ಚುನಾವಣಾ ಫಲಿತಾಂಶ ದಿನ ಹೀಗೆ ಮಾಡಿ: ಫೇಸ್ಬುಕ್ ಅಭಿಯಾನ
ಬೆಂಗಳೂರು, ಮೇ 22: ಚುನಾವಣಾ ಫಲಿತಾಂಶದ ದಿನ ಬಂದೇಬಿಟ್ಟಿತು, ನಾಳೆ ಮಧ್ಯಾಹ್ನದ ವೇಳೆಗೆ ಬಹುತೇಕರ ರಾಜಕೀಯ ಭವಿಷ್ಯ ನಿರ್ಧಾರವಾಗಿಬಿಟ್ಟಿರುತ್ತದೆ. ಮತದಾನ ನಾಗರೀಕರ ಹಬ್ಬವಾದರೆ, ಫಲಿತಾಂಶ ಗೆದ್ದ ಪಕ್ಷದ ಕಾರ್ಯಕರ್ತರ ಹಬ್ಬ.
ಗೆದ್ದ ಕಾರ್ಯಕರ್ತರು, ಪಟಾಕಿ ಹೊಡೆದು, ಹಾರ ತುರಾಯಿಗಳನ್ನು ಹಾಕಿಕೊಂಡು, ಬಣ್ಣದ ಎರಚಿ, ಸಿಹಿ ಹಂಚಿಕೊಂಡು ಸಂಭ್ರಮಿಸುವುದು ಸಾಮಾನ್ಯ. ಸೋತವರದ್ದು ಇದ್ದೇ ಇದೆ ಪೇಚು ಮೋರೆ. ಈ ಬಾರಿ ದೂಷಿಸಲು ಇವಿಎಂ ಸಿಕ್ಕಿರುವುದು ಅವರುಗಳ ಪುಣ್ಯ.
ಆದರೆ ಚುನಾವಣೆ ಫಲಿತಾಂಶ ಒಂದು ದಿನ ಇದ್ದಂತೆ ಫೇಸ್ಬುಕ್ನಲ್ಲಿ ಅಭಿಯಾನವೊಂದು ಸಣ್ಣಗೆ ಹುಟ್ಟುತ್ತಿದೆ. ನಾಳೆ ಗೆದ್ದ ಅಭ್ಯರ್ಥಿಗಳ ವಿಜಯಾಚರಣೆ ಹೇಗಿದ್ದರೆ ಚೆಂದ ಎಂದು ಕೆಲವರು ತಂತಮ್ಮ ಫೇಸ್ಬುಕ್, ಟ್ವಿಟ್ಟರ್ ಗೋಡೆಗಳಲ್ಲಿ ಬರೆದುಕೊಂಡಿದ್ದಾರೆ.

ವಿಜಯಾಚರಣೆಯಲ್ಲಿ ಪಟಾಕಿ ಹೊಡೆಯದಿರುವುದು, ಗೆದ್ದ ಅಭ್ಯರ್ಥಿಗಳ ಪರ ಬೆಂಬಲಿಗರು ಯಾವುದಾದರೂ ಅನಾಥಾಶ್ರಮಕ್ಕೋ, ಕೊಳಗೇರಿಗೋ ಹೋಗಿ ಅನ್ನದಾನ ಮಾಡುವುದು, ಶಾಂತರೀತಿಯಿಂದ ಮೆರವಣಿಗೆಗಳನ್ನು ಮಾಡುವುದು, ಗೆದ್ದ ಅಭ್ಯರ್ಥಿಗಳ ಪರ ಬೆಂಬಲಿಗರು, ಗೆದ್ದ ಖುಷಿಯಲ್ಲಿ ಬಸ್ ನಿಲ್ದಾಣವನ್ನೋ, ಕಲ್ಯಾಣಿಯನ್ನೋ ಸ್ವಚ್ಛ ಮಾಡುವುದು ಹೀಗೆ ಪಟ್ಟಿ ಉದ್ದ ಇದೆ.
ಗೆದ್ದ ಅಭ್ಯರ್ಥಿಯ ಹೆಸರಲ್ಲಿ ರಕ್ತ ದಾನ ಶಿಬಿರ ಆಯೋಜಿಸುವುದು, ಗ್ರಂಥಾಲಯಗಳಿಗೆ ಉಚಿತ ಪುಸ್ತಕ ನೀಡುವುದು, ಕೆರೆಯ ಹೂಳೆತ್ತುವುದು, ಸರ್ಕಾರಿ ಶಾಲೆಗೆ ಬಣ್ಣ ಬಳಿಯುವುದು ಇನ್ನೂ ಹಲವು ಉತ್ತಮ ಕಾರ್ಯಗಳನ್ನು ಮಾಡಬಹುದೆಂದು ದೊಡ್ಡ ಪಟ್ಟಿಯನ್ನೇ ಫೇಸ್ಬುಕ್ನಲ್ಲಿ ಹಲವರು ಹಂಚಿಕೊಂಡಿದ್ದಾರೆ. ಇದಕ್ಕೆ ಉತ್ತಮ ಬೆಂಬಲವೂ ವ್ಯಕ್ತವಾಗಿದೆ. ಸೋತ ಅಭ್ಯರ್ಥಿಗಳನ್ನು ಗೆದ್ದ ಅಭ್ಯರ್ಥಿಗಳು ಭೇಟಿಯಾಗಿ ಸಾಂತ್ವನ ಹೇಳುವುದೂ ನಾಳೆ ಮಾಡಬೇಕಾದ ಕೆಲಗಳಲ್ಲಿ ಒಂದು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications