 ತಿಂಗಳು (ಅದಕ್ಕೂ ಮೊದಲು ಅಸೆಂಬ್ಲಿ ವಿಸರ್ಜನೆ ಆಗದಿದ್ದಲ್ಲಿ), ಇವರಿಗೆಲ್ಲಾ ರಾಜಕೀಯ ಸನ್ಯಾಸ. ತಾಲೂಕು ಪಂಚಾಯತಿ ಚುನಾವಣೆಯನ್ನೂ ಎದುರಿಸುವಂತಿಲ್ಲ.
17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!
ಹಿಂದಿನ ಸ್ಪೀಕರ್ ನಿರ್ಣಯವನ್ನು ಮತ್ತೆ ಪರಿಶೀಲಿಸುವ ಅವಕಾಶ ಕಾನೂನಿನಲ್ಲಿದೆ
ಸ್ಪೀಕರ್ ನೀಡಿರುವ ತೀರ್ಪನ್ನು ಕಾನೂನು ಪಂಡಿತರು ಹಲವು ವಿಧದಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಕೆಲವೊಂದು ತಜ್ಞರ ಪ್ರಕಾರ, ಹಾಲೀ ಸ್ಪೀಕರ್ ರಾಜೀನಾಮೆ ನೀಡಿ, ಹೊಸಬರು ಆ ಜಾಗಕ್ಕೆ ಆಯ್ಕೆಯಾದಾಗ, ಹಿಂದಿನ ಸ್ಪೀಕರ್ ನಿರ್ಣಯವನ್ನು ಮತ್ತೆ ಪರಿಶೀಲಿಸುವ ಅವಕಾಶವೂ ಕಾನೂನಿನಲ್ಲಿದೆ.
ಅತೃಪ್ತ ಶಾಸಕರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆಯಾ ಎನ್ನುವ ಗುಮಾನಿ
ಅತೃಪ್ತ ಶಾಸಕರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆಯಾ ಎನ್ನುವ ಗುಮಾನಿ ಹಿಂದಿನಿಂದಲೂ ಇದೆ. ಅದಕ್ಕೆ ಸರಿಯಾಗಿ ರಾಜರಾಜೇಶ್ವರಿ ನಗರದ ಶಾಸಕರಾಗಿದ್ದ ಮುನಿರತ್ನ ಕೂಡಾ, ನಮ್ಮನ್ನು ಕಾಂಗ್ರೆಸ್ಸಿಗರೇ ಪ್ರಚೋದಿಸಿರುವುದು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಅವರೆಲ್ಲರೂ ಬೆಂಗಳೂರಿಗೆ ವಾಪಸ್ ಆದ ಮೇಲೆ, ಇನ್ನಷ್ಟು ಸ್ಪಷ್ಟ ಚಿತ್ರಣ ಸಿಕ್ಕರೂ ಸಿಗಬಹುದು. ಏನೇ ಆದರೂ, ಸದ್ಯದ ಮಟ್ಟಿಗೆ ಅತೃಪ್ತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಕೇಂದ್ರ ಸಚಿವ ಸದಾನಂದ ಗೌಡರ ಪ್ರಕಾರ, ಸಭಾಧ್ಯಕ್ಷರಿಗೆ ಅಧಿಕಾರವಿದೆ
ಕೇಂದ್ರ ಸಚಿವ ಸದಾನಂದ ಗೌಡರ ಪ್ರಕಾರ, "ಸಭಾಧ್ಯಕ್ಷರಿಗೆ ಅಧಿಕಾರವಿದೆ. ಹೀಗಾಗಿ ಅವರು ಆದೇಶ ಮಾಡಿದ್ದಾರೆ. ಆದರೆ ಇದು ಸಮಂಜಸ ಹೌದೋ ಅಲ್ಲವೋ ಎಂದು ಪ್ರಶ್ನೆ ಮಾಡಲು ನ್ಯಾಯಾಲಯಕ್ಕೆ ಹೋಗುವ ಹಕ್ಕು ಶಾಸಕರಿಗೆ ಇದೆ. ಆದರೂ ಸಭಾಧ್ಯಕ್ಷರು ಶಾಸಕರನ್ನು ವಿಚಾರ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು.ಅದು ಮಾಡಿಲ್ಲ ಅನ್ನೋ ಲೋಪ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಆದೇಶ ನೋಡಿದರೆ ಈ ನಿರ್ಧಾರವನ್ನು ಯಾವುದೋ ಒತ್ತಡಕ್ಕೆ ಒಳಗಾಗಿ ಮಾಡಿದ್ದರೋ ಎನ್ನುವ ಸಂಶಯದ ವಾತಾವರಣ ಸೃಷ್ಟಿಯಾಗಿದೆ".